ಶೃಂಗೇರಿ ; ಮಯೂರಾಲಂಕಾರದಲ್ಲಿ ಕಂಗೊಳಿಸಿದ ಶಾರದಾಂಬೆ

0 160

ಶೃಂಗೇರಿ : ಶರನ್ನವರಾತ್ರಿಯ ಐದನೇ ದಿನವಾದ ಬುಧವಾರ ಶೃಂಗೇರಿ ಶಾರದಾ ಮಠದ ಶಾರದೆಯು ಆದಿಶಕ್ತಿಯ ಕೈಯಲ್ಲಿ ಶಕ್ತ್ಯಾಯುಧವನ್ನು ಧರಿಸಿ, ನವಿಲನ್ನೇರಿದ ಮಯೂರ ವಾಹನಾಲಂಕಾರದಲ್ಲಿ ಕಂಗೊಳಿಸಿದಳು.

ಮಧ್ಯಾಹ್ನ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತಿ ಸ್ವಾಮೀಜಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.

ಶರನ್ನವರಾತ್ರಿ ಪ್ರಯುಕ್ತ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ಪಾರಾಯಣ, ಮಾಧವೀಯ ಶಂಕರ ದಿಗ್ವಿಜಯ, ಸೂತ ಸಂಹಿತೆ, ಭುವನೇಶ್ವರಿ ಜಪ, ಕುಮಾರಿ ಹಾಗೂ ಸುಹಾಸಿನಿ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೀದಿ ಉತ್ಸವ:

ಶಾರದಾ ಮಠದಲ್ಲಿ ಸಂಜೆ 6 ಗಂಟೆಗೆ ನಡೆದ ಬೀದಿ ಉತ್ಸವದಲ್ಲಿ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಭಾಗವಹಿಸಿದರು. ಸಾಂಸ್ಕೃತಿ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ವಿದ್ಯಾರಾಜ ಮತ್ತು ವೃಂದದವರ ಹಾಡುಗಾರಿಕೆ ನಡೆಯಿತು.

ದರ್ಬಾರು:

ಶಾರದಾ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಮಠದ ಕಿರಿಯ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿಯವರು ಕಿರೀಟ, ಆಭರಣಗಳನ್ನು ಧರಿಸಿ ಚಂದ್ರಮೌಳೇಶ್ವರ ದೇವಾಲಯದಿಂದ ಶಾರದಾಮ್ಮನವರ ದೇವಾಲಯದ ವರೆಗೆ ನಡೆದ ಉತ್ಸವದಲ್ಲಿ ಭಾಗವಹಿಸಿದರು.

Leave A Reply

Your email address will not be published.

error: Content is protected !!