ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4.21 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ
ತರೀಕೆರೆ : ಲೋಕಸಭೆ ಚುನಾವಣೆ (Loksabha Election) ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮಗಳ ನಿಯಂತ್ರಣಕ್ಕೆ ಜಿಲ್ಲಾದ್ಯಂತ ಗಡಿ ಭಾಗಗಳಲ್ಲಿ ಚುನಾವಣಾಧಿಕಾರಿಗಳ ತಂಡ ಮಂಗಳವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಾಹನದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 4.21 ಕೋಟಿ ರೂ. ಮೌಲ್ಯದ ಚಿನ್ನಾ, ವಜ್ರ, ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತರೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಸಿ.ಹಳ್ಳಿ ಚೆಕ್ಪೋಸ್ಟ್ ನಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಕ್ಯಾಂಪರ್ ಸರಕು ಸಾಗಣೆ ವಾಹನವನ್ನು ಮಂಗಳವಾರ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ತಪಾಸಣೆ ಮಾಡಿದ್ದು, ಈ ವೇಳೆ 4 ಕೋಟಿ ಮೌಲ್ಯದ 6 ಕೆಜಿ 586 ಗ್ರಾಂ ಚಿನ್ನಾಭರಣ, 2.47 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣಗಳು ಹಾಗೂ 17.47 ಲಕ್ಷ ರೂ. ಮೌಲ್ಯದ 1ಕೆಜಿ 71ಗ್ರಾಂ ವಜ್ರಾಭರಣಗಳು ಪತ್ತೆಯಾಗಿದೆ.
ಈ ಆಭರಣಗಳಿಗೆ ಸೂಕ್ತ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಚಿನ್ನಾ, ಬೆಳ್ಳಿ, ವಜ್ರದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ವ್ಯವಸ್ಥಾಪಕ ಗೋಪಾಲ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.