ಹೊಸನಗರ ; ಮಳೆ ಅಬ್ಬರ ಜೋರು, ಕೈಕೊಟ್ಟ ಕರೆಂಟ್ !
ಹೊಸನಗರ: ಕಳೆದ ಕೆಲ ದಿನಗಳಿಂದ ಚುರುಕು ಕಾಣದ ಮಳೆ ಮಂಗಳವಾರದಿಂದ ತಾಲೂಕಿನಾದ್ಯಂತ ಭರ್ಜರಿಯಾಗಿ ಸುರಿಯುತ್ತಿದ್ದು ರೈತರು ಹೊಸ-ಗದ್ದೆಗಳತ್ತ ಮುಖ ಮೂಡಿದ್ದು ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ.
ನಿನ್ನೆ ಸಂಜೆಯಿಂದ ಮತ್ತಷ್ಟು ಮಳೆ ಜೋರಾಗಿ ಸುರಿಯುತ್ತಿದ್ದು ತಾಲ್ಲೂಕಿನ ಘಟ್ಟ ಪ್ರದೇಶವಾದ ನಗರ ಹೋಬಳಿ ಮತ್ತು ಹುಂಚ ಹೋಬಳಿಯಲ್ಲಿ ಶೀತಗಾಳಿಯೊಂದಿಗೆ ದೋ… ಎಂದು ಒಂದೇ ಸಮನೆ ಮಳೆ ಸುರಿಯುತ್ತಿದೆ. ತಾಲ್ಲೂಕಿನ ಜಲಾನಯನ ಪ್ರದೇಶವಾದ ಮಾಣಿ, ಯಡೂರು, ಸಾವೇಹಕ್ಲು, ಚಕ್ರಾ, ಹುಲಿಕಲ್ಲುವಿನಲ್ಲಿ ಮಳೆಯ ಬಿರುಸು ಹೆಚ್ಚಿದೆ.
ತಾಲ್ಲೂಕಿನ ಯಡೂರು, ಹುಲಿಕಲ್, ನಗರ, ನಿಟ್ಟೂರು, ಮಾಸ್ತಿಕಟ್ಟೆ, ಸಂಪೆಕಟ್ಟೆ, ಕಾರಣಗಿರಿ, ಸೊನಲೆ, ಕೋಡೂರು, ಹಿಲ್ಕುಂಜಿ, ತ್ರಿಣಿವೆ ಗರ್ತಿಕೆರೆ, ಹುಂಚ, ರಿಪ್ಪನ್ಪೇಟೆ ಭಾಗದಲ್ಲಿ ಉತ್ತಮ ಮಳೆ ಆಗಿದೆ.
ನಗರ ಹೋಬಳಿ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಜಲಾಶಯಗಳ ಒಳಹರಿವು ಹೆಚ್ಚುತ್ತಿದೆ. ಮಾಣಿ, ಸಾವೇಹಕ್ಲು, ಚಕ್ರಾ ಜಲಾಶಯಗಳ ನೀರಿನ ಮಟ್ಟ ಏರುತ್ತಿದೆ.
ತಾಲ್ಲೂಕಿನಲ್ಲಿ ಗಾಳಿ, ಮಳೆಯಿಂದಾಗಿ 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. 5 ವಿದ್ಯುತ್ ಪರಿವರ್ತಕಗಳಿಗೆ ಹಾನಿ ಆಗಿದೆ. ಗ್ರಾಮೀಣ ಭಾಗಗಳಲ್ಲಿ ಕಳೆದೆರಡು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.