ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ; ದ್ವಿತೀಯ ಸ್ಥಾನ ಪಡೆದ ನಗರ ಪ್ರೌಢಶಾಲೆಯ ವಿದ್ಯಾರ್ಥಿನಿಯರು
ಹೊಸನಗರ : ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢಶಾಲೆ ನಗರ ಈ ಶಾಲೆಯ ವಿದ್ಯಾರ್ಥಿಗಳಾದ ಕು|| ಅನನ್ಯ ಎಸ್.ಕೆ ಮತ್ತು ಕು|| ಸಾನಿಕ.ಸಿ ಇವರು 12 ಸಾವಿರ ರೂ. ನಗದು ಬಹುಮಾನ, ಪಾರಿತೋಷಕ ಮುಡಿಗೇರಿಸಿಕೊಳ್ಳುವುದರ ಮೂಲಕ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಶಾಲೆಯ ವಿಜ್ಞಾನ ಶಿಕ್ಷಕರಾದ ಶೇಖರನಾಯ್ಕ ಆರ್ ಮತ್ತು ವೆಂಕಟೇಶ ಜಿ ವೈದ್ಯ ಇವರ ಮಾರ್ಗದರ್ಶನದಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಈ ವಿದ್ಯಾರ್ಥಿಗಳು ಮತ್ತೆ ರಾಜ್ಯ ಮಟ್ಟದಲ್ಲಿಯೂ ಸಹ ದ್ವಿತೀಯ ಸ್ಥಾನವನ್ನು ಪಡೆದು ಶಾಲೆ, ಜಿಲ್ಲೆಯ ಗೌರವ ಹೆಚ್ಚಿಸಿದ್ದಾರೆ.
ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು, ಸರ್ವ ಸದಸ್ಯರುಗಳು, ಮೂಡುಗೊಪ್ಪ (ನಗರ) ಗ್ರಾಮ ಪಂಚಾಯತಿ, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಶಾಲಾಭಿವೃದ್ಧಿ ಮತ್ತು ಮೇಲ್ತುಸ್ತುವಾರಿ ಸಮಿತಿ, ಮುಖ್ಯೋಪಾಧ್ಯಾಯರು ಮತ್ತು ಬೋಧಕ, ಬೋಧಕೇತರ ವೃಂದ, ಮುಖ್ಯೋಪಾಧ್ಯಾಯರು ಮತ್ತು ಬೋಧಕ ವರ್ಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಲಿಗೇರಿ, ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರು, ಹಿರಿಯ ವಿದ್ಯಾರ್ಥಿಗಳ ಸಂಘ, ಚಿಕ್ಕಪೇಟೆ ಮತ್ತು ನೂಲಿಗೇರಿ ಗೆಳೆಯರ ಬಳಗ, ಚಿಕ್ಕಪೇಟೆ-ನಗರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಶುಭ ಹಾರೈಸಿ ಅಭಿನಂದಿಸಿದ್ದಾರೆ.