ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿರ್ವಹಿಸಿ ನ್ಯಾಯ ಒದಗಿಸಬೇಕು ; ನ್ಯಾ.ಸಿ.ಚಂದನ್

0 205

ಶಿವಮೊಗ್ಗ: ಅತ್ಯಂತ ಸುರಕ್ಷಿತವಾಗಿರುಬೇಕಾದ ಸ್ಥಳದಲ್ಲೇ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಖೇದಕರ ವಿಷಯವಾಗಿದ್ದು, ಇಂತಹ ಪ್ರಕರಣಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಣೆ ಮಾಡಿ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಚಂದನ್ ಹೇಳಿದರು.

ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಶಿವಮೊಗ್ಗ ಇವರ ಸಹಯೋಗದಲ್ಲಿ ಇಂದು ಆಲ್ಕೊಳದ ಚೈತನ್ಯ ಇಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ -2005 ಕುರಿತು ಭಾಗಿದಾರ ಇಲಾಖೆಗಳ ಪಾತ್ರದ ಕುರಿತಂತೆ ಆಯೋಜಿಸಲಾಗಿರುವ ಎರಡು ದಿನಗಳ ಓರಿಯಂಟೇಷನ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರನ್ನು ನಾವು ಸಮಾನವಾಗಿ ಕಾಣಬೇಕು. ಪ್ರಕೃತಿ ಬೇಧ ಭಾವ ಮಾಡುವುದಿಲ್ಲ. ಆದರೆ ಮನುಷ್ಯ ಮಾಡುತ್ತಾನೆ. ಅನಾದಿ ಕಾಲದಿಂದ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಾ ಬಂದಿದೆ. ನಮ್ಮ ಸಂವಿದಾನ ಸಮಾನತೆಯನ್ನು ನೀಡಿದ್ದರೂ ತಾರತಮ್ಯ ಇನ್ನೂ ಇದೆ.

ಕುಟುಂದ ಮಾನ ರಕ್ಷಣೆ, ಭಯ ಇತರೆ ನೂರಾರು ಕಾರಣಗಳಿಂದ ಅನೇಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿಲ್ಲ. ತಡೆಯಲಿಕ್ಕೆ ಸಾಧ್ಯವೇ ಇಲ್ಲ ಎನ್ನುವಾಗ ಪ್ರಕರಣಗಳನ್ನು ದಾಖಲಿಸಲು ಬರುತ್ತಾರೆ. ಅವರ ಸಮಸ್ಯೆ ಕುರಿತು ಪೊಲೀಸರು ಸೇರಿದಂತೆ ಭಾಗೀಧಾರ ಇಲಾಖೆಗಳು ಸಮಾಧಾನದಿಂದ ಆಲಿಸಿ, ಮೌಲ್ಯಾಧಾರಿತ ನ್ಯಾಯ ಒದಗಿಸಬೇಕು.

ಒಂದು ಪ್ರಕರಣ ಬಂದಾಗ ಅದನ್ನು ಸಮಾಧಾನದಿಮದ ಪರಿಶೀಲಿಸಿ ಪುನಶ್ಚೇತನ ಸಾಧ್ಯವಿದ್ದರೆ ಅದಕ್ಕೆ ಒತ್ತು ನೀಡಬೇಕು. ಒಂದು ಪ್ರಕರಣ ಬಂದಾಗ ಸಮಸ್ಯೆ ಮೂಲ ಅರಿಯುವುದು ತುಂಬಾ ಮುಖ್ಯವಾಗುತ್ತದೆ.

ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಸಾಮಾನ್ಯವಾಗಿ ಸಂತ್ರಸ್ತೆ ಹೆಂಡತಿಯೇ ಆಗಿರುತ್ತಾಳೆ. ಆದರೆ ಈ ಕಾಯ್ದೆಯ ವ್ಯಾಪ್ತಿ ತುಂಬಾ ವಿಶಾಲವಾಗಿದೆ. ಅದರಲ್ಲಿ ರಕ್ತ ಸಂಬಂಧಿಗಳು, ಲಿವಿಂಗ್ ಟುಗೆದರ್ ರೀತಿಯ ಸಂಬಂಧಗಳನ್ನೂ ಒಳಗೊಳ್ಳುತ್ತದೆ. ಈ ಎಲ್ಲರಿಗೆ ನ್ಯಾಯ ಒದಗಿಸುವ ಬಗ್ಗೆ ಯೋಚಿಸಬೇಕು. ಕಾಯ್ದೆ ಯನ್ನು ಅಧ್ಯಯನ ನಡೆಸಿ, ಆಳಕ್ಕೆ ಹೋದಾಗ ಹೆಚ್ಚಿನ ಜನರಿಗೆ ಅನುಕೂಲ ಆಗಲಿದೆ. ಒಂದು ಪ್ರಕರಣವನ್ನು ಹೇಗೆ ನಿರೂಪಿಸುತ್ತೀರೋ ಅದರ ಮೇಲೆ ಆದೇಶ ಅವಲಂಬಿತವಾಗಿರುತ್ತದೆ. ಆದ್ದರಿಂದ ಅತ್ಯಂತ ಸಮರ್ಪಕವಾಗಿ ನಮ್ಮ ಕೆಲಸವನ್ನು ಮಾಡಬೇಕು. ಡಿಐಆರ್(ಡೊಮೆಸ್ಟಿಕ್ ಇನ್ಸಿಡೆಂಟ್ ರಿಪೋರ್ಟ್) ಹಾಕುವಾಗ ಕಾಳಜಿ ವಹಿಸಬೇಕು ಎಂದರು.

ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ನಮ್ಮದು ಪುರುಷ ಪ್ರಧಾನ ಸಮಾಜ, ಭ್ರೂಣಾವಸ್ಥೆಯಿಂದಲೇ ತಾರತಮ್ಯ ಧೋರಣೆ ಇದೆ. ನಮ್ಮದು ಮುಂದುವರೆ ಸಮಾಜವೆಂದು ಹೇಳಲು ಕೆಲವೊಮ್ಮೆ ಹಿಂಜರಿಕೆ ಆಗುತ್ತದೆ.

ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆ ಕುರಿತು ಕಾಯ್ದೆ ಬೇಕೆಂದು 193 ದೇಶಗಳು ಸಹಿ ಮಾಡಿವೆ. 2005 ರಲ್ಲಿ ಕೌಟುಂಬಿಕ ಹಿಂಸೆಯಿಂದ ರಕ್ಷಣೆ ಸಿಗಬೇಕೆಂದು ಕಾಯ್ದೆ ಜಾರಿಯಾಗುತ್ತದೆ. ಆದರೆ ಇದರ ಬಗ್ಗೆ ತಿಳುವಳಿಕೆ ಕೊರತೆ ಇದೆ.


ಭಾಗೀದಾರ ಇಲಾಖೆಗಳು ಈ ಕಾಯ್ದೆ ಕುರಿತು ಅಧ್ಯಯನ ಶೀಲರಾಗಿ ಸೂಕ್ಷ್ಮವಾಗಿ ನಿರ್ವಹಿಸಬೇಕು. ಆದರೆ ಸೆಕ್ಷನ್ 498 ದುರ್ಬಳಕೆ ಆಗುತ್ತಿದ್ದು. ಹಲವು ನೊಂದವರ ಸಂಘಗಳ ಉದ್ಭವ ಆಗಿವೆ. ಆದ್ದರಿಂದ ಕಾಯ್ದೆಯ ದುರ್ಬಳಕೆ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೌಟುಂಬಿಕ ಸಮಸ್ಯೆಗಳು ಮೊದಲು ಪೊಲೀಸರ ಹತ್ತಿರ ಬರುತ್ತವೆ. ಸಮಾಧಾನದಿಂದ ಕೇಳಿ ತಿಳಿದು, ಸೂಕ್ತವಾಗಿ ಸ್ಪಂದಿಸಬೆಕು. ಇತರೆ ಭಾಗಿದಾರ ಇಲಾಖೆಗಳೂ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಕೌಟುಂಬಿಕ ದೌರ್ಜನಕ್ಕೊಳಗಾದವರಿಗೆ ಇರುವ ಸಂರಕ್ಷಣೆ ಬಗ್ಗೆ ಕ್ರಮ, ಸಾಂತ್ವನ, ಆಪ್ತ ಸಮಾಲೋಚನೆ, ಕಾಯ್ದೆ ಅನುಷ್ಠಾನದಲ್ಲಿ ಜವಾಬ್ದಾರಿ ನಿರ್ವಹಣೆ ಮಾಡಬೇಕು. ಪ್ರತಿ ಹಂತದಲ್ಲೂ ಇತರೆ ಇಲಾಖೆಗಳ ಸಮನ್ವಯ ಮುಖ್ಯ. ನೊಂದವರಿಗೆ ಕಾಯ್ದೆಯಡಿ ಏಕ ಗವಾಕ್ಷಿ ವ್ಯವಸ್ಥೆ ಇದೆ.

ಮಹಿಳೆಯರ ತೇಜೋವಧೆ ಆಗುವಂತಹ ಸೈಬರ್ ಅಪರಾಧ ಸೇರಿದಂತೆ ಅನೇಕ ರೀತಿಯ ಅಪರಾಧಗಳು ಜರುಗುತ್ತಿರುತ್ತವೆ. ದೌರ್ಜನ್ಯಕ್ಕೀಡಾದವರು, ಸಂತ್ರಸ್ತರು ತಮ್ಮ ಅಹವಾಲು, ತೊಂದರೆಗಳನ್ನು ಮಹಿಳಾ ಪೊಲೀಸ್ ಠಾಣೆ, ಇತರೆ ಠಾಣೆಗಳು ಹಾಗೂ 112 ಗೆ ಕರೆ ಮಾಡಿ ತಿಳಿಸಬಹುದು. ಹಾಗೂ ಆನ್‍ಲೈನ್‍ನಲ್ಲಿ ಸಹ ದೂರು ನೀಡಬಹುದು. ಹಾಗೂ ksp.gov.in ವೆಬ್‍ಸೈಟ್‍ನಲ್ಲಿ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿ, ದೂರು ನೀಡುವುದು ಸೇರಿದಂತೆ ಹಲವಾರು ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಬಿ.ಹೆಚ್.ಕೃಷ್ಣಪ್ಪ, ಎಸ್‍ಎಂಎಸ್‍ಎಸ್ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಚಂದ್ರಪ್ಪ ಎನ್, ವಕೀಲರು, ಪೊಲೀಸರು, ಸಿಬ್ಬಂದಿ ಹಾಜರಿದ್ದರು.

Leave A Reply

Your email address will not be published.

error: Content is protected !!