Hosanagara | ಮಳೆ ಕೊರತೆ ನಡುವೆಯೂ ಬಿರುಸುಗೊಂಡ ಕೃಷಿ ಚಟುವಟಿಕೆ

0 55

ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕಿನಲ್ಲಿ 9300 ಹೆಕ್ಟೇರ್ ಕೃಷಿ ಭೂ ಪ್ರದೇಶದಲ್ಲಿ ಕಬ್ಬು, ಮೆಕ್ಕೆಜೋಳ ಮತ್ತು ಭತ್ತ ಬೆಳೆಯುವ ಭೂಮಿ ಇದ್ದು ಜೂನ್ ಅಂತ್ಯದೊಳಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಕೃಷಿ ಬಿತ್ತನೆ ಕಾರ್ಯದಲ್ಲಿ ವಿಳಂಬವಾಗಿದೆ ಎಂದು ಹೊಸನಗರ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್‌ ಹೆಗಡೆ ತಿಳಿಸಿದರು.

ರಿಪ್ಪನ್‌ಪೇಟೆ ರೈತ ಸಂಪರ್ಕ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಭತ್ತ ಬಿತ್ತನೆಗೆ 8600 ಹೆಕ್ಟೇರ್ ಗುರಿ ಹೊಂದಿದ್ದು ಮಳೆ ವಿಳಂಬದ ಕಾರಣ ಭತ್ತದ ಸಸಿಮಡಿ ತಯಾರಿ ಪ್ರಗತಿಯಲ್ಲಿದೆ. ಅಲ್ಲದೆ ಮೆಕ್ಕೆಜೋಳ ಬಿತ್ತನೆ ಗುರಿ 500 ಹೆಕ್ಟೇರ್ ಆಗಿದ್ದು ಈವರೆಗೆ 450 ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಹಾಗೇಯೆ 200 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆ ಕಾರ್ಯ ಮಾಡುವ ಮೂಲಕ ಒಟ್ಟು 8600 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಮಾಡಲಾಗುತ್ತಿದೆ ಎಂದರು.

ಜೂನ್ ತಿಂಗಳಲ್ಲಿ ವಾಡಿಕೆಯಂತೆ 661 ಮಿ.ಮೀ.ನಷ್ಟು ಮಳೆಯಾಗಬೇಕಿದ್ದು ಆದರೆ ಜೂನ್ 30ರ ಅಂತ್ಯಕ್ಕೆ 162 ಮಿ.ಮೀ.ನಷ್ಟು ಮಾತ್ರ ಮಳೆಯಾಗುವ ಮೂಲಕ ಶೇಕಡಾ 75 ರಷ್ಟು ಮಳೆ ಕೊರತೆಯಾಗಿರುತ್ತದೆ. ಅಲ್ಲದೇ ಜುಲೈ 1 ರಿಂದ 5 ರವರೆಗೆ ತಾಲ್ಲೂಕಿನಲ್ಲಿ 370 ಮಿ.ಮೀ.ನಷ್ಟು ಮಳೆಯಾಗಿರುತ್ತದೆಂದು ವಿವರಿಸಿದ ಅವರು, ಪ್ರಸ್ತುತ ಗೊಬ್ಬರದ ದಾಸ್ತಾನು ಸಾಕಷ್ಟು ಇದ್ದು ಯಾವುದೇ ಕೊರತೆ ಇರುವುದಿಲ್ಲ. ಯೂರಿಯಾ ಗೊಬ್ಬರ 130 ಟನ್, ಡಿ.ಎ.ಪಿ.150 ಟನ್, ಪೊಟ್ಯಾಷ್ 110 ಟನ್, ಎನ್.ಡಿ.ಕೆ. ಕಾಂಪ್ಲೆಕ್ಸ್ 550 ಟನ್ ಗೊಬ್ಬರ ದಾಸ್ತಾನಿದ್ದು ರೈತರು ಗೊಬ್ಬರಕ್ಕಾಗಿ ಪರದಾಡುವ ಅಗತ್ಯ ಇರುವುದಿಲ್ಲ. ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಗೊಬ್ಬರ ಬಿತ್ತನೆ ಬೀಜ ಇನ್ನಿತರ ಕೃಷಿ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಬಹುದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕೆರೆಹಳ್ಳಿ ಹೋಬಳಿ ರೈಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಾಂತಮೂರ್ತಿಯವರು ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ತಳಿಯ ಭತ್ತದ ತಳಿಗಳಾದ ಅಭಿಲಾಷ 100 ಕ್ವಿಂಟಾಲ್, 1001 ತಳಿಯ 75 ಕ್ವಿಂಟಾಲ್, ಜಯಾ 10 ಕ್ವಿಂಟಾಲ್, ಆರ್.ಎನ್.ಆರ್.75 ಕ್ವಿಂಟಾಲ್ ಹಾಗೂ ಮೆಕ್ಕೆಜೋಳ ತಳಿಗಳಾದ ಕಾವೇರಿ 20 ಕ್ವಿಂಟಾಲ್, ದ್ರೋಣ 15 ಕ್ವಿಂಟಾಲ್, ಕಾವೇರಿ ಸೂಪರ್ 5 ಕ್ವಿಂಟಾಲ್, ಕಾವೇರಿ ಸಿಪಿ 5 ಕ್ವಿಂಟಾಲ್ ಬಿತ್ತನೆ ಬೀಜವನ್ನು ತರಿಸಲಾಗಿದ್ದು ಈಗಾಗಲೇ ಹೋಬಳಿ ವ್ಯಾಪ್ತಿಯ ರೈತರು ಬಿತ್ತನೆ ಬೀಜವನ್ನು ಖರೀದಿಕೊಂಡು ಹೋಗುತ್ತಿದ್ದಾರೆಂದು ವಿವರಿಸಿದರು.

ಈ ಸಂದರ್ಭದಲ್ಲಿ ಹೊಸನಗರ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮಾರುತಿ, ರಿಪ್ಪನ್‌ಪೇಟೆ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ವರ್ಗ ಹಾಜರಿದ್ದರು.

Leave A Reply

Your email address will not be published.

error: Content is protected !!