ಶಿವಮೊಗ್ಗದಲ್ಲಿ ಕೃಷಿ ಮೇಳಕ್ಕೆ ಚಾಲನೆ | ಮಲೆನಾಡಿನ ಕೃಷಿ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕು ; ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿಗಳು

Written by malnadtimes.com

Updated on:

SHIVAMOGGA ; ಮಲೆನಾಡಿನ ಕೃಷಿ ಮತ್ತು ತೋಟಗಾರಿಕೆ ಸಮಸ್ಯೆಗಳ ನಿವಾರಣೆ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಹಾಗೂ ಕೃಷಿ ಕ್ಷೇತ್ರವನ್ನು ಸದೃಢಗೊಳಿಸಬೇಕಿದೆ ಎಂದು ಆನಂದಪುರ ಮುರುಘಾಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ನುಡಿದರು.

WhatsApp Group Join Now
Telegram Group Join Now
Instagram Group Join Now

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಶುಕ್ರವಾರ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಕೃಷಿ-ತೋಟಗಾರಿಕಾ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಹೆಚ್ಚು ಚರ್ಚೆ ಮತ್ತು ಜಿಜ್ಞಾಸೆಗೆ ಒಳಪಬೇಕಾದದ್ದು ಕೃಷಿ ಕ್ಷೇತ್ರ. ಅನ್ನಮಯ ಶರೀರಕ್ಕೆ ಅನ್ನ ಒದಗಿಸುವವನು ರೈತ. ರೈತ ಮತ್ತು ಕೃಷಿಗೆ ಅವಿನಾಭಾವ ಸಂಬಂಧವಿದೆ. ಎಲ್ಲ ಮಠ ಮಾನ್ಯಗಳು ಕೃಷಿ, ಗೋ ಸಂರಕ್ಷಣೆ, ಅನ್ನ ದಾಸಹೋಹ, ಕೃಷಿ ಕಾಯಕ ಮಾಡುತ್ತಾ ಬಂದಿವೆ. ಕೃಷಿಗೆ ಇಂದು ಹತ್ತು ಹಲವು ಸವಾಲುಗಳು ಎದುರಾಗಿದ್ದು ಸಂಕಷ್ಟಕ್ಕೆ ಕಾರಣ ಹಣದ ಹಪಹಪಿ ಆಗಿದೆ ಎಂದರು.

ಹಗಲಿರುಳು ಇನನ್ನೊಬ್ಬರಿಗಾಗಿ ಶ್ರಮಿಸುವವರಿದ್ದರೆ ಅದು ರೈತ. ಹೊಟ್ಟೆ ತುಂಬ ಅನ್ನ ನೀಡಿ ಸಂತೋಷಿಸುವವನು ರೈತ. ಅವರಿಗೆ ಎಷ್ಟು ಋಣಿಯಾಗಿದ್ದರೂ ಕಡಿಮೆ. ಮಲೆನಾಡಿನ ಕೃಷಿ ಸಮಸ್ಯೆಗಳ ಕಡೆ ಸರ್ಕಾರ ವಿಶ್ವವಿದ್ಯಾಲಯಗಳು, ವಿಜ್ಞಾನಿಗಳು ಗಮನ ಹರಿಸಬೇಕು.

ಕೃಷಿಯನ್ನು ಸದೃಢಗೊಳಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಕೃಷಿ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವಿವಿಧ ಸಂಶೋಧನೆ ನಡೆಯಬೇಕು ಎಂದ ಅವರು ವಿಶ್ವವಿದ್ಯಾಲಯಕ್ಕೆ ಶಿಸ್ತಿನ ಶಿವಪ್ಪ ನಾಯಕರ ಹೆಸರಿಟ್ಟಿರುವುದು ಔಚಿತ್ಯಪೂರ್ಣವಾಗಿದೆ. ಮಲೆನಾಡಿನ ಕೇಂದ್ರ ಬಿಂದುವಾದ ವಿಶ್ವವಿದ್ಯಾಲಯ ನಮ್ಮ ಹೆಮ್ಮೆ. ವಿಶ್ವವಿದ್ಯಾಲಯ ವ್ಯವಸ್ಥಿತವಾಗಿ ರೂಪುಗೊಳ್ಳುತ್ತಿದೆ. ಉತ್ತಮ ಕೃಷಿ ವಿಜ್ಞಾನಿಗಳು, ಸಂಶೋಧಕರು, ತಜ್ಞರು ಇದ್ದು ಮಲೆನಾಡಿನ ಸಮಸ್ಯೆಗಳಿಗೆ ಒತ್ತು ನೀಡಬೇಕು. ರೈತರು ಮಿಶ್ರ ಬೆಳೆ, ಪೂರಕ ಬೆಳೆ ಕಡೆ ಹೆಚ್ಚಿನ ಗಮನಹರಿಸಬೇಕು. ಕೃಷಿ ಮೇಳದ ಉಪಯುಕ್ತತೆಯನ್ನು ಎಲ್ಲರೂ ಪಡೆಯಬೇಕು ಎಂದರು.

