ಹೊಸನಗರ ; ಇತ್ತೀಚೆಗೆ ನಿಧನರಾದ ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಗರೆ ಗ್ರಾಮ ವಾಸಿ ಪ್ರಗತಿಪರ ಕೃಷಿಕ, ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಪೌರೋಹಿತ್ಯ ಕಾರ್ಯದ ಮೂಲಕ ಹೆಸರಾಗಿದ್ದ ದಿ. ಸುಬ್ಬಭಟ್ಟ (90) ಅವರಿಗೆ ತ್ರಿಣಿವೆ ಗ್ರಾಮಸ್ಥರು ಸಾಮೂಹಿಕವಾಗಿ ನುಡಿ ನಮನ ಸಲ್ಲಿಸುವ ಮೂಲಕ ಮಾನವೀಯತೆ ಮೆರೆದರು.
ತೊಗರೆ ಗ್ರಾಮದ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಸುಬ್ಬಭಟ್ಟರ ಅನೇಕ ಜನಪರ ಕೊಡುಗೆಗಳನ್ನು ಸ್ಮರಿಸುವ ಮೂಲಕ ಅವರ ಶಿಸ್ತು ಬದ್ದ ಜೀವನಶೈಲಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಸುಬ್ಬಭಟ್ಟರ ಕುಟುಂಬ ವರ್ಗದ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ತ್ರಿಣಿವೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಮೂಲತಃ ನಾಗರಕೊಡಿಗೆ ಗ್ರಾಮದ ಸುಬ್ಬಭಟ್ಟರದ್ದು ಹಠದ ಸ್ವಭಾವ. ಹಿಡಿದ ಯಾವುದೇ ಕೆಲಸ ಕಾರ್ಯಗತಗೊಳಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದರು. ಗ್ರಾಮದಲ್ಲಿ ಅವರ ಮಾರ್ಗದರ್ಶನ ಪ್ರತಿಯೊಬ್ಬರು ಅನುಸರಿಸುವಂತೆ ಇತ್ತು. ಅದರ ಫಲವೇ ಎಂಬಂತೆ, ಗ್ರಾಮಕ್ಕೆ ಅಂಚೆ ಕಚೇರಿ, ಭಜನಾ ಮಂಡಳಿ, ಶ್ರೀ ನಾಗಲಿಂಗೇಶ್ವರ ದೇವಾಲಯ ಅಲ್ಲದೆ, ಕಬ್ಬು, ಭತ್ತ, ಅಡಿಕೆ ಸೇರಿದಂತೆ ಅನೇಕ ಬೆಳೆಗಳ ಅನೇಕ ಬಗೆಯ ಪ್ರಾಯೋಗಿಕ ಪ್ರಾತ್ಯಕ್ಷಿಕೆ ಇವರ ಜಮೀನಿನಲ್ಲಿ ನಡೆಸಿ ಪ್ರಗತಿಪರ ಕೃಷಿಕ ಎಂದೇ ತಾಲೂಕಿನಾದ್ಯಂತ ಹೆಸರಾಗಿದ್ದರು. ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಯಶಸ್ವಿ ಆಗಿದ್ದರು. ಯಾರೊಬ್ಬರ ಮನ ನೋಯಿಸದೆ, ಪ್ರತಿಫಲ ಅಪೇಕ್ಷೆ ಇಲ್ಲದೆ, ಸಲಹೆ ಸಹಕಾರ ಕೋರಿ ಅವರ ಬಳಿಗೆ ಬರುವವರನ್ನು ಜಾತಿ ಮತ ಭೇದ ತೊರದೆ ತಮ್ಮ ಕೈಲಾದ ಸಹಾಯ ನೀಡಿ ಸಂತೈಸಿದ ಹಿರಿಯ ಜೀವಕ್ಕೆ ಭಗವಂತ ಸನ್ಮಂಗಲ ಉಂಟುಮಾಡಲಿ ಎಂದು ಕೋರಿದರು.
ಕುಟುಂಬ ಅನೇಕರು ಅವರೊಂದಿಗೆ ಕಳೆದ ಅಮೂಲ್ಯ ಘಟನಾವಳಿಗಳನ್ನು ಸ್ಮರಿಸಿದರು. ರಾಘವೇಂದ್ರ ಜೋಯಿಸ್ ನಿರೂಪಿಸಿದರು. ವೇದಿಕೆಯಲ್ಲಿ ಕುಟುಂಬದ ಪ್ರಸಾದ್ ಭಟ್, ಗಣೇಶ್ ಭಟ್, ದೇವಸ್ಥಾನ ಅಧ್ಯಕ್ಷ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶ್ರೀ ಸಿದ್ದಿ ವಿನಾಯಕ ಮಹಿಳಾ ಭಜನಾ ಮಂಡಳಿ ಅವರಿಂದ ಸುಶ್ರಾವ್ಯ ಭಜನೆ ನೆರವೇರಿತು. ತೊಗರೆ ದೇವೇಂದ್ರ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





