ಕೋವಿಡ್ ಸೋಂಕು | ರಾಜ್ಯದಲ್ಲಿ ಈತನಕ ಆತಂಕದ ಸ್ಥಿತಿ ಉದ್ಬವಿಸಿಲ್ಲ ; ಗೃಹ ಸಚಿವ ಡಾ. ಜಿ.ಪರಮೇಶ್ವರ್

0 169

ಚಿಕ್ಕಮಗಳೂರು: ಕೋವಿಡ್-19 ಹಾಗೂ ಹೊಸ ಉಪ ತಳಿ ಜೆಎನ್.1 ಸೋಂಕಿನ ವಿಚಾರದಲ್ಲಿ ಇನ್ನೂ ಸಹ ರಾಜ್ಯದಲ್ಲಿ ಆತಂಕದ ಸ್ಥಿತಿ ಉದ್ಭವವಾಗಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಮಂಗಳವಾರ ನಗರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಗತ್ಯ ಬಂದಾಗ ಸರ್ಕಾರ, ಆರೋಗ್ಯ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ. ಯಾವುದೇ ತೊಂದರೆ ಇಲ್ಲದೆ ಎಲ್ಲಾ ಕ್ರಮ ಮಾಡುತ್ತದೆ ಎಂದು ತಿಳಿಸಿದರು.
ಹೊಸ ವರ್ಷಾಚರಣೆ ಸಂಬಂಧ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ ಅಲ್ಲಿ ಚರ್ಚಿಸಿ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಮಾಸ್ಕ್ ಹಾಕುವುದು, ಹೆಚ್ಚು ಜನರು ಸೇರದಿರುವುದು ಸೇರಿದಂತೆ ಕೆಲವು ಸೂಚನೆಗಳನ್ನು ನೀಡಲಾಗುವುದು ಎಂದರು.

ಚಿಕ್ಕಮಗಳೂರು ನಗರದಲ್ಲಿ ಪೊಲೀಸರಿಂದ ವಕೀಲನ ಮೇಲೆ ನಡೆದ ಹಲ್ಲೆ, ಪೊಲೀಸರು ಮತ್ತು ವಕೀಲರು ನಡೆಸಿದ ಪ್ರತಿಭಟನೆ ಈ ಎಲ್ಲಾ ವಿಚಾರಗಳು ಈಗ ನ್ಯಾಯಾಲಯದ ಮುಂದಿರುವ ಹಿನ್ನೆಲೆಯಲ್ಲಿ ಆ ಕುರಿತು ಹೆಚ್ಚೇನನ್ನೂ ಪ್ರತಿಕ್ರಿಯಿಸುವುದಿಲ್ಲ ಎಂದರು.

ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಮಾನಸಿಕವಾಗಿ ಪರಿಣಾಮ ಉಂಟಾಗಿದೆ ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕ ಪೊಲೀಸ್ ಬಹಳ ಸಮರ್ಥವಾಗಿದೆ. ಇಂತಹ ಘಟನೆಗಳು ನಡೆದರೂ ಅದನ್ನು ಸಂಯಮದಿಂದ ತೆಗೆದುಕೊಂಡು ಹೋಗುತ್ತಾರೆ. ಕರ್ತವ್ಯಕ್ಕೆ ಮಹತ್ವ ಕೊಡುತ್ತಾರೆ. ಅವರ ಆತ್ಮಸ್ಥೈರ್ಯ ಕುಗ್ಗಿಸಲು ಆಗುವುದಿಲ್ಲ. ಪೊಲೀಸ್ ಎಂದರೆ ಶಿಸ್ತಿನ ಪಡೆ ಎಂದರು.

ಬೆಳಗಾವಿ ಜಲ್ಲೆ ಹೊಸ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣವನ್ನು ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ ಎನ್ನಿಸುತ್ತಿದೆ ಆರೋಪಿಸಿದರು.

ಸರ್ಕಾರ ಇದರಲ್ಲಿ ಎಲ್ಲಾ ರೀತಿ ಕ್ರಮಗಳನ್ನೂ ಕೈಗೊಂಡಿದೆ. ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಬಿಜೆಪಿ ಹೊರಟಿದೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡರು ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು, ಎಸ್ಟಿ ಕಮಿಷನ್ ಸದಸ್ಯರು ಬಂದಿದ್ದಾರೆ. ಇದೆಲ್ಲದರ ಜೊತೆಗೆ ಬಿಜೆಪಿಯ ಸತ್ಯಶೋಧನಾ ತಂಡ ಎಂದು ಹೇಳಿಕೊಂಡು ನಾಲ್ಕೈದು ಮಂದಿ ಸಂಸದರು ಬಂದಿದ್ದಾರೆ ಎಂದರು.

ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದ ಘಟನೆ ನಡೆದು ಕೆಲವೇ ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತು ಮಹಿಳೆಯನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಾವೂ ಖುದ್ದು ಮಹಿಳೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದೇವೆ. ಘಟನಾ ಸ್ಥಳಕ್ಕೂ ಭೇಟಿ ಮಾಡಿದ್ದೇವೆ. ಅಲ್ಲಿ ಈಗ ಶಾಂತಿ ಇದೆ ಎಂದರು.

