ಹೃದಯ ರಕ್ತನಾಳ ಛಿದ್ರಗೊಳ್ಳುವಿಕೆ ತೊಂದರೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
ಶಿವಮೊಗ್ಗ: ಅಪರೂಪದ ಮತ್ತು ಕಷ್ಟಕರವಾದ ಹೃದಯ ರಕ್ತನಾಳ ಛಿದ್ರಗೊಳ್ಳುವಿಕೆಯ ತೊಂದರೆಗೆ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ಡಾ. ಬಾಲಸುಬ್ರಮಣಿ, 55 ವರ್ಷದ ಶಿರಸಿಯ ಮಹಿಳೆಯೊಬ್ಬರು ಎದೆ ನೋವಿನಿಂದಾಗಿ ಆಸ್ಪತ್ರೆಗೆ ಬಂದಿದ್ದರು. ಅವರನ್ನು ತಪಾಸಣೆ ಮಾಡಿದಾಗಿ ಅತ್ಯಂತ ಅಪಾಯಕಾರಿಯಾದ ಹೃದಯ ತೊಂದರೆ ಕಂಡುಬಂದಿತ್ತು. ಹೃದಯದ ರಕ್ತನಾಳ ಛಿದ್ರಗೊಂಡಿತ್ತು. ಹೀಗೆ ಹೃದಯ ಹರಿದ ತೊಂದರೆಗಳು ತುಂಬಾ ವಿರಳ. ವರ್ಷಕ್ಕೆ ಒಂದೋ ಎರಡೋ ಇರುತ್ತವೆ ಅಷ್ಟೆ. ಈ ರೋಗಿ 30 ನಿಮಿಷ ಬದುಕಲೂ ಕಷ್ಟವಾಗುತ್ತದೆ. ಆದರೆ ಸರಿಯಾದ ಸಮಯಕ್ಕೆ ಅವರು ನಮ್ಮ ಆಸ್ಪತ್ರೆಗೆ ಬಂದರು ಎಂದರು.
ಹೈ ರಿಸ್ಕ್ ಶಸ್ತ್ರ ಚಿಕಿತ್ಸೆಗೆ ನಮ್ಮ ಆಸ್ಪತ್ರೆಯ ತಂಡ ಸಿದ್ಧವಾಯಿತು. ರೋಗಿಗಳ ಪೋಷಕರಿಗೆ ಸಮಸ್ಯೆ ತಿಳಿಸಲಾಯಿತು. ವಿವಿಧ ಪರೀಕ್ಷೆ ನಡೆಸಲಾಯಿತು. ಕೊನೆಗೆ ಆಸ್ಪತ್ರೆಯ ವೈದ್ಯರೆಲ್ಲಾ ಸೇರಿ ಸತತ 12 ಗಂಟೆಗಳ ದೀರ್ಘ ಕಾಲದ ಶಸ್ತç ಚಿಕಿತ್ಸೆ ನಡೆಸಲಾಯಿತು. ನಾಲ್ಕು ದಿನವೂ ಕೃತಕ ಉಸಿರಾಟ ನೀಡಲಾಗಿತ್ತು. ಇದು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವೈದ್ಯರ ಸಾಹಸದ ಮತ್ತು ಯಶಸ್ವೀ ಚಿಕಿತ್ಸೆಯಾಗಿದೆ. ಇಂತಹ ಅಪರೂಪದ 8 ಕೇಸುಗಳು ಇದುವರೆಗೆ ನಮ್ಮ ಬಂದಿದ್ದು, ಅದರಲ್ಲಿ ಮೂವರನ್ನು ಉಳಿಸಲು ಆಗಲಿಲ್ಲ. ಇನ್ನು 5 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.
ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆಯ ಪತಿ ಗಜಾನನ ವಾಲೇಕರ್ ಮಾತನಾಡಿ, ನಮ್ಮ ಪತ್ನಿಗೆ ನಾರಾಯಣ ಆಸ್ಪತ್ರೆಯ ವೈದ್ಯರು ಪುನರ್ಜನ್ಮ ನೀಡಿದ್ದಾರೆ. ಹಣ ನಮಗೆ ಮುಖ್ಯವಾಗಿರಲಿಲ್ಲ. ಆಸ್ಪತ್ರೆಯ ಇಡೀ ವೈದ್ಯರ ತಂಡ ಸಂಪೂರ್ಣ ಸಹಕಾರ ನೀಡಿದ್ದಾರೆ. ಆಪರೇಷನ್ ಆಗುವವರೆಗೂ ನಮಗೆ ನಂಬಿಕೆ ಇರಲಿಲ್ಲ. ವೈದ್ಯರ ಶ್ರಮ ವ್ಯರ್ಥವಾಗಲಿಲ್ಲ. ದೇವರ ದಯದಿಂದ ನನ್ನ ಪತ್ನಿ ಈಗ ಆರೋಗ್ಯವಾಗಿ ಪತ್ರಿಕಾಗೋಷ್ಠಿಗೂ ಬರುವಂತಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಶ್ರೀವತ್ಸ ನಾಡಿಗೆ, ಡಾ. ಚಕ್ರವರ್ತಿ, ಡಾ. ಸಂದೀಪ್, ಶಸ್ತ್ರ ಚಿಕಿತ್ಸೆಗೆ ಒಳಗಾದ ಪ್ರಿಯಾ ಗಜಾನನ ವಾಲೇಕರ್ ಇದ್ದರು.