ಪಾರ್ಲಿಮೆಂಟ್ ಚುನಾವಣೆ ಒಳಗೆ ಅಥವಾ ಬಳಿಕ ಕಾಂಗ್ರೆಸ್ ಅಧಿಕಾರದಲ್ಲಿರಲ್ಲ ; ಕೆಎಸ್ಈ

0 41

ಶಿವಮೊಗ್ಗ: ಪಾರ್ಲಿಮೆಂಟ್ ಚುನಾವಣೆಯ ಒಳಗೆ ಅಥವಾ ಬಳಿಕ ಕಾಂಗ್ರೆಸ್ ಅಧಿಕಾರದಲ್ಲಿರಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.


ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ನಾಯಕ ಬಿ.ಎಲ್ ಸಂತೋಷ್ ಅವರ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಗುರವಾಗಿ ಮಾತನಾಡಿದ್ದಾರೆ. ಆದರೆ ಬಿ.ಎಲ್.ಸಂತೋಷ್ ಆಧಾರವಿಲ್ಲದೆ ಮಾತನಾಡುವುದಿಲ್ಲ. ಸಂತೋಷ್‌ಜಿ ರಾಷ್ಟ್ರೀಯ ನಾಯಕರಾದರೂ ಸಿ.ಟಿ. ರವಿ. ಮತ್ತು ಕೆ.ಎಸ್. ಈಶ್ವರಪ್ಪನವರಂತೆ ಮಾತನಾಡಿದ್ದಾರೆ ಎಂದು ಸಂತೋಷ್‌ಜಿ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.
ಆದರೆ ಈಗಾಗಲೇ ಅವರ ಪಕ್ಷದ ಅನೇಕ ಶಾಸಕರು ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಮೋದಿ ಸರ್ಕಾರಕ್ಕೆ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ.

ಸ್ವತಃ ಪ್ರಿಯಾಂಕ್ ಖರ್ಗೆಯವರೇ ಈ ವರ್ಷ ಅಭಿವೃದ್ಧಿಗೆ ಯಾವುದೇ ಹಣ ಇಲ್ಲ ಎಂದು ಹೇಳಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಮುಗ್ಧ ಜನರಿಗೆ ಟೋಪಿ ಹಾಕಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.


ರಾಜ್ಯದಲ್ಲಿ ಬರಗಾಲ ಬಂದಿದ್ದರೂ ಒಬ್ಬನೇ ಒಬ್ಬ ಮಂತ್ರಿ ರೈತರ ಬಳಿಗೆ ತೆರಳಿ ಅವರ ಕಷ್ಟ ಸುಖ ವಿಚಾರಿಸಿಲ್ಲ. ಭಂಡತನದಿಂದ ಸರ್ಕಾರ ನಡೆಸುತ್ತಾ ಇದ್ದಾರೆ. ತಿಹಾರ್ ಜೈಲಿನಲ್ಲಿ ಇದ್ದು ಬಂದವರು ಬೇರೆ ಜನಪ್ರತಿನಿಧಿಗಳಿಗೆ ವೇದಾಂತ ಹೇಳುತ್ತಿದ್ದಾರೆ ಎಂದು ಕುಟುಕಿದರು.


ಐ.ಎನ್.ಡಿ.ಐ.ಎ. ಮಿತ್ರ ಪಕ್ಷಗಳಲ್ಲಿ ಒಮ್ಮತವಿಲ್ಲ ಎಂದು ಈಗಾಗಲೇ ಸಾಬೀತಾಗಿದೆ. ರಾಷ್ಟ್ರೀಯ ಜನಗಣತಿ ಮಾಡಬೇಕೆಂಬ ಸಲಹೆಗೆ ಸ್ವತಃ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಸೀಟು ಹಂಚಿಕೆ ವಿಚಾರ ಇನ್ನೂ ಬಗೆಹರಿದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಒಳಜಗಳವಿದ್ದು, ಒಂದಾಗಲು ಸಾಧ್ಯವೇ ಇಲ್ಲ ಎಂದರು.
ವಿಪಕ್ಷ ನಾಯಕರ ಆಯ್ಕೆ ನಮ್ಮ ರಾಷ್ಟ್ರೀಯ ನಾಯಕರು ಮಾಡುತ್ತರೆ. ಇಡೀ ರಾಷ್ಟçವನ್ನೇ ಮುನ್ನಡೆಸುವ ಅವರಿಗೆ ಇದು ಒಂದು ದೊಡ್ಡ ವಿಷಯವೇ ಅಲ್ಲ. ಸಮಯ ಬಂದಾಗ ಮಾಡುತ್ತಾರೆ. ಮೊದಲು ನಿಮ್ಮ ಪಕ್ಷದ ಒಳಜಗಳ ಬಗೆಹರಿಸಿಕೊಳ್ಳಿ. ಹಿಂದೆ ಎರಡು ವರ್ಷಗಳ ಕಾಲ ಎಐಸಿಸಿ ಅಧ್ಯಕ್ಷರೇ ಇರಲಿಲ್ಲ. ಈಗಾಗಲೇ ನಿಮ್ಮ ಪಕ್ಷದ ಶಾಸಕರಿಗೆ ಪಕ್ಷದ ಮೇಲೇ ವಿಶ್ವಾಸವಿಲ್ಲ. ರಾಜ್ಯದಲ್ಲಿ ಮತ್ತೆ ನೂರಕ್ಕೆ ನೂರು ಆಪರೇಷನ್ ಕಮಲ ನಡೆದೇ ನಡೆಯುತ್ತದೆ. ಈ ದೇಶದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದರು.


ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಸೆ.8ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ಯೋಜನೆ, ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಸರ್ಕಾರ ರದ್ದುಗೊಳಿಸಿದೆ. ಮನ ಬಂದಂತೆ ವಿದ್ಯುತ್ ಕಡಿತ ಮಾಡುತ್ತಿದ್ದಾರೆ. ವಿದ್ಯುತ್ ಒದಗಿಸುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಸರ್ಕಾರದ ಎಲ್ಲಾ ನಿರ್ಲಕ್ಷ್ಯ ಧೋರಣೆ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯಾದ್ಯಂತೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಬೆಂಗಳೂರಿನಲ್ಲಿ ಸ್ವತಃ ಬಿ.ಎಸ್. ಯಡಿಯೂರಪ್ಪನವರು ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದರು.

Leave A Reply

Your email address will not be published.

error: Content is protected !!