ಶಾಸಕರಾದ ಗೋಪಾಲಕೃಷ್ಣ ಬೇಳೂರುರವರು ಪ್ರಗತಿಪರ ರೈತರ ಯಶೋಗಾಥೆ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿ, ರೈತ ದೇಶದ ಆಸ್ತಿ. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ರೈತರು ಅಭಿವೃದ್ದಿ ಹೊಂದಬೇಕು. ಈ ಬಾರಿ ಉತ್ತಮ ಮಳೆ ಆಗಿದೆ. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ತಂತ್ರಜ್ಞಾನ ಬೆಳೆದಿದೆ. ಭತ್ತದಲ್ಲಿ ಅನೇಕ ಹೊಸ ತಳಿಗಳನ್ನು ಅಭಿವೃದ್ದಿಪಡಿಸಿದ್ದು ಎಕರೆಗೆ 35 ಕ್ವಿಂಟಾಲ್ ಭತ್ತ ಬೆಳೆಯಬಹುದು. ಆದರೆ ಈಗ ಜನರು ತೋಟದ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದು ಭತ್ತ ಬೆಳೆಯುತ್ತಿಲ್ಲ. ಇದರಿಂದ ಮುಂದೆ ಊಟಕ್ಕೆ ಸಂಕಷ್ಟ ಎದುರಾಗಬಹುದು. 11 ಲಕ್ಷ ಹೆ. ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಿದ್ದು, ಭತ್ತದ ನಾಡು ಹೋಗಿ ಅಡಿಕೆ ಕಣಜ ಆಗಿದೆ. ನಾವು ಬಗೆ ಬಗೆಯ ತರಕಾರಿ ಬೆಳೆಯಬಹುದು ಎಂದರು.

ಯಾವುದೇ ರೈತ ಆತ್ಮಹತ್ಯೆ ಮಾಡಿಕೊಳ್ಳಲು ನಾವು ಬಿಡಬಾರದು. ಆದಾಯ ದುಪ್ಪಟ್ಟು ಮಾಡಬೇಕು. ಯಾವುದೇ ಸರ್ಕಾರ ರೈತಪರವಾಗಿ, ರೈತರ ಧ್ವನಿಯಾಗಿ ಕೆಲಸ ಮಾಡಬೇಕು. ರೈತರ ಬದುಕು ಹಸನು ಮಾಡಬೇಕು. ಸರ್ಕಾರ ಕೃಷಿ ಉಪಕರಣ, ಸೌಲಭ್ಯ ನೀಡಲಾಗುತ್ತಿದ್ದು ರೈತರು ಕೃಷಿ ಮಾದರಿ ಬೆಳೆ ಬೆಳೆಯುವ ಮೂಲಕ ಅಭಿವೃದ್ಧಿ ಸಾಧಿಸಬೇಕು. ರೈತ ವಿಜ್ಞಾನಿಗಳನ್ನು ಕರೆಸಿ ಎಲೆಚುಕ್ಕಿ ರೋಗಕ್ಕೆ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬುಡಸಮೇತ ಕಿತ್ತುಹಾಕಬೇಕು. ಕೊಳೆ ರೋಗ ಸಹ ಹೆಚ್ಚಿದ್ದು, ನಿಯಂತ್ರಣ ಕ್ರಮ ಕೈಗೊಳ್ಳಬೇಕು.
ರೈತರು ಅಡಿಕೆ ಬೆಳೆಯಿರಿ. ಆದರೆ ಭತ್ತವನ್ನೂ ಬೆಳೆಯಬೇಕು. ಅಡಿಕೆ ಕಲಬೆರಕೆ ನಿಲ್ಲಬೇಕು. ಕಳೆನಾಶಕ ಹಾನಿಕರಕವಾಗಿದ್ದು ಹೊಸ ತಂತ್ರಜ್ಞಾನ, ಪದ್ದತಿ ಅಳವಡಿಸಿಕೊಳ್ಳಬೇಕು. ರೈತರು ಪ್ರಗತಿಪರ ಆಗಬೇಕು. ಇರುವಕ್ಕಿಯಲ್ಲೂ ಕೃಷಿ ಮೇಳ ಆಯೋಜನೆ ಮಾಡಬೇಕು ಎಂದರು.

ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ, ಹಿಂದೆ ನಮ್ಮ ದೇಶದಲ್ಲಿ 33 ಕೋಟಿ ಜನಸಂಖ್ಯೆ ಇದ್ದು ಬಹಳಷ್ಟು ಆಹಾರ ಕೊರತೆ ಇತ್ತು. ಈಗ 144 ಕೋಟಿ ಜನಸಂಖ್ಯೆ ಇದ್ದರೂ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿ, 120 ದೇಶಗಳಿಗೆ ಅಕ್ಕಿ ಗೋಧಿ ರಫ್ತು ಮಾಡುತ್ತಿದ್ದೇವೆ. ಇಂತಹ ಸ್ವಾವಲಂಬನೆ ಸಾಧಿಸಲು ಕಾರಣರಾದ ರೈತರ ಶ್ರಮವನ್ನು ಮರೆಯಬಾರದು. ಹಾಲು ಉತ್ಪಾದನೆಯಲ್ಲಿಯೂ ದೇಶ ಪ್ರಥಮ ಸ್ಥಾನದಲ್ಲಿದೆ.

ರಾಷ್ಟ್ರದ ಆರ್ಥಿಕತೆಯಲ್ಲಿ ರೈತರ ಕೊಡುಗೆ ಅಪಾರ. ಕೃಷಿ ಸಂಶೋಧನೆ ಇನ್ನೂ ಸುಧಾರಣೆ ಆಗಬೇಕು. ವಿಶ್ವವಿದ್ಯಾಲಯದಲ್ಲಿ ಇನ್ನೂ ಕೆಲ ಸೌಲಭ್ಯ ಕೊರತೆ ಇದೆ. ವಿವಿ ಹಣಕಾಸಿನ ಕೊರತೆ ನೀಗಬೇಕು. ತಜ್ಞರ ನೇಮಕ ಆಗಬೇಕು. ಪ್ರಾಕೃತಿಕ ವಿಕೋಪ ಬಾಧೆ , ಇತರೆ ಕಾರಣಗಳಿಂದ ರೈತರು ಸಾಲ ಸುಳಿಯಲ್ಲಿದ್ದಾರೆ. ಹೈಬ್ರೀಡ್ ತಳಿಗಳಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು, ರೋಗಗಳು ಹೆಚ್ಚಿದೆ. ಹೈಬ್ರೀಡ್ ವಿಷ ಆಗಿದೆ. ತರಕಾರಿ ಹಣ್ಣು, ಹಾಲು ವಿಷಮಯವಾಗಿದೆ. ಹೆಚ್ಚೆಚ್ಚು ಬೆಳೆಯುವ ಆಸೆಯಿಂದ ಯತೇಚ್ಚ ರಾಸಾಯನಿಕ ಬಳಸಿ ಮಣ್ಣನ್ನು ಸಾಯಿಸುತ್ತಿದ್ದೇವೆ. ಮಣ್ಣನ್ನು ಬದುಕಿಸಬೇಕಿದೆ. ವಿಶ್ವವಿದ್ಯಾಲಯವು ನೈಸರ್ಗಿಕ, ಸಾವಯವ ಕೃಷಿ, ವಿಷಮುಕ್ತ ಬೆಳೆ, ಸಾವಯವ ಕೃಷಿ ಯಲ್ಲೂ ಹೆಚ್ಚಿನ ಇಳುವರಿ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ಇಲ್ಲವಾದಲ್ಲಿ ಮನುಕುಲಕ್ಕೆ ಉಳಿವಿಲ್ಲ ಎಂದು ಎಚ್ಚರಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ನೀಡಿವೆ. ಬೆಳೆ ವಿಮೆ ರೈತರ ಬದುಕಿಗೆ ಶಕ್ತಿ ತುಂಬಿದೆ. ಕೃಷಿ ಮೇಳದಲ್ಲಿ ಹೊಸ ತಂತ್ರಜ್ಞಾನಗಳ ಪ್ರದರ್ಶನವಿದ್ದು ರೈತರು ಸದ್ಬಳಕೆ ಮಾಡಿಕೊಳ್ಳಿರಿ ಎಂದರು.


ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಎಲ್ಲರಿಗೆ ಆಹಾರ ಒದಗಿಸುವ ರೈತನಿಗೆ ಸರ್ಕಾರ ಎಲ್ಲ ರೀತಿಯ ಸೌಲಭ್ಯ ನೀಡಬೇಕು. ಕೃಷಿ ವಿಶ್ವವಿದ್ಯಾಲಯಗಳು ರೈತರ ಏಳ್ಗೆಗಾಗಿ ಸಂಶೋಧನೆಗಳನ್ನು ಕೈಗೊಳ್ಳಬೇಕು. ಪ್ರಗತಿಪರ ರೈತರ ಸೇವೆ ಸುಗಮವಾಗಿ ಸಾಗಬೇಕು. ಕೃಷಿ ಮೇಳ ಉತ್ತಮ ಕಾರ್ಯಕ್ರಮವಾಗಿದ್ದು ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಕೃಷಿ ಮೇಳಕ್ಕೆ ವಿವಿಧ ಜಿಲ್ಲೆಗಳ ರೈತರು ಬಂದಿದ್ದು, ತಾಂತ್ರಿಕತೆ, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಕೆಲಸವನ್ನು ರೈತರು ಮಾಡುತ್ತಿದ್ದಾರೆ. ರಾಸಾಯನಿಕ ಅಡ್ಡ ಪರಿಣಾಮದಿಂದಾಗಿ ಸಾವಯವಕ್ಕೆ ಮತ್ತೆ ವಾಪಾಸ್ಸಾಗುತ್ತಿದ್ದೇವೆ. ರೈತರು ಬೆಳೆದ ಬೆಳೆಗೆ ಉತ್ತಮ ಇಳುವರಿ ಬರಬೇಕು. ಇತ್ತೀಚೆಗೆ ರೈತರು ಭತ್ತ ಕಡಿಮೆ ಮಾಡಿ, ಮೆಕ್ಕೆಜೋಳ ಬೆಳೆಯಲು ಶುರು ಮಾಡಿದರು. ಈಗ ಅಡಿಕೆ ಬೆಳೆಯಲು ಮುಂದಾಗಿದ್ದಾರೆ ಎಂದ ಅವರು ರೈತರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರಗಳು ಒತ್ತು ನೀಡುತ್ತಾ ಬಂದಿದ್ದು, ರೈತರ ಬದುಕು ಹಸನಾಗಲಿ ಎಂದು ಹಾರೈಸಿದರು.

ಕೆ.ಶಿ.ನಾ.ಕೃ.ತೋ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸ ಕೋರ್ಸುಗಳನ್ನು ಆರಂಭಿಸಿದ್ದು, ರಾಷ್ಟ್ರದಲ್ಲೇ ಮೊದಲ ಬಾರಿಗೆ ಯುವ ರೈತರಿಗೆ ಡ್ರೋನ್ ತರಬೇತಿ ಆರಂಭಿಸಲಾಗಿದೆ ಎಂದರು.

ರೈತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ರೈತ ಮಹಿಳೆ ಮತ್ತು ಶ್ರೇಷ್ಠ ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೂ ವಿವಿಧ ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು.

ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್‌ ಮಾತನಾಡಿದರು. ಆಡಳಿತ ಮಂಡಳಿ ಸದಸ್ಯರಾದ ಬಿ.ಕೆ.ಕುಮಾರಸ್ವಾಮಿ ಕೃಷಿಕ ಸಮಾಜದ ಅಧ್ಯಕ್ಷ ನಾಗರಾಜ್, ಪಶು ಕಾಲೇಜ್ ಡೀನ್, ವೈ.ಹೆಚ್.ನಾಗರಾಜ್, ನಗರದ ಮಹಾದೇವಪ್ಪ ಅಧಿಕಾರಿಗಳು, ವಿವಿ ಆಡಳಿತ ಮಂಡಳಿ ಸದಸ್ಯರು ರೈತರು, ಉದ್ಯಮಿಗಳು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ಕೃಷಿ ತೋಟಗಾರಿಕೆ ಮೇಳದಲ್ಲಿ ರಾಜ್ಯದಲ್ಲಿನ ಹಲವು ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಗಳು, ವಿವಿಧ ಸಂಸ್ಥೆಗಳು ವಿಭಿನ್ನ ಮಳಿಗೆಗಳ ಮೂಲಕ ರೈತರ, ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ.

ಗಮನ ಸೆಳೆದ ಹಲಸಿನ ಉತ್ಪನ್ನ :

ಮೂಡಿಗೆರೆ ಕಾಲೇಜು ವಿಭಾಗದ ಬಿಸ್ಕೆಟ್ ಟೆಕ್ನಾಲಜಿ ಮತ್ತು ಡಿ ಹೈಡ್ರೇಷನ್ ಟೆಕ್ನಾಲಜಿಯಿಂದ ಮೈದಾ ರಹಿತ ಹಲಸಿನ ಬೀಜದ ಬಿಸ್ಕೆಟ್ ಹಾಗೂ ಹಲಸಿನ ಬೀಜ ಮತ್ತು ಹಲಸಿನ ಪುಡಿಯಿಂದ ತಯಾರಿಸಿದ ಹೋಳಿಗೆ, ಸೀತಾಫಲದ ಬಿಸ್ಕೆಟ್ ಗಳು ಜನರ ಗಮನ ಸೆಳೆಯುತ್ತಿದ್ದು, ಕೊಂಡುಕೊಳ್ಳುತ್ತಿದ್ದರು.

