ಸೂಡಾ ಅಧ್ಯಕ್ಷರಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳ ಗುದ್ದಲಿ ಪೂಜೆ | ನಗರಾಭಿವೃದ್ಧಿ-ನಿವೇಶನ ನೀಡಲು ಕ್ರಮ ; ಹೆಚ್ ಎಸ್ ಸುಂದರೇಶ್

0 213

ಶಿವಮೊಗ್ಗ : ಸೂಡಾ ವತಿಯಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳನ್ನು ಅಭಿವೃದ್ದಿಸುವ ಹಾಗೂ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು.

ಇಂದು ಎಲ್‍ಬಿಎಸ್ ನಗರದ ಬೂಸ್ಟರ್ ಪಂಪ್‍ಹೌಸ್ ಹತ್ತಿರದ ಉದ್ಯಾನವನದಲ್ಲಿ ಸೂಡಾ ಬಡಾವಣೆ ಮತ್ತು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ 2023-24 ನೇ ಸಾಲಿನಲ್ಲಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಗರದ ವಿವಿಧ ಬಡಾವಣೆಗಳ ಜಂಕ್ಷನ್ ಅಭಿವೃದ್ದಿ, ರಸ್ತೆಗಳ ನಾಮಫಲಕ, ಉದ್ಯಾನವನ ಅಭಿವೃದ್ದಿ, ಸೇವಾ ರಸ್ತೆಗಳ ಅಭಿವೃದ್ದಿ, ಕಾಂಕ್ರೀಟ್ ಬಾಕ್ಸ್ ಚರಂಡಿ ನಿರ್ಮಾಣ ಸೇರಿದಂತೆ ರೂ.1702 ಲಕ್ಷಗಳ ಮೊತ್ತದ 34 ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದ್ದೇನೆ.

ನಗರಾಭಿವೃದ್ದಿ ಕುರಿತು ಸಾಕಷ್ಟು ಆಸಕ್ತಿ ಇದ್ದರೂ ಕೆಲವೊಮ್ಮೆ ಕಾನೂನು ತೊಡಕು, ಅನುದಾನದ ಸಮಸ್ಯೆಯಿಂದ ಹಿನ್ನಡೆಯಾಗುತ್ತದೆ. ಆದರೆ ಇದೀಗ ನಗರದ ವಿವಿಧೆಡೆ ಒಟ್ಟು ರೂ.1702 ಲಕ್ಷ ಮೊತ್ತದ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಉತ್ತಮವಾಗಿ, ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ಸೂಚಿಸಿದ್ದೇನೆ.

ಕಳೆದ 14 ವರ್ಷಗಳಿಂದ ಸೂಡಾ ನಿವೇಶನ ಹಂಚಿಕೆಯಾಗಿಲ್ಲ. ನಗರದ 10 ಕಿ.ಮೀ ವ್ಯಾಪ್ತಿಯಲ್ಲಿ ನಿವೇಶನ ಲಭ್ಯವಿಲ್ಲ. ಅದರಾಚೆ ರೈತರೊಂದಿಗೆ ಮಾತನಾಡಿ ನಿವೇಶನ ಸಿದ್ದಪಡಿಸಲು ಕ್ರಮ ವಹಿಸಲಾಗುವುದು. ಈಗಾಗಲೇ ಅಪಾರ್ಟ್‍ಮೆಂಟ್ ಯೋಜನೆ ಆರಂಭಿಸಲಾಗಿದೆ. ಊರುಗಡೂರು ಮತ್ತು ಜೆ ಹೆಚ್ ಪಟೇಲ್ ಬಡಾವಣೆಯಲ್ಲಿ ಯೋಜನೆ ಆರಂಭಿಸಲಾಗುತ್ತಿದೆ. ಊರುಗಡೂರಿನಲ್ಲಿ ಸುಮಾರು 500 ಕ್ಕು ಹೆಚ್ಚು ನಿವೇಶನವನ್ನು ಹಂಚಿಕೆ ಮಾಡಲು ಜೂನ್ ಮಾಹೆಯಲ್ಲಿ ಅರ್ಜಿ ಕರೆಯಲಾಗುವುದು ಎಂದ ಅವರು ಬಡಾವಣೆ ನಿವಾಸಿಗಳ ಆದಷ್ಟು ಬೇಡಿಕೆಗಳನ್ನು ಪೂರೈಸಲು ಪ್ರಯತ್ನಿಸುತ್ತೇನೆ. ಸೂಡಾ ಯೋಜನೆಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಬೇಕು ಎಂದರು.

ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಸೂಡಾ ಅಧ್ಯಕ್ಷರು ತಮ್ಮ ಮೊದಲ ಸಭೆಯಲ್ಲೇ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಕ್ರಮ ಕೈಗೊಂಡಿದ್ದಾರೆ. ನಾಳೆಯಿಂದಲೇ 34 ಕಾಮಗಾರಿಗಳ ಕೆಲಸ ಆರಂಭವಾಗಬೇಕು. ಗುಣಮಟ್ಟದೊಂದಿಗೆ ಕೆಲಸ ನಿರ್ವಹಣೆ ಮಾಡಬೇಕು. ನೀತಿ ಸಂಹಿತೆ ಜಾರಿಯಾಗುವುದರೊಳಗೆ ಕೆಲಸ ಆರಂಭವಾಗಬೇಕು. ನಗರಾಭಿವೃದ್ದಿ ವಿಷಯದಲ್ಲಿ ಎಂದಿಗೂ ರಾಜಕಾರಣ ಅಡ್ಡಿ ಬರದ ಹಾಗೆ ಶಿವಮೊಗ್ಗದಲ್ಲಿ ಕೆಲಸಗಳು ನಡೆಯುತ್ತಾ ಬಂದಿದೆ. ನಗರಾಭಿವೃದ್ದಿ ವಿಷಯದಲ್ಲಿ ಪಾಲಿಕೆ, ಸೂಡಾ ಮತ್ತು ಸರ್ಕಾರ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ ಎಂದರು.

ಮಾಜಿ ನಗರಸಭಾ ಸದಸ್ಯ ವಿಶ್ವಾಸ್ ಎಲ್ಲರನ್ನು ಸ್ವಾಗತಿಸಿ, ಎಲ್‍ಬಿಎಸ್ ನಗರದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು. ನಿವಾಸಿಗಳು ಮಾತನಾಡಿ, ಮಳೆಗಾಲದಲ್ಲಿ ರಾಜಾ ಕಾಲುವೆ ತುಂಬಿ ಕೆಲ ನಿವಾಸಗಳಿಗೆ ನೀರು ಹರಿದು ಬರುತ್ತದೆ. ಹಾಗೂ ರಾಜಾ ಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ಸಮಸ್ಯೆ ಉಂಟಾಗಿದೆ, ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಎಇಇ ಬಸವರಾಜಪ್ಪ, ಎಲ್‍ಬಿಎಸ್ ನಗರ ನಿವಾಸಿಗಳ ಸಂಘದ ಪಂಚಪ್ಪ, ನಿವಾಸಿಗಳು, ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!