ಕೋಡೂರು-ಬೇಹಳ್ಳಿ ಸಂಪರ್ಕ ರಸ್ತೆಯಲ್ಲಿ 11 ಕೆ.ವಿ. ವಿದ್ಯುತ್ ಲೈನ್ ಮೇಲೆ ಉರುಳಿದ ಮರ – ವಾರವಾದರೂ ತೆರವುಗೊಳಿಸದ ಮೆಸ್ಕಾಂ ಇಲಾಖೆ
ರಿಪ್ಪನ್ಪೇಟೆ: ಸಮೀಪದ ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇಹಳ್ಳಿ – 24ನೇ ಮೈಲಿಕಲ್ಲು ಸಂಪರ್ಕದ ರಸ್ತೆ ಅಂಚಿನಲ್ಲಿ 11 ಕೆ.ವಿ. ವಿದ್ಯುತ್ ಲೈನ್ (Current Line) ಮೇಲೆ ಅಕೇಶಿಯಾ ಮರವೊಂದು (Tree) ಉರುಳಿ ಬಿದ್ದು ವಾರಗಳಾದರೂ ಕೂಡಾ ಮೆಸ್ಕಾಂ (Mescom) ಇಲಾಖೆಯವರು ತೆರವುಗೊಳಿಸದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಗಾಳಿ ಮಳೆಯಿಂದಾಗಿ ಕೋಡೂರು ಬಳಿಯ ಬೇಹಳ್ಳಿ ಅಕೇಶಿಯಾ ಪ್ಲಾಂಟೆಷನ್ನಲ್ಲಿನ ಮರವೊಂದು ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದಿದ್ದು ಈ ಬಗ್ಗೆ ಮೆಸ್ಕಾಂ ಇಲಾಖೆಯವರ ಗಮನಕ್ಕೆ ತಂದರೂ ಕೂಡಾ ತೆರವುಗೊಳಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಬೆಂಗಳೂರಿನ ಬಳಿಯಲ್ಲಿ ಇದೇ ರೀತಿಯಾಗಿ ವಿದ್ಯುತ್ ಲೈನ್ ಹರಿದು ತಾಯಿ, ಮಗು ಸಾವನ್ನಪ್ಪಿರುವ ಘಟನೆ ಜನಮಾನಸದಲ್ಲಿ ಮಾಸದೇ ಇದ್ದರೂ ಇಲ್ಲಿನ ಮೆಸ್ಕಾಂ ಇಲಾಖೆಯವರು ಬೇಜವಾಬ್ದಾರಿಯಿಂದಾಗಿ ಮೊತ್ತೊಂದು ಅವಘಡ ಸಂಭವಿಸುವುದೋ ಎಂಬ ಭಯ ಸಾರ್ವಜನಿಕರನ್ನು ಕಾಡುವಂತಾಗಿದೆ.
ಇನ್ನಾದರೂ ಮೆಸ್ಕಾಂ ಇಲಾಖೆಯವರು ಎಚ್ಚೆತ್ತುಕೊಂಡು 11 ಕೆ.ವಿ.ಲೈನ್ ಮೇಲೆ ಉರುಳಿ ಬಿದ್ದಿರುವ ಅಕೇಶಿಯಾ ಮರವನ್ನು ತೆರವುಗೊಳಿಸುವರೇ ಕಾದು ನೋಡಬೇಕಾಗಿದೆ.