Shivamogga | ಮುಂಜಾಗ್ರತೆ ವಹಿಸುವ ಮೂಲಕ ಅನೇಕ ಅಪರಾಧ ತಡೆಯಬಹುದು ; ಅನಿಲ್ ಕುಮಾರ್ ಭೂಮರೆಡ್ಡಿ

0 193

ಶಿವಮೊಗ್ಗ : ಸಾರ್ವಜಿಕರು ಮುಂಜಾಗ್ರತೆ ವಹಿಸುವ ಮೂಲಕ ಮುಂಬರುವ ಅನೇಕ ಅಪರಾಧಗಳನ್ನು ತಡೆಯಬಹುದು. ಆದ್ದರಿಂದ ಯಾರೇ ಅಪರಿಚಿತರೊಂದಿಗೆ ವ್ಯವಹರಿಸುವಾಗ ಒಂದು ಕ್ಷಣ ಯೋಚಿಸಿ ಎಚ್ಚರಿಕೆಯಿಂದ ಇರಬೇಕೆಂದು ಎಎಸ್‍ಪಿ ಅನಿಕುಮಾರ್ ಭೂಮರೆಡ್ಡಿ ತಿಳಿಸಿದರು.

ಜಿಲ್ಲಾ ಪೊಲೀಸ್ ಮತ್ತು ಜಯನಗರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಚಾರಣೆ ಅಂಗವಾಗಿ ಡಿ.20 ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅವಸರವೇ ಅನಾಹುತಕ್ಕೆ ಕಾರಣವಾಗುತ್ತದೆ. ಇತ್ತೀಚೆಗೆ ಸರಗಳ್ಳತನ, ಮನೆಗೆ ಬಂದು ಬಂಗಾರ ಇತರೆ ಬೆಲೆ ಬಾಳುವ ವಸ್ತುವನ್ನು ಪಾಲಿಶ್ ಮಾಡುವುದಾಗಿ ಹೇಳಿ ಬರುವುದು ಸೇರಿದಂತೆ ಅನೇಕ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಅಪರಾಧದ ಸ್ವರೂಪ ಕೂಡ ಹೊಸ ಆಯಾಮದಲ್ಲಿ ಬದಲಾಗುತ್ತಿದೆ. ವರ್ಚುವಲ್ ಜಗತ್ತಿನ ಮೂಲಕ ಸೈಬರ್ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಆದ್ದರಿಂದ ಜನರು ಅತಿ ಎಚ್ಚರಿಕೆಯಿಂದ ಇರಬೇಕು.

ಸಾರ್ವಜನಿಕರು ಒಂದಕ್ಕಿಂತ ಹೆಚ್ಚು ದಿವಸ ಮನೆಗೆ ಬೀಗಹಾಕಿಕೊಂಡು ಹೋಗುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‍ನಲ್ಲಿ ಇಡುವುದು. ಮನೆಯಿಂದ ಹೊರಗೆ ಹೋಗುವಾಗ ಬಾಗಿಲಿಗೆ ಟಾಪ್‍ಲಾಕ್‍ನ್ನು ಹಾಕುವ ಬದಲು ಇಂಟರ್‌ ಲಾಕ್ ಮಾಡುವುದು ಹಾಗೂ ಹಾಲಿನವರಿಗೆ, ಪೇಪರ್ ಹಾಕುವವರಿಗೆ ಮನೆಯಿಂದ ಹೊರಗೆ ಹೋಗುವಾಗ ಪೇಪರ್ ಮತ್ತು ಹಾಲು ಹಾಕದಂತೆ ತಿಳಿಸುವುದು. ಮನೆಯ ಕಿಟಕಿಯ ಪಕ್ಕದಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡದಂತೆ ಎಚ್ಚರ ವಹಿಸುವುದು. ಹೆಂಗಸರು ಒಬ್ಬಂಟಿಯಾಗಿ ರಸ್ತೆಯಲ್ಲಿ ಓಡಾಡುವ ಸಮಯದಲ್ಲಿ ಕುತ್ತಿಗೆಯಲ್ಲಿನ ಬಂಗಾರದ ಆಭರಣಗಳು ಹೊರಗೆ ಎದ್ದುಕಾಣದಂತೆ ಮುಂಜಾಗ್ರತೆ ವಹಿಸುವುದು.

