ಸಾರ್ವಜನಿಕವಾಗಿ ಬಟಾ ಬಯಲಾದ ಕಾಂಗ್ರೆಸ್ ಮುಖಂಡರ ನಡುವಿನ ಮುಸುಕಿನ ಗುದ್ದಾಟ
ಚಿಕ್ಕಮಗಳೂರು: ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಕಾರ್ಯಕರ್ತರ ಸಭೆ ನಡೆಯುವ ಸಮಯದಲ್ಲಿ ಪಕ್ಷದ ಮುಖಂಡರ ನಡುವಿನ ಮುಸುಕಿನ ಗುದ್ದಾಟ ಸಾರ್ವಜನಿಕವಾಗಿ ಬಟಾ ಬಯಲಾಗಿದೆ.
ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ವೇದಿಕೆಯಲ್ಲಿ ಕೂರದೆ ಕಾರ್ಯಕರ್ತರ ಸಾಲಿನಲ್ಲಿ ಕುಳಿತುಕೊಂಡಿದ್ದರು. ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ತಮ್ಮನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಗೆ ಸಹಾ ಕರೆದಿಲ್ಲ ಎಂದು ಬೇಸರಗೊಂಡು ಮುನಿಸಿಕೊಂಡು ವೇದಿಕೆ ಹತ್ತದೆ ಕುಳಿತಿದ್ದರು. ಈ ವೇಳೆ ಶಾಸಕ ಎಚ್.ಡಿ ತಮ್ಮಯ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಎಷ್ಟೇ ಪ್ರಯತ್ನ ಮಾಡಿದರೂ ಗಾಯತ್ರಿ ಶಾಂತೇಗೌಡ ವೇದಿಕೆಗೆ ಬರಲಿಲ್ಲ ಈ ವೇಳೆ ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ತಾವೇ ಅವರ ಬಳಿ ಹೋಗಿ ಕರೆದುಕೊಂಡು ಬರಬೇಕಾಯಿತು. ಆದರೆ ಗಾಯತ್ರಿ ಮುನಿಸಿಗೆ ಬೇರೆಯದ್ದೆ ಕಾರಣ ಇದೆ ಎಂದು ಹೇಳಲಾಗುತ್ತಿದೆ.
ಲೋಕಸಭೆ ಚುನಾವಣೆ ವೇಳೆ ಈ ರೀತಿಯ ಬೆಳವಣಿಗೆ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದು ಒಂದೆಡೆಯಾದರೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ.