ಹೊಂಬುಜದಲ್ಲಿ ಹೊಸವರ್ಷದ ಪ್ರಯುಕ್ತ ವಿಶೇಷ ಪೂಜೆ | ವಾತ್ಸಲ್ಯಮಯಿ ಸೌಹಾರ್ದ ವರ್ಷವಾಗಲಿ ನೂತನ ವರ್ಷ ; ಶ್ರೀಗಳು
ರಿಪ್ಪನ್ಪೇಟೆ : ಶಾಂತಿ-ನೆಮ್ಮದಿಯ ಸಂಘರ್ಷರಹಿತ ನೂತನ ವರ್ಷ 2024 ಎಂಬ ಶುಭ ಭಾವನೆ ಮೂಡಬೇಕು. ಜನವರಿ 1ರಂದು ಶುಭ ಸಂಕಲ್ಪ ಮಾಡುವ ಮೂಲಕ ನವವರ್ಷಾಚರಣೆ ನವೋಲ್ಲಾಸ ತರಲಿ. ಸರ್ವರೂ ತಮ್ಮ ತಮ್ಮ ಪರಿಸರದ, ನಾಡಿನ, ರಾಷ್ಟ್ರದ ಅಭ್ಯುದಯದ ಯೋಜನೆಗಳಿಗೆ ಸಹಕಾರ ನೀಡಬೇಕು. ಆಂತರಿಕವಾಗಿ ಭಾರತೀಯರಾದ ನಾವು ಸೌಹಾರ್ದಯುತ ದಿನಚರಿಗೆ ಬದ್ಧರಾಗಬೇಕು. ನೂತನ ವರ್ಷ 2024ರಲ್ಲಿ ಸರ್ವರೂ ವೈಯುಕ್ತಿಕರಾಗಿ ಯಶಸ್ಸಿನತ್ತ ಮುನ್ನಡೆಯುವ ಸದ್ಭಾವನೆಯ ದಾರಿಯನ್ನು ಅನುಸರಿಸಬೇಕು ಎಂದು ಹೊಂಬುಜ ಜೈನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.
ವಾಸ್ತವ ವಿದ್ಯಾಮಾನದಲ್ಲಿ ಉತ್ತಮ ವಿದ್ಯಾಭ್ಯಾಸಕ್ಕಾಗಿ ಶ್ರೇಷ್ಠ ಗುಣಮಟ್ಟದ ಶಿಕ್ಷಣಾಲಯಗಳಲ್ಲಿ ವಿದ್ಯಾರ್ಜನೆ ಮಾಡಿ ವಿಶ್ವದಲ್ಲಿ ರಾಷ್ಟ್ರವನ್ನು ಅಗ್ರಪಂಕ್ತಿಯಲ್ಲಿ ಮನ್ನಣೆ ದೊರೆಯಲಿ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಕೃಷಿ-ಕ್ಷೇತ್ರಗಳಲ್ಲಿ ಯಶಸ್ಸು ಲಭಿಸುವಂತಾಗಲೆಂದು ಅಪೇಕ್ಷಿಸುತ್ತಾ ಅಹಿಂಸಾತ್ಮಕ ವಾತ್ಸಲ್ಯಮಯಿ ಜೀವನ ಧ್ಯೇಯವೇ ಭಾರತೀಯ ಮಾನವ ಧರ್ಮ ಎಂದು ಹರಸಿದ್ದಾರೆ.
ಸಾವಿರಾರು ಭಕ್ತರು ತಮಿಳುನಾಡು, ಮಹಾರಾಷ್ಟ್ರ, ಗುಜರಾತ, ದಿಲ್ಲಿ, ಮಧ್ಯಪ್ರದೇಶ, ಉತ್ತರಪ್ರದೇಶ, ಹೊರರಾಜ್ಯಗಳಿಂದ ಆಗಮಿಸಿದ್ದರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.