ವಿವಿಧ ಬೇಡಿಕೆಗಳ ಈಡೇರಿಕೆಗೆ ಕಟ್ಟಡ ಕಾರ್ಮಿಕರ ಸಂಘದಿಂದ ಸರ್ಕಾರಕ್ಕೆ ಒತ್ತಾಯ
ಹೊಸನಗರ: ಕಟ್ಟಡ ಕಾರ್ಮಿಕರಿಗೆ ಶೈಕ್ಷಣಿಕ ವರ್ಷದ ಹಣ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ ತಕ್ಷಣ ಬಿಡುಗಡೆ ಮಾಡಬೇಕೆಂದು ಕಾರ್ಮಿಕರ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಕಟ್ಟಡ ಕಾರ್ಮಿಕರ ರಾಜ್ಯ ಸಂಘದ ಉಪಾಧ್ಯಕ್ಷ ಎನ್ ರವೀಂದ್ರ ಸಾಗರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಪ್ರಭಾರ ತಹಶೀಲ್ದಾರ್ ರಾಕೇಶ್ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ರವೀಂದ್ರ ಸಾಗರ್, 2021-22ನೇ ಸಾಲಿನಲ್ಲಿ ಸಲ್ಲಿಸಲಾಗಿರುವ ಶೈಕ್ಷಣಕ ವರ್ಷದ ಅರ್ಜಿಗಳಿಗೆ ಧನ ಸಹಾಯ ಬಿಡುಗಡೆಯಾಗಿಲ್ಲ. ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಅನ್ವಯವಾಗುವಂತೆ ಸರ್ಕಾರ ಜಾರಿಗೊಳಿಸಿಲ್ಲ. 60 ವರ್ಷದ ನಂತರ ಜೀವಿತಾವಧಿ ಪ್ರಮಾಣ ಪತ್ರಗಳನ್ನು ಕಂದಾಯ ಇಲಾಖೆಯ ಬದಲಾಗಿ ಕಾರ್ಮಿಕ ಇಲಾಖೆಗೆ ನೀಡುವಂತೆ ಸ್ವಂತ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯ ಧನ ನೀಡಬೇಕು. ಕಾರ್ಮಿಕ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಕಟ್ಟಡ ನಿರ್ಮಾಣ ಕೆಲಸಗಳಿಗೆ ತೊಡಕಾಗಿರುವ ಮರಳು ಸಮಸ್ಯೆಯನ್ನು ಬಗೆಹರಿಸಬೇಕು. ಕಟ್ಟಡ ಕಾರ್ಮಿಕರಿಗೆ ತಿಂಗಳ ವೇತನ ಕನಿಷ್ಟ 26 ಸಾವಿರ ರೂ. ಮತ್ತು ಪಿಂಚಣಿ 10 ಸಾವಿರ ರೂ. ನೀಡಬೇಕು. ನಿಜವಾದ ಕಟ್ಟಡ ಕಾರ್ಮಿಕರು ನವೀಕರಣದಲ್ಲಿ ಬೇಡವಾದ ಅನಾವಶ್ಯಕವಾದ ವಿಚಾರದಲ್ಲಿ ನವೀಕರಣ ಮಾಡದೇ ಇರುವ ಹಾಗೂ ನವೀಕರಣ ಕಾರ್ಡ್ಗಳನ್ನು ಒಂದೇ ವರ್ಷಕ್ಕೆ ನಿಗದಿಪಡಿಸಿರುವ ಬಗ್ಗೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಟ್ಟಡ ಕಾರ್ಮಿಕ ಸಂಘದ ಓಂಕೇಶ, ಶ್ರೀನಿವಾಸ, ದೇವೆಂದ್ರ, ವೆಂಕಟೇಶ, ಅಂಬೇಡ್ಕರ್ ಕಾಲೋನಿ ದೇವೇಂದ್ರ, ಸೋಮಶೇಖರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.