ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ ಎಂದು ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರೋಶ
ಚಿಕ್ಕಮಗಳೂರು : ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಮರಣ ಹೊಂದಿದೆ ಎಂದು ಆರೋಪಿಸಿ ಗರ್ಭಿಣಿ ಕುಟುಂಬಸ್ಥರು ಆರೋಪಿಸಿ ನಗರದ ಹೆರಿಗೆ ಆಸ್ಪತ್ರೆ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದರು.
ಕಡೂರು ತಾಲೂಕು ಸಖರಾಯಪಟ್ಟಣದ ಮಡಿಕೆ ಹೊಸಳ್ಳಿ ಗ್ರಾಮದ ಗರ್ಭಿಣಿ ಶಿಲ್ಪ ಚಿಕ್ಕಮಗಳೂರು ನಗರದ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಸಕಾಲದಲ್ಲಿ ಹೆರಿಗೆ ಮಾಡಿಸದಿದ್ದರಿಂದ ಮಗು ಗರ್ಭಿಣಿ ಹೊಟ್ಟೆಯಲ್ಲೇ ಮೃತಪಟ್ಟಿದೆ. ನಿರ್ಲಕ್ಷ್ಯ ವಹಿಸಿದ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದರು.
ಗರ್ಭಿಣಿ ಶಿಲ್ಪ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದು, ಸಂಜೆ ವೇಳೆಗೆ ಆಗಮಿಸಿದ ವೈದ್ಯರು ಮಗು ಬೆಳವಣಿಗೆಯಾಗಿಲ್ಲ. ಆದ್ದರಿಂದ ಸಿಜೇರಿಯನ್ ಮಾಡಬೇಕು ಎಂದು ಹೇಳಿದ್ದರು. ಶನಿವಾರ ಮುಂಜಾನೆ ವೇಳೆ ಹೆರಿಗೆ ಮಾಡಿಸಿದ ವೇಳೆ ಮಗು ಹೊಟ್ಟೆಯಲ್ಲೆ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಶಿಲ್ಪ ಅವರ ತಾಯಿ ಇಂದಿರಮ್ಮ ತಿಳಿಸಿದ್ದಾರೆ.
ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡದಿರುವುದರಿಂದ ಮಗು ಮೃತಪಟ್ಟಿದೆ. ವೈದ್ಯರು ಮತ್ತು ಸಿಬ್ಬಂದಿಗಳು ನಿರ್ಲಕ್ಷ್ಯತನದಿಂದ ಮಗು ಮೃತಪಟ್ಟಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸರ್ಜನ್ ಡಾ|| ಮೋಹನ್ಕುಮಾರ್ ಎದುರು ಕುಟುಂಬಸ್ಥರು ಆಗ್ರಹಿಸಿದರು.
ಈ ವೇಳೆ ಹೆರಿಗೆ ಆಸ್ಪತ್ರೆಗೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಶಿಲ್ಪ ಅವರಿಗೆ ನಾರ್ಮಲ್ ಹೆರಿಗೆಯಾಗಲಿ ಎಂದು ವೈದ್ಯರು ಮತ್ತು ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಮಗು ಮೃತಪಟ್ಟಿದೆ ಎನ್ನಲಾಗುತ್ತಿದೆ.