ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ದಾಳಿ ; ಮಹಿಳೆ ಬಲಿ
ಶಿವಮೊಗ್ಗ : ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿಯಾದ ದುರ್ಘಟನೆ ನಡೆದಿದೆ.
ಯಶೋದಮ್ಮ(40) ಮೃತಪಟ್ಟ ದುರ್ದೈವಿಯಾಗಿದ್ದು, ಹೊಲದಲ್ಲಿ ಕಳೆ ಕೀಳಲು ಹೋದಾಗ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮಹಿಳೆಯ ಮೇಲೆ ಹಿಂಬದಿಯಿಂದ ದಾಳಿ ಮಾಡಿದ ಚಿರತೆ ಸುಮಾರು 60 ಮೀಟರ್ ಎಳೆದುಕೊಂಡು ಹೋಗಿದೆ. ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ನಂತರ ಆಕೆಯ ಕತ್ತು ಹಾಗೂ ಪೃಷ್ಠದ ಭಾಗವನ್ನು ತಿಂದು ಹಾಕಿದೆ. ಸಂಜೆ ವೇಳೆಗೆ ಈ ದುರ್ಘಟನೆ ಬೆಳಕಿಗೆ ಬಂದಿದೆ.
ಯಶೋದಮ್ಮ ಒಬ್ಬರೆ ಹೊಲದಲ್ಲಿ ಇದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದು ಮಹಿಳೆ ಸಾವಿನಿಂದ ಗ್ರಾಮಸ್ಥರರು ಆತಂಕದಲ್ಲಿದ್ದಾರೆ.
ಚಿರತೆ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ತೀವ್ರ ಅಕ್ರೋಶ ಹೊರಹಾಕಿದ್ದಾರೆ.