ಮದುವೆಯಾಗುವಂತೆ ಯುವಕನಿಂದ ಪದೇ ಪದೇ ಪೀಡನೆ ; ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿ !

0 56

ಶಿವಮೊಗ್ಗ; ಎಂಸಿಎ ವ್ಯಾಸಂಗ ಪೂರ್ಣಗೊಳಿಸುವ ಕನಸು ಹೊಂದಿದ್ದ ಯುವತಿಯೊಬ್ಬಳು ಈ ಕಾರಣಕ್ಕಾಗಿಯೇ ಮದುವೆ ಮುಂದೂಡಿಕೊಂಡು ಬಂದಿದ್ದು, ಆದರೆ ಈಕೆಯನ್ನು ಮದುವೆಯಾಗುವ ಇರಾದೆ ಹೊಂದಿದ್ದ ಸಂಬಂಧಿ ಯುವಕ ಮತ್ತವನ ಕುಟುಂಬಸ್ಥರು ಪದೇ ಪದೇ ಪೀಡನೆ ನೀಡಿದ್ದರಿಂದ ಮನನೊಂದು ವಿಷ ಸೇವಿಸಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಶಿವಮೊಗ್ಗದಲ್ಲಿ ಈ ಘಟನೆ ನಡೆದಿದ್ದು, ಮೂಲತಃ ಕಂಕನಹಳ್ಳಿಯವರಾದ ನಿರ್ಮಲಾಬಾಯಿ ಎಂಬವರು ಸುಮಾ ಎಂಬಾಕೆಯನ್ನು ದತ್ತು ಪಡೆದು ಸಾಕಿಕೊಂಡಿದ್ದರು. ಪತಿ ಮೃತಪಟ್ಟ ಬಳಿಕ ನಿರ್ಮಲ ಬಾಯಿ, ಸುಮಾ ಜೊತೆ ಶಿವಮೊಗ್ಗದ ಬೊಮ್ಮನಕಟ್ಟೆ ಬಿ ಬ್ಲಾಕ್ ನಲ್ಲಿ ವಾಸವಾಗಿದ್ದು, ಎರಡು ವರ್ಷಗಳ ಹಿಂದೆ ಕಂಕನಹಳ್ಳಿಯ ಪ್ರವೀಣ್ ಎಂಬಾತನ ಜೊತೆ ಸುಮಾ ಮದುವೆ ಮಾಡಲು ಪ್ರಸ್ತಾವನೆ ಬಂದಿತ್ತು.

ಆದರೆ ತಾನು ಎಂ ಸಿ ಎ ಪೂರ್ಣಗೊಳಿಸುವವರೆಗೂ ಮದುವೆಯಾಗುವುದಿಲ್ಲ ಎಂದು ಸುಮಾ ಮದುವೆಯನ್ನು ಮುಂದೂಡಿದ್ದರು. ಆದರೂ ಕೂಡ ಪ್ರವೀಣ್ ಮತ್ತವನ ಕುಟುಂಬ ಸದಸ್ಯರು ಪದೇ ಪದೇ ಶಿವಮೊಗ್ಗದ ಸುಮಾ ಮನೆಗೆ ಬಂದು ಮದುವೆಗೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಫೆಬ್ರವರಿ 9ರಂದು ಸಹ ಇವರು ಮನೆಗೆ ಬಂದಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದರಿಂದ ಮನನೊಂದ ಸುಮಾ ವಿಷ ಸೇವಿಸಿದ್ದರು.

ತೀವ್ರ ಅಸ್ವಸ್ಥಗೊಂಡಿದ್ದ ಸುಮಾಳನ್ನು ಶಿವಮೊಗ್ಗದ ಆಸ್ಪತ್ರೆಯಲ್ಲಿ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದು, ಇದೀಗ ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರವೀಣ್ ಮತ್ತವನ ಕುಟುಂಬ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.

Leave A Reply

Your email address will not be published.

error: Content is protected !!