ಒಳ್ಳೆಯವರ ಒಡನಾಟದಲ್ಲಿ ಬದುಕಿದರೆ ಜೀವನದಲ್ಲಿ ಪ್ರಗತಿ ಸಾಧ್ಯ ; ಶ್ರೀ ರಂಭಾಪುರಿ ಜಗದ್ಗುರುಗಳು

Written by Mahesha Hindlemane

Published on:

ಶಿವಮೊಗ್ಗ : ಮನುಷ್ಯನ ಜೀವನವು ಪವಿತ್ರ ಹಾಗೂ ಮಹತ್ವಪೂರ್ಣವಾಗಿದೆ. ಅದನ್ನು ಅರಿತು, ಸರಿಯಾದ ಮಾರ್ಗದಲ್ಲಿ ಬಾಳುವುದರಲ್ಲಿ ಸತ್ಯವಾದ ಸಂತೋಷ ಮತ್ತು ಶಾಂತಿ ದೊರೆಯುತ್ತದೆ. ಒಳ್ಳೆಯವರ ಸಾನ್ನಿಧ್ಯದಲ್ಲಿ ಬದುಕಿದರೆ ಜೀವನದಲ್ಲಿ ನಿಜವಾದ ವಿಕಾಸ ಸಾಧ್ಯವಾಗುತ್ತದೆ ಎಂದು
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬುಧವಾರ ಸೂಗೂರು ತಾಲ್ಲೂಕಿನ ಶ್ರೀ ಮೃಡಬಸವೇಶ್ವರಸ್ವಾಮಿ ದೇವಸ್ಥಾನದ ಮಂಡಲ ಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಅವರು ಭಾಗವಹಿಸಿ ಆಶೀರ್ವಚನ ನೀಡಿ, “ನಮ್ಮ ಜೀವನವು ನಮಗೆ ಏನು ನೀಡಿದೆ ಎಂಬುದಕ್ಕಿಂತ, ನಾವು ಸಮಾಜಕ್ಕೆ ಏನು ನೀಡಿದ್ದೇವೆ ಎಂಬುದು ಮುಖ್ಯ. ಮನುಷ್ಯರು ದೊಡ್ಡ ಮಾತುಗಳನ್ನು ಮಾಡುತ್ತಾರಾದರೂ, ನಿಜವಾದ ಮನುಷ್ಯತ್ವವನ್ನು ಸಾಧಿಸಲು ಪ್ರಯತ್ನಿಸುವುದು ಅಗತ್ಯ. ಸಂಪತ್ತು ಬಂದಾಗ ಸ್ನೇಹ, ಹೆಂಡತಿ ಬಂದಾಗ ತಂದೆ-ತಾಯಿಗಳನ್ನು ಮರೆಯಬಾರದು. ಸಮಾಜದಲ್ಲಿ ಗೌರವ ಪಡೆದಿದ್ದರೂ ನಮ್ಮ ಹಳೆಯ ಮೌಲ್ಯಗಳನ್ನು ಮರೆಯಬಾರದು.”

ವೀರಶೈವ ಧರ್ಮದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಗೆ ಮಹತ್ವವಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವಬಂಧುತ್ವದ ತತ್ವಗಳು ಎಲ್ಲರಿಗೂ ದಾರಿ ತೋರಿಸುವ ದೀಪದಂತೆ. ಸೂಗೂರಿನಲ್ಲಿ ನಿರ್ಮಾಣಗೊಂಡ ಶ್ರೀ ಮೃಡಬಸವೇಶ್ವರಸ್ವಾಮಿ ದೇವಸ್ಥಾನದ ಭವ್ಯ ಮಂಡಲೋತ್ಸವವು ಧರ್ಮ ನಿಷ್ಠೆಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.

ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿ ಮಾತನಾಡಿ, “ಗ್ರಾಮಸ್ಥರ ಬಹು ವರ್ಷಗಳ ಸಂಕಲ್ಪ ಇಂದು ಸಫಲವಾಗಿದೆ. ಭೌತಿಕ ಜೀವನಕ್ಕೆ ಸಂಪತ್ತು ಮಾತ್ರವಲ್ಲ, ಧರ್ಮ ಮತ್ತು ರಾಷ್ಟ್ರಪ್ರಜ್ಞೆಯು ಕೂಡ ಅಗತ್ಯ” ಎಂದರು.

ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯರು, “ಶಿವ ಎಂಬ ಶಬ್ದವು ಭವಬಂಧಿ ದಾಟಿಸುವ ಹರಿಕೋಲು. ಗುರುಗಳ ಮಾರ್ಗದರ್ಶನದಲ್ಲಿ ಅರಿವು ಪಡೆದು ಜೀವನವನ್ನು ಸಾರ್ಥಕ ಮಾಡಬೇಕು” ಎಂದು ಹೇಳಿದರು.

ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣಕುಮಾರ್ ಮನುಷ್ಯರಲ್ಲಿ ಯಾವುದೇ ಸಂಪತ್ತು ಇದ್ದರೂ ಮಾನಸಿಕ ಶಾಂತಿ ಇಲ್ಲದಿದ್ದರೆ ಜೀವನ ಅರ್ಥವಿಲ್ಲ. ಸಮೃದ್ಧ ಮತ್ತು ಶಾಂತಿಪೂರ್ಣ ಜೀವನಕ್ಕಾಗಿ ಧರ್ಮವೇ ಆಶಾಕಿರಣ ಎಂದು ಹೇಳಿದರು.

ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಆಧುನಿಕ ಯುಗದಲ್ಲಿಯೂ ನಮ್ಮ ಆದರ್ಶ, ಪರಂಪರೆ ಮತ್ತು ಸಂಸ್ಕೃತಿಯನ್ನು ಮರೆಯಬಾರದು. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಜಗಜ್ಯೋತಿ ಬಸವಣ್ಣನವರು ನೀಡಿದ ಆಧ್ಯಾತ್ಮಿಕ ಅರಿವನ್ನು ಯಾವತ್ತೂ ಮರೆತರೆ ಆಗದು ಎಂದರು.

ಶಿವಮೊಗ್ಗ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಮಾತನಾಡಿ, ಆಧ್ಯಾತ್ಮಿಕ ಜ್ಞಾನವು ನಮಗೆ ಜೀವದಾಯಕವಾಗಿದೆ. ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ಮರೆತುಬಾರದು ಎಂದು ಹಿರಿತನದ ಮಾತು ಹೇಳಿದರು.

ಪ್ರೊ. ಹಾ.ಮಾ. ನಾಗರಾಜ್ ಮಾತನಾಡಿ, ವೀರಶೈವ ಧರ್ಮದ ತತ್ವಗಳನ್ನು ಮರೆಯದೆ ಮುಂದಿನ ತಲೆಮಾರಿಗೆ ಪೋಷಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಲ್ಪನಾ ಪ್ರಾರ್ಥಿಸಿದರು‌. ಶಿವಕುಮಾರ್ ಸಮಾರಂಭದ ಎಲ್ಲರನ್ನು ಸ್ವಾಗತಿಸಿದರು. ನವೀನ ನಿರೂಪಿಸಿದರು.

ಸಮಾರಂಭದ ಆರಂಭದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಸಕಲ ವಾದ್ಯ ವೈಭವ ಮತ್ತು ಕಲಶ ಕನ್ನಡಿಯೊಂದಿಗೆ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಅನ್ನ ದಾಸೋಹವೂ ಜರುಗಿತು.

Leave a Comment