ಹೊಸನಗರ ಪ.ಪಂ. ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪನವರಿಗೆ ಬೀಳ್ಕೊಡುಗೆ
ಹೊಸನಗರ: ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಯಾಗಿ ಸುಮಾರು ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸಿ ಈಗ ಸೊರಬ ಪುರಸಭೆಗೆ ವರ್ಗಾವಣೆಗೊಂಡಿರುವ ಟಿ. ಬಾಲಚಂದ್ರಪ್ಪನವರನ್ನು ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಬೀಳ್ಕೊಡುಗೆ ಸಮಾರಂಭವನ್ನು ಪಟ್ಟಣ ಪಂಚಾಯತಿ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲಚಂದ್ರಪ್ಪ, ಸುಮಾರು ನಾಲ್ಕು ವರ್ಷಗಳಿಂದ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ ಪಟ್ಟಣ ಪಂಚಾಯತಿ ಅಧ್ಯಕ್ಷ, ಸದಸ್ಯರುಗಳು ಹಾಗೂ ಪಟ್ಟಣ ಪಂಚಾಯತಿಯ ಸಾರ್ವಜನಿಕರು ನನ್ನನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದಾರೆ. ಇವರ ಋಣ ನನ್ನ ಮೇಲಿದೆ. ಸರ್ಕಾರಿ ಅಧಿಕಾರಿ ಎಂದ ಮೇಲೆ ಒಂದು ಊರು ಬಿಟ್ಟು ಇನ್ನೊಂದು ಊರಿಗೆ ಹೋಗುವುದು ಸರ್ವೆ ಸಾಮಾನ್ಯ. ಸರ್ಕಾರದ ಆಜ್ಞೆ ಪಾಲಿಸಲೇಬೇಕು ನಿಮ್ಮನೆಲ್ಲ ಬಿಟ್ಟು ಹೋಗುತ್ತಿರುವುದು ದುಃಖವಾಗುತ್ತದೆ. ಮುಂದಿನ ದಿನದಲ್ಲಿ ಪುನಃ ಹೊಸನಗರ ಪಟ್ಟಣ ಪಂಚಾಯಿತಿಗೆ ಬರಲು ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಗುರುರಾಜ್, ಗುಲಾಬಿ ಮರಿಯಪ್ಪ, ಸಿಂಥಿಯಾ, ಗಾಯಿತ್ರಿ ನಾಗರಾಜ್, ಶಾಹಿನ ಹಾಗೂ ಪಟ್ಟಣ ಪಂಚಾಯತಿಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.