ಸಾರ್ವಜನಿಕರು ತಮ್ಮ ದಾಖಲಾತಿ ಹಾಗೂ ಮೊಬೈಲ್ ಇನ್ನಿತರೆ ವಸ್ತುಗಳನ್ನು ಕಳೆದುಕೊಂಡಾಗ ಗೂಗಲ್ ಪ್ಲೇಸ್ಟೋರ್‌ನಲ್ಲಿ ಕೆಎಸ್‍ಪಿ ಆಪ್ ಡೌನ್‍ಲೋಡ್ ಮಾಡಿಕೊಂಡು ಇ-ಲಾಸ್ಟ್ ಕಂಪ್ಲೇಂಟ್ ರಿಜಿಸ್ಟರ್ ಮಾಡಿಕೊಳ್ಳುವುದು. ಯಾವುದೇ ತುರ್ತು ಸಮಯದಲ್ಲಿ 112 ನಂಬರ್‍ಗೆ ಕರೆ ಮಾಡುವುದು. ರಸ್ತೆ ಸಂಚಾರದ ಸಮಯದಲ್ಲಿ ರಸ್ತೆ ಹಾಗೂ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು. ಜಾನುವಾರುಗಳನ್ನು ಸಾಕಿದ್ದಲ್ಲಿ ಅವುಗಳ ರಕ್ಷಣೆಗೆ ಕೊಟ್ಟಿಗೆ ಸುತ್ತ ಬೆಳಕಿನ ಹಾಗೂ ಮನೆಯಲ್ಲಿ ನೋಡಿದರೆ ಕಾಣುವ ಹಾಗೆ ನೋಡಿಕೊಳ್ಳುವುದು. ಸಾಧ್ಯವಾದಷ್ಟು ತಮ್ಮ ಮನೆಗಳಿಗೆ ಹಾಗೂ ಅಂಗಡಿಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು.

ಬ್ಯಾಂಕ್ ಅಧಿಕಾರಿ, ಬ್ಯಾಂಕ್ ಮ್ಯಾನೇಜರ್ ಎಂದು ತಿಳಿಸಿ ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ಫೋನ್ ಮಾಡಿ. ಕಾರ್ಡ್ ನಂ/ಸಿವಿವಿ ನಂ/ಓಟಿಪಿ ಅನ್ನು ಪಡೆದು ಮೋಸ ಮಾಡುವವರ ಬಗ್ಗೆ ಎಚ್ಚರ ಇರಲಿ, ಯಾರಿಗೂ ಯಾವುದೇ ಕಾರಣಕ್ಕೂ ಓಟಿಪಿ ಅನ್ನು ನೀಡಬೇಡಿ. ಪ್ಲೇಸ್ಟೋರ್‌ನಲ್ಲಿ ಸಿಗುವ ಆಪ್‍ಗಳೆಲ್ಲ ಅಧಿಕೃತವಲ್ಲ. ನಕಲಿ ಆಪ್‍ಗಳ ಮೂಲಕ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ, ಆನ್‍ಲೈನ್ ಲೋನ್ ತೆಗೆಯುವುದಾಗಲಿ, ಸೋಲಾರ್/ಎನರ್ಜಿ/ಅಮೇಜಾನ್ ಮುಂತಾದ ಮೋಸದ ಆಪ್ ಬಳಕೆ ಮೂಲಕ ಹಣ ಹೂಡಿಕೆ ಮಾಡಿ ಮೋಸ ಹೋಗಬೆಡಿ.

ಕೌನ್ ಬನೇಗಾ ಕರೋಡ್‍ಪತಿ/ ಬಾರಿ ಮೊತ್ತದ ಲಾಟರಿ/ ದಿನಪತ್ರಿಕೆ/ ಟಿವಿ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿ ಆಮಿಷಗಳ ಮೂಲಕ ಟ್ರಾನ್ಸ್‌ಪೋರ್ಟ್ ಫೀ ಇತ್ಯಾದಿ ಫೀಗಳೆಂದು ಅವರ ಖಾತೆಗಳಿಗೆ ಹಣ ಹಾಕಿಸಿಕೊಳ್ಳುವ ವಂಚಕರಿಂದ ದೂರವಿರಿ. ಸಾರ್ವಜನಿಕರು ಸೈಬರ್ ಕ್ರೈಂಗೆ ಸಂಬಂಧಪಟ್ಟ ದೂರುಗಳನ್ನು ಆನ್‍ಲೈನ್ ಮೂಲಕವೂ ದಾಖಲಿಸಬಹುದಾಗಿದ್ದು ವೆಬ್‍ಸೈಟ್ ವಿಳಾಸ : www.cybercrime.gov.in ಮತ್ತು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ನಂ.112/08182-261413, ಸಿ.ಇ.ಎನ್.ಕ್ರೈಂ ಪೊಲೀಸ್ ಠಾಣೆ ನಂ.08182-261426/9480803383 ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!