ಹೊಸನಗರ ; ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಆಗ್ರಹಿಸಿ ಏಪ್ರಿಲ್ 5 ರಂದು ನಡೆದಿದ್ದ ಪಾದಯಾತ್ರೆ ನಿರೀಕ್ಷೆಗೂ ಮೀರಿ ಜನಮನ್ನಣೆಗೆ ಪಾತ್ರವಾಯಿತು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿಧಾನಸಭಾ ಮರುಸ್ಥಾಪನಾ ಹೋರಾಟ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳುಗಡೆ ಸಂತ್ರಸ್ಥರ ನಾಡು ಎನಿಸಿರುವ ಹೊಸನಗರ ತಾಲೂಕು ಮತ್ತೊಮ್ಮೆ ಕ್ಷೇತ್ರದ ಮಾನ್ಯತೆ ಪಡೆಯಬೇಕು. ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಸ್ಥಳೀಯ ಪ್ರತಿನಿಧಿಗಳಿಂದ ಮಾತ್ರ ಪರಿಹಾರ ಸಾಧ್ಯ ಎನ್ನುವ ಉದ್ದೇಶದಿಂದ ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ನಗರದಿಂದ ರಿಪ್ಪನ್ಪೇಟೆವರೆಗೆ ಕೈಗೊಂಡ ಪಾದಯಾತ್ರೆ ಯಶಸ್ವಿಯಾಗಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿದಂತೆ, ಶಾಸಕರು, ಮಾಜಿ ಶಾಸಕರು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಠಾಧೀಶರು, ಧರ್ಮಗುರುಗಳು, ವರ್ತಕರು ಸೇರಿದಂತೆ ಜನಸಾಮಾನ್ಯರು ಸಹಾ ಈ ಹೋರಾಟದಲ್ಲಿ ಸಕ್ರಿಯರಾದರು. ಪಕ್ಷಾತೀತವಾಗಿ ನಡೆದ ಪಾದಯಾತ್ರೆ, ಸಮಾವೇಶ ಸಂಘಟನೆಗೆ ಇನ್ನಷ್ಟು ಬಲ ಹಾಗೂ ಉತ್ಸಾಹ ತಂದಿದೆ. ಪಾದಯಾತ್ರೆಯ ಯಶಸ್ಸಿಗಾಗಿ ನೂರಾರು ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ್ದಾರೆ. ಕ್ಷೇತ್ರಕ್ಕಾಗಿನ ನಮ್ಮ ಆಗ್ರಹ ಸಂಸತ್ತಿನಲ್ಲಿಯೂ ಪ್ರತಿಧ್ವನಿಸಿರುವುದು ಹೋರಾಟದ ತೀವ್ರತೆಗೆ ಸಾಕ್ಷಿಯಾಗಿದೆ. ಕ್ಷೇತ್ರ ರಚನೆ ಆಗುವ ವರೆಗೂ ಈ ಭಾಗದ ಜನರ ಆಗ್ರಹ ನಿರಂತರವಾಗಿ ಮಂದುವರೆಯಲಿದೆ ಎಂದರು.
ಸಂಸತ್ತಿನಲ್ಲಿ ವಿಧೇಯಕ ಅನುಮೋದನೆಗೊಳ್ಳುವ ನಿರೀಕ್ಷೆಯಿತ್ತು. ಆದರೆ ಮುಂದೆ ಕೇಂದ್ರ ಸರಕಾರ ಇದೇ ಅವಧಿಯಲ್ಲಿ ವಿಧೇಯಕವನ್ನು ಮತ್ತೊಮ್ಮೆ ಮಂಡಿಸುವ ವಿಶ್ವಾಸವಿದೆ. ಸರ್ವಪಕ್ಷಗಳ ಒಮ್ಮತದೊಂದಿಗೆ ವಿಧೇಯಕ ಅನುಮೋದನೆಗೊಂಡಲ್ಲಿ ಹೊಸನಗರ ಕ್ಷೇತ್ರ ರಚನೆಯ ಹಾದಿ ಸುಗಮವಾಗಲಿದೆ ಎಂದರು.
ಹೋರಾಟ ಸಮಿತಿಯ ಪದಾಧಿಕಾರಿ ಎನ್.ಆರ್.ದೇವಾನಂದ ಹಾಗೂ ಸುರೇಶ್ ಸ್ವಾಮಿರಾವ್ ಮಾತನಾಡಿದರು. ಸಂಚಾಲಕ ಎಚ್.ಬಿ.ಚಿದಂಬರ್, ಪ್ರಮುಖರಾದ ಪ್ರಹ್ಲಾದ್, ಜಯನಗರ ಗುರು, ಎಂ.ಪಿ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





