ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ ; ಶಾಸಕ ಬೇಳೂರು ಗೋಪಾಲಕೃಷ್ಣ

0 443

ಹೊಸನಗರ : ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಈಡೇರಿಸುವ ಮೂಲಕ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.


ತಾಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟ್ಟೆಮಲ್ಲಪ್ಪದಲ್ಲಿ ಶುಕ್ರವಾರ ಜಲಜೀವನ್ ಮಿಷನ್ ಅಡಿಯಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗೆ ಅವರು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಹಿಂದೆ ರಾಜಕೀಯ ವಿರೋಧಿಗಳು ಗ್ಯಾರಂಟಿ ಯೋಜನೆಗಳ ಕುರಿತು ಅಪಹಾಸ್ಯ ಮಾಡಿದ್ದರು. ಆದರೆ ರಾಜ್ಯ ಸರಕಾರಿ ಈಗಾಗಲೇ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿದೆ. ತೀರಾ ಕಡಿಮೆ ಸಂಖ್ಯೆಯ ಜನತೆ ಇನ್ನೂ ಇದರ ಲಾಭ ಪಡೆಯಲು ಆಗದಿರಬಹುದು. ಆದರೆ ಒಟ್ಟಾರೆಯಾಗಿ ಯೋಜನೆಗಳು ಯಶಸ್ವಿಯಾಗಿದ್ದು, ಜನಮನ್ನಣೆಗೆ ಪಾತ್ರವಾಗಿದೆ.ಆರ್ಥಿಕವಾಗಿ ಹಿಂದುಳಿದ, ಅಸಂಘಟಿತ ವಲಯದ ಅದೆಷ್ಟೋ ಕುಟುಂಬಗಳಿಗೆ ಯೋಜನೆಗಳಿಂದ ಪ್ರಯೋಜನೆ ಪಡೆದಿರುವುದು ಸರಕಾರದ ಸಾಧನೆಯಾಗಿದೆ ಎಂದರು.


ಹೊಸನಗರ ತಾಲೂಕಿಗೆ ಮುಂದಿನ ವರ್ಷದ ಹೊತ್ತಿಗೆ ಕುಡಿವ ನೀರಿಗೆ ಪ್ರತ್ಯೇಕ ವ್ಯವಸ್ಥೆ ಜಾರಿಯಾಗಲಿದೆ. ಚಕ್ರಾನಗರದ ಜಲಾಶಯದಿಂದ ನೀರು ಸರಬರಾಜು ಮಾಡುವ ಕಾಮಗಾರಿ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ. ಇದೊಂದು ವರ್ಷ ನೀರಿನ ಸಮಸ್ಯೆ ಸ್ವಲ್ಪ ಸಮಸ್ಯೆಯಾಗಬಹುದು. ಜನತೆ ಕೊಂಚ ಸುಧಾರಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.


ಗ್ರಾಪಂ ಅಧ್ಯಕ್ಷ ಮಂಜುನಾಥ್ ಕೆ.ಆರ್. ಸದಸ್ಯ ವಾಟಗೋಡು ಸುರೇಶ್, ಬಗರ್‌ಹುಕುಂ ಸಮಿತಿ ಸದಸ್ಯೆ ಸಾಕಮ್ಮ ಮನೋಹರ ಮಾತನಾಡಿದರು.
ತಾಲೂಕು ಪಂಚಾಯಿತಿ ಇಓ ನರೇಂದ್ರಕುಮಾರ್, ತಹಸೀಲ್ದಾರ್ ರಶ್ಮಿ ಹಾಲೇಶ್ ಸದಸ್ಯರಾದ ಸಂತೋಷ್ ಮಳವಳ್ಳಿ, ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!