ಹೋಟೆಲ್, ಅಂಗಡಿ ಮಾಲೀಕರ ಗಂಭೀರ ಆರೋಪ | ಲಂಚ ಕೊಡದ ಕಾರಣ ತೂಕ ಮತ್ತು ಅಳತೆ ಮಾಪನ ನವೀಕರಣ ತಿರಸ್ಕರಿಸಿದ ಅಧಿಕಾರಿಗಳು !?
ರಿಪ್ಪನ್ಪೇಟೆ: ವರ್ಷಕ್ಕೊಮ್ಮೆ ಸರ್ಕಾರ ತೂಕ ಮತ್ತು ಅಳತೆ ಮಾಪನಗಳನ್ನು ನವೀಕರಿಸಿ 250 ರೂ. ಫೀ ಯನ್ನು ಗಣಕೀಕೃತ ರಶೀದಿಯನ್ನು ನೀಡುತ್ತಾರೆ. ಇದರೊಂದಿಗೆ ಹೆಚ್ಚುವರಿಯಾಗಿ ಲಂಚದ ಹಣವನ್ನು ತೂಕ ಮತ್ತು ಅಳತೆ ಮಾಪನಗಳನ್ನು ನವೀಕರಿಸಲು ಕೊಡಬೇಕು ಇಲ್ಲವಾದರೆ ತಕ್ಕಡಿಗೆ ಮೊಹರು ಮಾಡುವುದಿಲ್ಲ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಹೇಳಿ ತಿರಸ್ಕರಿಸಿ ವಾಪಾಸ್ ಹೋದ ಘಟನೆಯೊಂದು ರಿಪ್ಪನ್ಪೇಟೆಯಲ್ಲಿ ನಡೆದಿರುವ ಬಗ್ಗೆ ಗಂಭೀರ ಆರೋಪವೊಂದು ಕೇಳಿಬಂದಿದೆ.
ಶಿವಮೊಗ್ಗ ರಸ್ತೆಯ ಜಯಪ್ರಕಾಶ ಹೋಟೆಲ್ ಮತ್ತು ಜನರಲ್ ಸ್ಟೋರ್ಸ್ ನಲ್ಲಿ ತೂಕ ಮತ್ತು ಅಳತೆ ಇತ್ಯಾದಿಗಳನ್ನು ಸತ್ಯಾಪನೆ ಮಾಡಿದ್ದೇನೆ ಮತ್ತು ಮೊಹರು ಮಾಡಿದ್ದೇನೆ ಎಂಬ ಬಗ್ಗೆ ಸರ್ಕಾರದ ಗಣಕೀಕೃತ ರಶೀದಿಯನ್ನು ನೀಡಿ ಉಳಿದಂತೆ ಹೆಚ್ಚುವರಿ ಲಂಚ ಹಣ ನೀಡಬೇಕು ಇಲ್ಲವಾದರೆ ನಿಮ್ಮ ತೂಕ ಮತ್ತು ಅಳತೆ ಮಾಪನವನ್ನು ನವೀಕರಣ ಮಾಡಲಾಗುವುದಿಲ್ಲ ಎಂದು ಹೇಳಿದರು. ನಾನು ಕೊಡುವುದಿಲ್ಲ ಎಂದು ಹೇಳಿದಾಗ ನಾವು ನವೀಕರಿಸುವುದಿಲ್ಲ ಎಂದು ಹೇಳಿ ವಾಪಾಸ್ ಹೋದರು ಎಂದು ಜಯಪ್ರಕಾಶ ಹೋಟೆಲ್ನ ಡಿ.ಎಸ್.ಷಣ್ಮುಖಪ್ಪ ಆರೋಪಿಸಿದ್ದಾರೆ.
ಮಳೆ ಇಲ್ಲದೆ ಬೆಳೆಯು ಸರಿಯಾಗಿ ಕೈಗೆ ಸಿಗದೆ ರೈತರು ಪೇಟೆ, ಪಟ್ಟಣಕ್ಕೆ ಬಾರದೆ ಇರುವುದರಿಂದ ವ್ಯಾಪಾರ ಸಹ ಕುಂಠಿತಗೊಂಡು ನಿತ್ಯ ಕುಟುಂಬದ ನಿರ್ವಹಣೆಯ ಕಷ್ಟಕರವಾಗಿರುವಾಗ ತೂಕ ಮತ್ತು ಅಳತೆ ಮಾಪನದವರು ತಕ್ಕಡಿ ನವೀಕರಣಕ್ಕಾಗಿ ಹೆಚ್ಚು ಹಣ ಕೇಳಿದರೆ ಕೂಡುವುದು ಹೇಗೆ ಸ್ವಾಮಿ ಎಂದು ಪರಿಪರಿಯಾಗಿ ಬೇಡಿದರೂ ಕೂಡ ಅಧಿಕಾರಿಗಳು ಹೆಚ್ಚುವರಿ ಲಂಚ ಹಣ ಕೊಡದಿದ್ದರೆ ತೂಕ ಮತ್ತು ಅಳತೆ ಸ್ಕೇಲ್ಗೆ ಮೊಹರು ಮಾಡುವುದಿಲ್ಲ ಎಂದು ಹೇಳಿ ವಾಪಾಸ್ ಹೋದರೆಂದು ಜಯಪ್ರಕಾಶ ಹೋಟೆಲ್ ಮಾಲೀಕ ಷಣ್ಮುಖಪ್ಪ ಮಾಧ್ಯಮದವರಿಗೆ ತಿಳಿಸಿದ್ದಾರೆ.