ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆಯಲ್ಲಿ ಜನತಾದರ್ಶನ | ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ

0 356

ರಿಪ್ಪನ್‌ಪೇಟೆ: ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿ ವಿಧಿಸುತ್ತಿರುವ ಮನೆ ನಿವೇಶನ ಸಣ್ಣ ಕೈಗಾರಿಕೆಗಳು ಅಂಗಡಿಗಳ ಪರಿಷ್ಕೃತ ತೆರಿಗೆ ದುಪ್ಪಟ್ಟಾಗಿದ್ದು ಇದರಿಂದ ಕೂಲಿ ಕಾರ್ಮಿಕರು, ರೈತರು ಬಡಜನರಿಗೆ ಕಷ್ಟವಾಗುತ್ತಿದ್ದು ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತೆರಿಗೆ ಪರಿಷ್ಕರಣೆಯನ್ನು ಮರು ಪರಶೀಲನೆ ನಡೆಸಿ ಈ ಹಿಂದಿನ ಕಂದಾಯ ಪದ್ದತಿಯನ್ನೇ ಮರು ಜಾರಿಗೊಳಿಸಿ ತೆರಿಗೆ ಹೊರೆಯನ್ನು ತಪ್ಪಿಸಬೇಕೆಂದು ಸಾರ್ವಜನಿಕರ ಪರವಾಗಿ ಜೆ.ಎಸ್.ಚಂದ್ರಪ್ಪ ಶಾಸಕ ಗೋಪಾಲಕೃಷ್ಣ ಬೇಳೂರರಿಗೆ ಮನವಿ ಸಲ್ಲಿಸಿದರು.

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಅವರಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಆಯೋಜಿಸಲಾದ ಕೆರೆಹಳ್ಳಿ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಕಾರ್ಯಕ್ಕೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹರಿಸುವ ಕಾರ್ಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಸಾರ್ವಜನಿಕ ಕೃಷಿ ಜಮೀನಿಗೆ ರಸ್ತೆ, ಸಮರ್ಪಕ ವಿದ್ಯುತ್, ನಿವೇಶನ ರಹಿತರಿಂದ ನಿವೇಶನಕ್ಕಾಗಿ ಬೇಡಿಕೆ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ, 94 ಸಿ ಹಕ್ಕು ಪತ್ರ, ಗೃಹಜ್ಯೋತಿ, ಗೃಹಲಕ್ಷ್ಮಿ. ಅರಣ್ಯ ಭೂಮಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಬಿಡಾಡಿ ಜಾನುವಾರಗಳ ಸಮಸ್ಯೆ, ಬ್ಯಾಂಕ್ ಸಾಲ ವಿತರಣೆಯಲ್ಲಿ ತಾರತಮ್ಯ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಸಾರ್ವಜನಿಕರು ಶಾಸಕ ಗೋಪಾಲಕೃಷ್ಣ ಬೇಳೂರರಿಗೆ ಮನವಿ ಮೂಲಕ ಆಗ್ರಹಿಸಿದರು.

ಶಾಸಕರು ಸಾರ್ವಜನಿಕರ ಮನವಿಯನ್ನು ತಾಳ್ಮೆಯಿಂದಲೇ ಅರ್ಜಿಯನ್ನು ಒಂದೊಂದಾಗಿಯೇ ಪರಿಶೀಲಿಸಿ ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಗದಿತ ಕಾಲಮಿತಿಯೊಳಗೆ ಪರಿಹರಿಸುವಂತೆ ಸೂಚಿಸಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಗ್ರಾಮ ಪಂಚಾಯತ್ ನಿಂದ ವಿಧಿಸುತ್ತಿರುವ ಕಂದಾಯ ನಿಯಮವು ಸರ್ಕಾರದ ನಿಯಮವಾಗಿದ್ದು ಪರಿಷ್ಕರಣೆ ವಿಷಯವನ್ನು ಶಾಸನ ಸಭೆಯಲ್ಲಿ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.

ಜನಸ್ಪಂದನಾ ಸಭೆಯಲ್ಲಿ ತಹಶೀಲ್ದಾರ್ ರಶ್ಮಿ, ತಾಲ್ಲೂಕು ಪಂಚಾಯ್ತಿ ಇಓ ನರೇಂದ್ರಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗರಾಜ್, ಮೆಸ್ಕಾಂ ಎಇಇ ಚಂದ್ರಶೇಖರ್, ಪಿಡಬ್ಲೂಡಿ ಎಇಇ ಮಲ್ಲಿಕಾರ್ಜುನ, ಅರಸಾಳು ವಲಯ ಅರಣ್ಯಾಧಿಕಾರಿ ಬಾಬು ರಾಜೇಂದ್ರಪ್ರಸಾದ್, ಮೂಗುಡ್ತಿ ವನ್ಯಜೀವಿ ಅರಣ್ಯ ವಲಯ ಅರಣ್ಯಾಧಿಕಾರಿ ಪವನ್‌ಕುಮಾರ್, ಆಹಾರ ನಿರೀಕ್ಷಕ ನಾಗರಾಜ್, ಸಮಾಜ ಕಲ್ಯಾಣಾಧಿಕಾರಿ ಗೀತಾ, ಟಿ.ಹೆಚ್.ಓ ಡಾ.ಸುರೇಶ್, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಪಿಎಸ್‌ಐ ಪ್ರವೀಣ್ ಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಪಿಡಿಓ ಮಧುಸೂದನ್, ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿ ವರ್ಗ ಹಾಜರಿದ್ದರು.

ಪಿಂಚಣಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ
ರಿಪ್ಪನ್‌ಪೇಟೆ: ಸರ್ಕಾರ ಜಾರಿಗೊಳಿಸಲಾಗಿರುವ ಮಹತ್ವಾಕಾಂಕ್ಷಿ ಯೋಜನೆಯನ್ವಯ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಶಾಸಕ ರಾಜ್ಯ ಅರಣ್ಯ ಮತ್ತು ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕ್ರಷ್ಣ ಬೇಳೂರು ಮಂಜೂರಾತಿ ಪತ್ರವನ್ನು ವಿತರಣೆ ಮಾಡಿದರು.

ರಿಪ್ಪನ್‌ಪೇಟೆಯ ಗ್ರಾಮ ಪಂಚಾಯತ್ ಆವರಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಆಯೋಜಿಸಲಾದ ಕೆರೆಹಳ್ಳಿ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಿಂಚಣಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿ, ವಿಧವೆಯರು ಮತ್ತು ಅಂಗವಿಕಲ ಚೇತನರು ಮತ್ತು ವಯೋವೃದ್ದರಿಗಾಗಿ ಜಾರಿಗೊಲಿಸಲಾದ ಈ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ನೀಡುವುದು ಅಗತ್ಯವಾಗಿದೆ. ಅಲ್ಪ ಹಣದಿಂದ ತಮ್ಮ ತಿಂಗಳ ಮಾತ್ರೆ ಔಷಧಿ ಇನ್ನಿತರ ಸಣ್ಣ ಪುಟ್ಟ ಖರ್ಚಿಗಾಗುವುದೆಂದು ಹೇಳಿ ಅಧಿಕಾರಿಗಳು ಅಂತವರನ್ನು ಕಛೇರಿಗೆ ಅಲೆದಾಡಿಸದೇ ಅರ್ಜಿ ಪಡೆದು ಮಂಜೂರು ಮಾಡುವ ಕೆಲಸ ಮಾಡಿ ಎಂದು ಸೂಚನೆ ನೀಡಿದರು.

ತಹಶೀಲ್ದಾರ್ ರಶ್ಮಿ, ಉಪತಹಶೀಲ್ದಾರ್ ಹುಚ್ಚರಾಯಪ್ಪ, ರೆವಿನ್ಯೂ ಇನ್ಸ್‌ಪೆಕ್ಟರ್ ಅಪ್ರೋಜ್, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಅಂಬಿಕಾ, ಶೋಭಾ, ಜಾಕೀರ್‌ಹುಸೇನ್, ಯೋಗೀಶ್ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!