Shivamogga | ದೀಪಾವಳಿ ಸಂಭ್ರಮಕ್ಕೆ ಮೆರಗು ತಂದ ಅಂಟಿಗೆ ಪಂಟಿಗೆ

0 643

ಶಿವಮೊಗ್ಗ : ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವತಿಯಿಂದ ಭಾನುವಾರ ಮಲೆನಾಡಿನ (Malenadu) ವಿಶಿಷ್ಟ ಕಲೆಯಾದ ಅಂಟಿಗೆ ಪಂಟಿಗೆಯ ಜ್ಯೋತಿಯು ಶಿವಮೊಗ್ಗ (Shivamogga) ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ತೆರಳಿ ದೀಪ ನೀಡಿ ಅಂಟಿಕೆ ಪಂಟಿಕೆ (Antige Pantige) ಪದಗಳ ಮೂಲಕ ಶುಭ ಹಾರೈಸಿತು.

ಆದಿಚುಂಚನಗಿರಿಯ ಕಾಲಭೈರವೇಶ್ವರ ದೇವಸ್ಥಾನದಿಂದ‌ ಸಂಜೆ ಹೊರಟ ಅಂಟಿಕೆ ಪಂಟಿಕೆಯ ಎರಡು ತಂಡಗಳನ್ನು ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಸಂಭ್ರಮದಿಂದ ಬರಮಾಡಿಕೊಂಡರು. ನಗರದ ಸುಮಾರು 80 ಕ್ಕು ಹೆಚ್ಚು ಮೆನೆಗಳಿಗೆ ಅಂಟಿಕೆ ಪಂಟಿಕೆ ತಂಡ ಬೆಳಗಿನ ಜಾವದವರೆಗೂ ತೆರಳಿತು.

‘ದೀಪೋಳಿ ಎನ್ನಿರಣ್ಣಾ ..ಈ ಊರ ದೇವ್ರಿಗೆ’ , ‘ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ಣೆಲಿ ಕಣ್ನಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ’ ಎನ್ನುತ್ತಾ ಶುಭಹಾರೈಸಿದರು. ಅಂಟಿಕೆ ಪಂಟಿಕೆಯ ತಂಡ ತರುವ ಜ್ಯೋತಿ ಮನೆ ಪ್ರವೇಶಿಸಿದಾಗ ಮನೆಯವರು ದೀಪಕ್ಕೆ ಎಣ್ಣೆ ಎರೆದು ಪೂಜೆ ಸಲ್ಲಿಸುತ್ತಾರೆ. ಹೀಗೆ ದೀಪ ಬೆಳಗಿದ ಮನೆಯಲ್ಲಿ ಮುಂದಿನ ವರ್ಷದವರೆಗೆ ಯಾವುದೇ ಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆಯಿದೆ.

ಕಾರ್ಯಕ್ರಮವನ್ನು ಪೊಲೀಸ್ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಉದ್ಘಾಟಿಸಿ ತಂಡದೊಂದಿಗೆ ಹೆಜ್ಜೆ ಹಾಕಿದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ, ಪದಾಧಿಕಾರಿಗಳಾದ ಎಂ.ಎಂ.ಸ್ವಾಮಿ, ಭೈರಾಪುರ ಶಿವಪ್ಪಮೇಷ್ಟು, ದೇವರಾಜ್, ಬಿ.ಟಿ.ಅಂಬಿಕಾ, ಮಹಾದೇವಿ, ಪಿ.ಕೆ.ಸತೀಶ್, ಶ್ರೀನಿವಾಸ ನಗಲಾಪುರ, ಸುಶೀಲ‌ ಷಣ್ಮುಗಂ, ಸಿ.ಎಂ.ನೃಪತುಂಗ, ಲಲಿತಮ್ಮ, ಲೀಲಾವತಿ, ವಾಸಪ್ಪಗೌಡ, ಯೋಗೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!