Hosanagara | ವಿಕಲಚೇತನ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭಾಗವಹಿಸುವ ನಿರೀಕ್ಷೆ

0 323

ಹೊಸನಗರ: ಮುಂಬರುವ ಜನವರಿ 24ರಲ್ಲಿ ಪಟ್ಟಣದ ನೆಹರು ಕ್ರೀಡಾಂಗಣದಲ್ಲಿ ತಾಲೂಕಿನ ಹಲವು ಸಮಾನಮನಸ್ಕರ ಬಳಗವು ಪಕ್ಷಾತೀತವಾಗಿ ಆಯೋಜಿಸಲು ಉದ್ದೇಶಿಸಿರುವ ‘ವಿಕಲ ಚೇತನ ಸಾಧಕರಿಗೆ ಸನ್ಮಾನ’ ಕಾರ್ಯಕ್ರಮದ ಅತಿಥಿಗಳಾಗಿ ವೇದಿಕೆ ಹಂಚಿಕೊಳ್ಳುವ ಇಂಗಿತವನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ವ್ಯಕ್ತಪಡಿಸಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕ ತ್ರಿಣಿವೆ ಜಯರಾಮ ಶೆಟ್ಟಿ ತಿಳಿಸಿದ್ದಾರೆ.


ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದ ಅವರು, ತಾಲೂಕಿನ ಒಟ್ಟು 30 ಗ್ರಾಮ ಪಂಚಾಯತಿಗಳ ಪೈಕಿ, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಫಲಾಪೇಕ್ಷೆ ರಹಿತ ಸಮಾಜಮುಖಿ ಕಾರ್ಯನಿರ್ವಹಿಸುತ್ತಿರುವ ಓರ್ವ ವಿಕಲಚೇತನ ಸಾಧಕನನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಸಾಧನೆಗೆ ಮತ್ತಷ್ಟು ಸ್ಪೂರ್ತಿ ತುಂಬುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.


ಈ ಸಂಬಂಧ ಅವರು ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡ, ಶಾಸಕ ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ, ಸಹಕಾರಿ ಧುರೀಣ ಆರ್.ಎಂ. ಮಂಜುನಾಥ ಗೌಡ ಸೇರಿದಂತೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಲವು ಗಣ್ಯರ ಸಂಪರ್ಕ ಸಾಧಿಸಿದ್ದು, ಅವರಿಂದಲೂ ಸಹ ಕಾರ್ಯಕ್ರಮ ಆಯೋಜನೆಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಇದಕ್ಕಾಗಿ ಪಕ್ಷಾತೀತ ಸಮಿತಿಯೊಂದು ಶೀಘ್ರವೇ ರಚನೆಗೊಳ್ಳಲಿದ್ದು, ಸಾಧಕರ ಸನ್ಮಾನದ ಬಳಿಕ ಹಲವಾರು ಮನೋರಂಜನೆ ಕಾರ್ಯಕ್ರಮ ನಡೆಸುವ ಇರಾದೆ ತಮಗಿದೆ ಎಂದಿದ್ದಾರೆ.


ಶೀಘ್ರದಲ್ಲೇ ಕಾರ್ಯಕ್ರಮದ ದಿನಾಂಕ ನಿಗದಿಗೊಳ್ಳಲಿದ್ದು, ಆ ಬಳಿಕವಷ್ಟೇ ಕಾರ್ಯಕ್ರಮ ಆಯೋಜನೆಗೆ ಚಾಲನೆ ದೊರೆಯಲಿದೆ ಎಂಬುದಾಗಿ ತ್ರಿಣಿವೆ ಜಯರಾಮ ಶೆಟ್ಟಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!