Shivamogga | ರಾಗಿಗುಡ್ಡದಲ್ಲಿ ಗಲಭೆ ಪ್ರಕರಣ ; ನಾಲ್ವರು ಪೊಲೀಸರ ತಲೆದಂಡ

0 275

ಶಿವಮೊಗ್ಗ : ರಾಗಿಗುಡ್ಡದಲ್ಲಿ ಈದ್‌ಮಿಲಾದ್ ಮೆರವಣಿಗೆ ಗಲಾಟೆ ನಿಯಂತ್ರಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಸೇರಿದಂತೆ ನಾಲ್ವರನ್ನು ಸೇವೆಯಿಂದ ಅಮಾನತುಗೊಳಿಸಿ ದಾವಣಗೆರೆ ಪೂರ್ವ ವಲಯದ ಐಜಿಪಿ ಕೆ. ತ್ಯಾಗರಾಜನ್ ಆದೇಶಿಸಿದ್ದಾರೆ.


ಅ.1ರಂದು ಬೆಳಗ್ಗೆ ರಾಗಿಗುಡ್ಡದಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್’ ವಿಚಾರಕ್ಕೆ ಉಂಟಾದ ಗಲಾಟೆ ರಾತ್ರಿ ಮೆರವಣಿಗೆ ವೇಳೆ ತೂರಾಟದ ಸ್ವರೂಪ ಪಡೆದಿತ್ತು. ಗಲಾಟೆ ನಿಯಂತ್ರಿಸಲು ಸ್ವತಃ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಅವರೇ ಲಾಠಿ ಲಾರ್ಜ್ ಮಾಡಿದ್ದರು. ಬಳಿಕ ನಿಷೇಧಾಜ್ಞೆ ಜಾರಿಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು.

ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 25ಕ್ಕೂ ಅಧಿಕ ಕೇಸ್‌ಗಳು ದಾಖಲಾಗಿದ್ದು, 65ಕ್ಕೂ ಅಧಿಕ ಜನರನ್ನು ಬಂಧಿಸಲಾಗಿತ್ತು. ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಜೈಲಿಗೂ ಕೆಲವರನ್ನು ಸ್ಥಳಾಂತರಿಸಲಾಗಿತ್ತು. 10ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಘಟನೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಘಟನೆ ನಡೆದು ವಾರದ ಬಳಿಕ ಗಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಅಭಯ್‌ಪ್ರಕಾಶ್ ಹಾಗೂ ಸಿಬ್ಬಂದಿಗಳಾದ ಕಾಶಿನಾಥ, ರಂಗನಾಥ ಮತ್ತು ಶಿವರಾಜ್ ಅವರನ್ನು ಎಸ್ಪಿ ಮಿಥುನ್‌ಕುಮಾರ್ ಅಮಾನತು ಮಾಡಿದ್ದಾರೆ.

ನಿಷೇಧಾಜ್ಞೆ ಮುಂದುವರಿಕೆ:

ರಾಗಿಗುಡ್ಡದಲ್ಲಿ ಗಲಾಟೆ ನಡೆದು ವಾರ ಕಳೆದಿದ್ದು ಇದೀಗ ಶಾಂತಿನಗರ, ರಾಗಿಗುಡ್ಡ ಬಡಾವಣೆಗೆ ಮಾತ್ರ ನಿಷೇಧಾಜ್ಞೆ ಮುಂದುವರಿಸಿ ಡಾ. ಆರ್. ಸೆಲ್ವಮಣಿ ಆದೇಶಿಸಿದ್ದಾರೆ.


ಅಮಾನತಿಗೆ ಆಕ್ಷೇಪ
ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಸಮರ್ಥವಾಗಿ ಕೆಲಸ ನಿರ್ವಹಿಸಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಶ್ರಮವಹಿಸಿದ್ದರು ಅದರಲ್ಲೂ ಪೊಲೀಸ್ ಅಧಿಕಾರಿ ಅಭಯ್‌ಪ್ರಕಾಶ್ ಮತ್ತು ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದಾರೆ. ಅವರನ್ನು ಅಮಾನತು ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ಷೇಪ ಮತ್ತು ಆಕ್ರೋಶ ಕೇಳಿಬರುತ್ತಿದೆ.

Leave A Reply

Your email address will not be published.

error: Content is protected !!