ನ.26 ರಂದು ಮಳಲಿ ಸಂಸ್ಥಾನ ಮಠದಲ್ಲಿ ಶ್ರೀ ಗುರು ಪಟ್ಟಾಧಿಕಾರ ರಜತ ಮಹೋತ್ಸವ – ಕಾರ್ತಿಕ ದೀಪೋತ್ಸವ ಸಮಾರಂಭ
ರಿಪ್ಪನ್ಪೇಟೆ : ತೀರ್ಥಹಳ್ಳಿ (Thirthahalli) ತಾಲೂಕಿನ ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಹಾಸಂಸ್ಥಾನ ಮಳಲಿ ಮಠದಲ್ಲಿ (Malali Mutt) ನ. 26 ರಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳವರ ಶ್ರೀ ಗುರುಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭ ಜರುಗುವುದು.
ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷರಾದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು, ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸುವರು. ಬಂಕಾಪುರ ಅರಳೆಲೆ’ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸದಾಶಯ ನುಡಿಯುವರು.
ಮಳಲಿಯ ಡಾ.ಗುರುನಾಗಭೂಷಣ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಮಾಜಿ ಸಚಿವ, ಶಾಸಕ ಆರಗ ಜ್ಞಾನೇಂದ್ರ ‘ಸುದ್ದಿ ಸಂಪದ’ ಬಿಡುಗಡೆಗೊಳಿಸುವರು. ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ, ದಿನದರ್ಶಿಕೆ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ, ಹರತಾಳು ಹಾಲಪ್ಪ, ಡಾ.ಆರ್.ಎಂ.ಮಂಜುನಾಥಗೌಡ, ಬಿ.ಎ.ಇಂದೂಧರಗೌಡ್ರು, ಎಸ್.ಎಸ್. ಜ್ಯೋತಿಪ್ರಕಾಶ, ಎನ್.ಜೆ.ರಾಜಶೇಖರ, ಕೆ.ಆರ್.ಪ್ರಕಾಶ, ಡಾ.ಡಿ.ವಿ.ರೇವಣೆಪ್ಪಗೌಡರು. ಬಿ.ಯುವರಾಜ್, ವೀರೇಶ್ ಆಲವಳ್ಳಿ, ದೇವೇಂದ್ರಗೌಡ್ರು ನವಟೂರು, ವಿರೂಪಾಕ್ಷ ಸಾಗರ, ಸಚಿನಗೌಡ ಗರ್ತಿಕೆರೆ ಭಾಗವಹಿಸುವರು.
ರಿಪ್ಪನ್ಪೇಟೆಯ ಆರ್.ಎಸ್.ಪ್ರಶಾಂತ ಪ್ರಾಸ್ತಾವಿಕ ಮಾತನಾಡುವರು. ಸುಳ್ಯದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು.
ಶಾಂತಪುರದ ಶಿವಾನಂದ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ದುಗ್ಗಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಣಮಾಪುರದ ಡಾ.ಸೋಮಶೇಖರ ಶಿವಾಚಾರ್ಯರು, ಹಾರನಹಳ್ಳಿಯ ಶಿವಯೋಗಿ ಶಿವಾಚಾರ್ಯರು, ಸಿಂಧಗಿಯ ಶಿವಯೋಗಿ ವೀರರಾಜೇಂದ್ರ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಹಲವಾರು ಗಣ್ಯರಿಗೆ ಸೇವಾಕರ್ತರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸುವರು.
ಪ್ರಾಥಃಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ವೀರಭದ್ರೇಶ್ವರ ಸ್ವಾಮಿಗೆ, ಆದಿಗುರು ನಾಗಾರ್ಜುನ ಶಿವಾಚಾರ್ಯರಾದಿಯಾಗಿ ಎಲ್ಲಾ ಲಿಂಗೈಕ್ಯ ಶಿವಾಚಾರ್ಯರ ಕರ್ತೃ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ ಹಾಗೂ ಮಹಾಮಾತೆ ಶ್ರೀ ಚೌಡೇಶ್ವರಿ ದೇವಿಗೆ ಸಹಸ್ರ ಕುಂಕುಮಾರ್ಚನೆ, ಹೋಮ ಹವನಾದಿಗಳು ನಡೆಯುತ್ತವೆ. ಶ್ರೀ ಗುರು ಪಟ್ಟಾಧಿಕಾರದ ರಜತ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.
ಬೆಳಿಗ್ಗೆ 8.30ಕ್ಕೆ ಲೋಕಕಲ್ಯಾಣಾರ್ಥವಾಗಿ ಪ್ರದೇಶಾಭಿವೃದ್ಧಿಗಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ನಡೆಯುವುದು. ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ಮಳಲಿ ಮಠದ ಪ್ರಕಟಣೆಯಲ್ಲಿ ತಿಳಿಸಿದೆ.