ಅಶಕ್ತರ ನೊಂದವರ ಬದುಕಿಗೆ ಆಸರೆಯಾಗುವಂತೆ ಸಂಘ ಸಂಸ್ಥೆಗಳವರಿಗೆ ಶಾಸಕ ಬೇಳೂರು ಕರೆ
ಹೊಸನಗರ : ಅಶಕ್ತರ, ನೊಂದವರ, ದೀನದಲಿತರ, ಅನಾರೋಗ್ಯ ಪೀಡಿತರ ಬದುಕಿಗೆ ಆಸರೆಯಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ನೆರವಾಗಬೇಕೆಂದು ಸಂಘ ಸಂಸ್ಥೆಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಕರೆ ನೀಡಿದರು.
ಅವರು ಪಟ್ಟಣದ ಹಳೆ ಕೋರ್ಟ್ ಸರ್ಕಲ್ ನಲ್ಲಿ ಶ್ರೀ ಗಜಾನನ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿದ 43ನೇ ವರ್ಷದ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಅನಾವೃಷ್ಟಿ ಎದುರಿಸುತ್ತಿದ್ದು ಈ ಎಲ್ಲ ಸಂಕಷ್ಟಗಳ ನಡುವೆಯೂ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದು ಶ್ರೀ ಸಿದ್ಧಿವಿನಾಯಕ ಎಲ್ಲರ ಸಂಕಷ್ಟ ದೂರ ಮಾಡಿ ಸುಖಕರ ಜೀವನ ಉಂಟುಮಾಡಲೆಂದು ಹಾರೈಸಿದರು.
ಈ ಸಮಾರಂಭದಲ್ಲಿ ಯುವ ಮುಖಂಡರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಾಲಗದ್ದೆ ಉಮೇಶ್, ಕಟ್ಟೆ ಸುರೇಶ್, ಎ.ವಿ ಮಲ್ಲಿಕಾರ್ಜುನ, ಬಜಾಜ್ ಗುರುರಾಜ್, ಗುರುಕಿರಣ್ ಮೊದಲಾದವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಗಜಾನನ ಸೇವಾ ಸಮಿತಿ ಅಧ್ಯಕ್ಷ ಹಾಡಿ ಗೋಪಾಲ ಸ್ವಾಗತಿಸಿದರು. ಪಿ ಮನೋಹರ್ ಕಾರ್ಯಕ್ರಮ ನಿರೂಪಿಸಿದರು. ಟಿ.ಆರ್ ಸುನಿಲ್ ವಂದಿಸಿದರು.