ಕೀಟ ಪ್ರಪಂಚದಲ್ಲಿ ಕೀಟಶಾಸ್ತ್ರ ವಿಭಾಗವು ವಿಭಿನ್ನ ಶೈಲಿಯಲ್ಲಿ 30 ಪ್ರಭೇದಗಳ ಮಾಲಿಕೆಯನ್ನು ಪ್ರದರ್ಶಿಸಿದ್ದಾರೆ. ರೇಷ್ಮೆ ಹುಳು ಗೂಡಿನ ತ್ಯಾಜ್ಯದಿಂದ ಮಾಡಿದ ಹಾರಗಳು, ತೋರಣಗಳು ಆಕರ್ಷಕವಾಗಿವೆ.

ಸಾವಯವ ಕೃಷಿ ಸಂಶೋಧನ ಕೇಂದ್ರಗಳು, ಬಹುಸ್ತರೀಯ ಬೆಳೆ ಪದ್ದತಿ, ಅಡಿಕೆ ಆಧಾರಿತ ಸಮಗ್ರ ಕೃಷಿ ಪದ್ದತಿ, ಜೈವಿಕ ಇಂಧನ ಉದ್ಯಾನಗಳು ರೈತರ ಗಮನ ಸೆಳೆದವು.

ಕರ್ನಾಟಕ ಮೊದಲ ಬಾರಿಗೆ ನೇರವಾಗಿ ಮನೆಯಲ್ಲಿಯೇ ಹಿಟ್ಟಿನ ಗಿರಣಿಗಳು ಖರೀದಿಸಲು ಮಳಿಗೆ ತರೆಯಲಾಗಿತ್ತು. ವಿವಿಧ ರೀತಿಯ ಆಹಾರ ಉತ್ಪನ್ನ, ಸಮಗ್ರ ಜಲಾನಯನ ಅಭಿವೃದ್ಧಿ, ಜೇನು ಕೃಷಿ, ನಮ್ಮ ತೋಟ, ಅಣಬೆ ಕೃಷಿ, ಮೀನುಗಾರಿಕೆ ಮಳಿಗೆಗಳು, ಸಿರಿದಾನ್ಯಗಳ ಮಳಿಗೆ ವಿವಿಧ ರೀತಿಯ ಬಾಳೆ ಅಡಿಕೆ , ಕೃಷಿ ಮತ್ತು ತೊಟಗಾರಿಕ ತಳಿಗಳ, ವಿವಿಧ ಕೃಷಿ ಯಂತ್ರೋಪಕರಣಗಳು, ಸಾವಯವ ಗೊಬ್ಬರಗಳು, ವಿವಿಧ ನರ್ಸರಿ ಪಾಲ್ಗೊಂಡು ಹಲವು ಬಗೆಯ ಸಸ್ಯ ತಳಿಗಳ ಪ್ರದರ್ಶನಕ್ಕಿದ್ದಾರೆ. ಕೃಷಿ ಪರಿಕರಗಳ ಮಳಿಗೆಗಳು, ಹಲವು ತಂತ್ರಗಳ ಆಧಾರಿತ ಉಪಕರಣಗಳು, ಅಗ್ರಿ ಟೂಲ್ಸ್ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದು ಹೊರ ಆವರಣದಲ್ಲಿ ವಿವಿಧ ಬಗೆಯ ಆಹಾರ-ತಿನಿಸು ಮಳಿಗೆಗಳನ್ನು ತೆರೆಯಲಾಗಿದೆ.

ರೈತರಿಗೆ ಮತ್ತು ವೀಕ್ಷಣೆಗೆ ಆಗಮಿಸಿದವರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಬೆಂಗಳೂರು, ಬಾಗಲಕೋಟೆ, ಶಿರಸಿ, ಚಿಕ್ಕಮಗಳೂರು, ಮೂಡಿಗೆರೆ, ದಾವಣಗೆರೆ ವಿವಿಧ ಜಿಲ್ಲೆಯ ಕೃಷಿ ವಿಶ್ವ ವಿದ್ಯಾಲಯಗಳು ಮತ್ತು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಭಾಗವಹಿಸಿದ್ದವು.

Leave a Comment