ಭೂಮಿಯ ಒಡಲಿನ ಭತ್ತ ‘ದಿವ್ಯ ಪ್ರಸಾದ’ ; ಹೊಂಬುಜ ಶ್ರೀಗಳು
ರಿಪ್ಪನ್ಪೇಟೆ: ಭೂಮಿಯು ಸ್ವರ್ಗ ಸಮಾನವಾಗಿದ್ದು ವ್ಯವಸಾಯದ ಮೂಲಕ ಬೆಳೆಯುವ ಆಹಾರಧಾನ್ಯ, ತರಕಾರಿ, ಹಣ್ಣು ಹಂಪಲು, ಹೂವು, ‘ದಿವ್ಯ ಪ್ರಸಾದ’ ಎಂಬ ಭಾವನೆ ಮೂಡಬೇಕು. ಜೀವನಾವಶ್ಯಕ ಆರೋಗ್ಯ ಸಂರಕ್ಷಣೆ-ಪೋಷಣೆಗಾಗಿ ಬೇಸಾಯ ವೃತ್ತಿಯಾದರೂ ಕೃಷಿ (Agriculture) ಮೂಲವೇ ಆರ್ಥಿಕ, ಆರೋಗ್ಯ, ಅಕ್ಷರ, ಆಶ್ರಯ ಪಾಲನೆಯ ಕೇಂದ್ರವಾಗಿದೆ ಎಂದು ಹೊಂಬುಜ (Hombuja) ಶ್ರೀಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀಕ್ಷೇತ್ರದ ಭತ್ತದ ಕೊಯ್ಲು ಆರಂಭದ ಮುಹೂರ್ತ ಸಂದರ್ಭದಲ್ಲಿ ಹೇಳಿದರು.
ಭತ್ತ ಬೇಸಾಯವು ಅಂತರ್ಜಲ ಮಟ್ಟ ಸುಧಾರಣೆ ಮಾಡುತ್ತಲೇ ಮಾನವ ಸಮಾಜಕ್ಕೆ ಅನ್ನ ನೀಡುವ ಭೂಮಿಯನ್ನು ‘ಚಿನ್ನ ಬಟ್ಟಲು’ ಎಂಬಂತೆ ಕಾಪಾಡೋಣ ಎಂದು ಶುಭಾಶೀರ್ವಾದ ನೀಡಿದರು.
ಶ್ರೀಕ್ಷೇತ್ರದ ಪುರೋಹಿತ ಪದ್ಮರಾಜ ಇಂದ್ರರವರು ಸಾಂಪ್ರದಾಯಿಕ ಪೂಜೆ ನೆರವೇರಿಸಿ, ಭತ್ತದ ತೆನೆಯನ್ನು ಪಲ್ಲಕ್ಕಿಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ತರಲಾಯಿತು.