ಹೈ ಕೋರ್ಟ್‌ನವರು ಈ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವುದಲ್ಲದೆ. ಪೊಲೀಸರನ್ನೂ ಪ್ರಶ್ನೆ ಮಾಡಿದೆ. ಈಗಾಗಲೆ ೫ ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದ್ದೇವೆ. ಜೊತೆಗೆ 2 ಎಕರೆ ಭೂಮಿಯನ್ನು ಎಸ್ಟಿ ಕಾರ್ಪೊರೇಷನ್‌ನಿಂದ ನೀಡಲಾಗುತ್ತಿದೆ. ಸರ್ಕಾರ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಅದನ್ನೆಲ್ಲ ಮಾಡಿದೆ. ಕೋರ್ಟ್ ಹಾಗೂ ಜನರು ಇದನ್ನು ಪ್ರಶಂಸೆ ಮಾಡಿದ್ದಾರೆ ಎಂದು ತಿಳಿಸಿದರು.

ನಿಗಮ ಮಂಡಳಿ ನೇಮಕಾತಿ ಕುರಿತಾಗಿ ವಿಳಂಭ ಮಾಡುತ್ತಿಲ್ಲ. ಈ ಸಂಬಂಧ ಯಾವುದೇ ಸಮಯ ನಿಗಧಿ ಮಾಡಿಲ್ಲ. ನಮ್ಮ ಮುಖ್ಯಮಂತ್ರಿ, ಅಧ್ಯಕ್ಷರು ದೆಹಲಿಗೆ ಹೋಗಿದ್ದಾರೆ. ಅವರು ತೀರ್ಮಾನಿಸಿ ಹೈ ಕಮಾಂಡ್ ಜೊತೆ ಚರ್ಚಿಸಿ ಅಂತಿಮ ಗೊಳಿಸುತ್ತಾರೆ. ಯಾವುದೇ ಗೊಂದಲಗಳಿಲ್ಲ ಎಂದರು.

ಕೋಲಾರದಲ್ಲಿ ಶಾಲಾ ಮಕ್ಕಳಿಂದ ಶೌಚಗುಂಡಿ ಸ್ವಚ್ಛ ಮಾಡಿಸಿರುವ ಪ್ರಕರಣದ ಬಗ್ಗೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಶೌಚಗುಂಡಿಯನ್ನು ಶುಚಿಗೊಳಿಸುವುದು, ತಾಜ್ಯವನ್ನು ಸಾಗಿಸುವುದು ಎಲ್ಲವನ್ನೂ ತಾಂತ್ರಿಕತೆ ಉಪಯೋಗಿಸಿ ಕೈಗೊಳ್ಳಬೇಕು. ಮನುಷ್ಯರನ್ನು ಇದಕ್ಕೆ ಬಳಸಿಕೊಳ್ಳಬಾರದು ಎಂದು ದೇವರಾಜ ಅರಸು ಅವರ ಕಾಲದಲ್ಲೇ ಕಾನೂನನ್ನು ಮಾಡಲಾಗಿದೆ. ಹಾಗಿದ್ದರೂ ಶಾಲೆಯಲ್ಲಿ ಮಕ್ಕಳನ್ನು ಉಪಯೋಗಿಸುವಂತಹ ಕೆಲಸ ಯಾವ ಕಾರಣಕ್ಕೂ ಆಗಬಾರದು ಆ ಕಾರಣಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.

ದತ್ತಪೀಠದ ಆಚರಣೆಗಳ ವಿಚಾರದಲ್ಲಿ ಕೋರ್ಟ್ ಆದೇಶದ ಪ್ರಕಾರವೇ ನಡೆದುಕೊಳ್ಳಲಾಗುತ್ತದೆ. ಕೋರ್ಟ್ ಆದೇಶ ಉಲ್ಲಂಘನೆ ಮಾಡಲು ಆಗುವುದಿಲ್ಲ. ವೈಯಕ್ತಿಕ ಅಭಿಪ್ರಾಯಗಳು ಲೆಕ್ಕಕ್ಕೆ ಬರುವುದಿಲ್ಲ ಎಂದು ತಿಳಿಸಿದರು.

ದತ್ತಯಜಂತಿ ಕಾರ್ಯಕ್ರಮಗಳನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳಿಗೆ ದೂರು ನೀಡುವುದಾಗಿ ಕಾಂಗ್ರೆಸಿಗರೇ ಹೇಳುತ್ತಿರುವ ಬಗ್ಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದು.

ಡಿಸೆಂಬರ್ 25 ರಂದು ನಡೆಯುವ ದತ್ತ ಜಯಂತಿ ಪ್ರಯುಕ್ತ ಇಲಾಖೆಯಿಂದ ಹಮ್ಮಿಕೊಳ್ಳಬೇಕಾದ ಕ್ರಮಗಳು ಹಾಗೂ ಶಾಂತಿಯಿಂದ ದತ್ತ ಜಯಂತಿ ಆಚರಿಸಲು ಅಗತ್ಯವಿರುವ ಕ್ರಮಗಳ ಬಗ್ಗೆ ಪರಿಶೀಲಿಸುತ್ತೇನೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಆಗಬೇಕಿರುವ ಕಾರ್ಯಗಳ ಕುರಿತು ಎಸ್ಪಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

Leave A Reply

Your email address will not be published.

error: Content is protected !!