ಜಮೀನಿಗೆ ಲಗ್ಗೆಯಿಟ್ಟು ಬೆಳೆ ನಾಶಗೊಳಿಸಿದ ಕಾಡಾನೆಗಳು
ರಿಪ್ಪನ್ಪೇಟೆ: ಸಮೀಪದ ಕೆಂಚನಾಲ (Kenchanala) ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಳ್ಳಿ ಗ್ರಾಮದ ಮಜರೆ ಕಮದೂರು, ಮೂಡಾಗಲು, ಬಂಕಾಪುರ ಬಳಿ ಕಾಡಾನೆಗಳು (Elephants) ಲಗ್ಗೆಯಿಟ್ಟು ಅಡಿಕೆ, ಬಾಳೆ ತೋಟ ಧ್ವಂಸಗೊಳಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಆಲವಳ್ಳಿಯ ಮಲ್ಲಿಕಾರ್ಜುನ ಮತ್ತು ಮಲ್ಲೇಶ್ ಎಂಬುವರ ಅಡಿಕೆ ತೋಟಕ್ಕೆ ನುಗ್ಗಿ ಬಾಳೆ ಗಿಡವನ್ನು ಮುರಿದು ಹಾಕಿ ಸಾಕಷ್ಟು ನಷ್ಟ ಮಾಡಿವೆ. ಇನ್ನೂ ಬಂಕಾಪುರ, ಮೂಡಾಗಲು ಬಳಿಯ ಕಲ್ಲುಕೆರೆಯಲ್ಲಿ ನೀರು ಕುಡಿದು ನಾಗಾರ್ಜುನಸ್ವಾಮಿ ಎಂಬುವರ ಅಡಿಕೆ ತೋಟದಲ್ಲಿ ತಿರುಗಾಡಿರುವುದರೊಂದಿಗೆ ತೋಟದಲ್ಲಿನ ಹಸಿ ಹುಲ್ಲು ಮೇಯ್ದುಕೊಂಡು ತಂತಿ ಬೇಲಿ ದಾಟಿಕೊಂಡು ಸಂಪರ್ಕ ರಸ್ತೆಯಲ್ಲಿ ಹೋಗಿರುತ್ತವೆಂದು ಹೆಜ್ಜೆ ಗುರುತಿನಿಂದ ತಿಳಿಯಬಹುದಾಗಿದೆ.
ಮುಂಜಾನೆ ಎಂದಿನಂತೆ ರೈತ ನಾಗಾರ್ಜುನಸ್ವಾಮಿ ಮತ್ತು ಮಲ್ಲಿಕಾರ್ಜುನ ಮಲ್ಲೇಶ್ ಇವರು ತೋಟಕ್ಕೆ ಹೋಗಿ ನೋಡಲಾಗಿ ಆನೆಗಳು ದಾಳಿ ನಡೆಸಿರುವುದನ್ನು ದೃಢಪಡಿಸಿಕೊಂಡು ಅರಸಾಳು ಅರಣ್ಯ ಇಲಾಖೆಯವರಿಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.