ಗಡಿಬಿಡಿಯಲ್ಲಿ ಬಿವೈಆರ್ ಶಿಷ್ಟಚಾರ ಉಲಂಘಿಸಿದ್ದಾರೆ ; ಆಯನೂರು ಮಂಜುನಾಥ್
ಶಿವಮೊಗ್ಗ : ಸಂಸದ ಬಿ.ವೈ.ರಾಘವೇಂದ್ರರವರು (B.Y Raghavendra) ಗಡಿಬಿಡಿಯಲ್ಲಿ ಶಿಷ್ಟಚಾರವನ್ನು ಉಲಂಘಿಸಿ ಬೈಪಾಸ್ ರಸ್ತೆಯ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮವಾಗದೆ ಬಿಜೆಪಿ ಕಾರ್ಯಕ್ರಮವಾಗಿದೆ ಎಂದು ಕೆ.ಪಿ.ಸಿ.ಸಿ.ವಕ್ತಾರ ಆಯನೂರು ಮಂಜುನಾಥ್ (Ayanuru Manjunath) ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದ ಬಿ.ವೈ.ರಾಘವೇಂದ್ರರವರು ಇತ್ತೀಚೆಗೆ ಕಾಮಗಾರಿಗಳು ಮುಗಿಯದೇ ಮತ್ತು ಮುಗಿದಿದೆ ಎಂದು ಅಧಿಕಾರಿಗಳ ಪ್ರಮಾಣ ಪತ್ರ ಇಲ್ಲದೆ ಗಡಿಬಿಡಿಯಲ್ಲಿ ತಾವೇ ಟೇಪು ಕಟ್ಟು ಮಾಡಿ ಉದ್ಘಾಟನೆ ಮಾಡುತ್ತಾರೆ. ಇಂತಹ ಉದ್ಘಾಟನ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿರುವುದಿಲ್ಲ. ಕೆಲವು ಬಿಜೆಪಿ ಮುಖಂಡರನ್ನು ಹಿಂಬಾಲಕರನ್ನು ಕರೆದುಕೊಂಡು ಹೋಗಿ ಉದ್ಘಾಟನೆ ಮಾಡುವ ಈ ಪರಿ ಅತ್ಯಂತ ಕೆಟ್ಟ ಸಂಸ್ಕೃತಿಯಾಗಿದೆ ಎಂದು ಟೀಕಿಸಿದರು.
ನಿನ್ನೆ ಕೂಡ ಸೇತುವೆಯನ್ನು ಸಂಸದರು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಿಜೆಪಿಯ ಶಾಸಕರುಗಳಾದ ರುದ್ರೇಗೌಡರಾಗಲಿ, ಅರುಣ್ರವರಾಗಲಿ, ಚನ್ನಬಸಪ್ಪನವರಾಗಲಿ ಕರೆದಿಲ್ಲ. ಅಧಿಕಾರಿಗಳನ್ನು ಕೇಳಿದರೆ, ನಮಗೆ ಗೊತ್ತೇ ಇಲ್ಲ ಎನ್ನುತ್ತಾರೆ. ಇದು ಸರ್ಕಾರದ ಕಾರ್ಯಕ್ರಮವಲ್ಲವೇ, ಅಧಿಕಾರಿಗಳು ಈ ಕಾರ್ಯಕ್ರಮವನ್ನು ರೂಪಿಸಬೇಕು. ಅದನ್ನು ಬಿಟ್ಟು ಕೇವಲ ಕೆಲವು ಬಿಜೆಪಿ ಮುಖಂಡರನ್ನು ಇಟ್ಟುಕೊಂಡು ಈ ರೀತಿ ಉದ್ಘಾಟನೆಗಳನ್ನು ಚುನಾವಣೆಯ ಹಿನ್ನೆಲೆಯಲ್ಲಿ ಮಾಡುತ್ತಾ ಹೊರಟಿರುವುದು ಸರಿಯಲ್ಲ ಎಂದರು.
ಇಡೀ ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾಮಗಾರಿಗಳೆಲ್ಲವೂ ಬಿಜೆಪಿ ನಾಯಕರ, ಮನೆಗಳ ಇಲ್ಲವೇ ಆಸ್ತಿಗಳ ಸುತ್ತ ತಿರುಗಿ ಅತ್ಯಂತ ಶೀಘ್ರವಾಗಿ ನಡೆಯುತ್ತವೆ. ರಿಂಗ್ರೋಡ್ ಆಗಲಿ, ರಸ್ತೆಗಳಾಗಲಿ, ಬಿಜೆಪಿ ನಾಯಕರಿಗೆ ಅನುಕೂಲವಾಗುವಂತೆ ರೂಪುಗೊಳ್ಳುತ್ತವೆ ಎಂದು ಆರೋಪಿಸಿದ ಅವರು, ಈ ಕಾಮಗಾರಿಗಳು ಪೂರ್ಣ ಮುಗಿಯದೇ ಇದ್ದರೂ ಕೂಡ ಏಕೆ ಅವಸರದಿಂದ ಉದ್ಘಾಟನೆ ಮಾಡುತ್ತಾರೋ ಗೊತ್ತಿಲ್ಲ . ಕಾಟಾಚಾರಕ್ಕೆ ಯಾವುದು ಉದ್ದೇಶದಿಂದ ಶಿಷ್ಟಚಾರಗಳನ್ನು ಉಲ್ಲಂಘಿಸಿ ಮಾಡುವ ಇಂತಹ ಕೆಲಸಗಳು ಸಾರ್ವಜನಿಕರಿಗೆ ಸಂಶಯ ತರುತ್ತವೆ. ಇವರೇನು ತಮ್ಮ ಮನೆಯಿಂದ ದುಡ್ಡು ಹಾಕಿ ಕಾಮಗಾರಿಗಳನ್ನು ಮಾಡಿರುವುದಿಲ್ಲ. ಇದು ಜನರ ದುಡ್ಡು, ಜನರ ಪಾಲ್ಗೊಳ್ಳುವಿಕೆ ಮುಖ್ಯವಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ, ಸರ್ಕಾರಿಯ ಯಾವುದೇ ಅಧಿಕಾರಿಗಳನ್ನು ಇದರಲ್ಲಿ ಪಾಲ್ಗೊಳ್ಳುವಂತೆ ನಡೆದುಕೊಂಡಿಲ್ಲ ಎಂದರು.
ಸಿಗಂದೂರು ಸೇತುವೆಗೆ ಬಿಜೆಪಿಯ ರಾಷ್ಟ್ರೀಯ ನಾಯಕ ಗಡ್ಕಾರಿರವರೇ ಶಂಕು ಸ್ಥಾಪನೆ ಮಾಡಿದ್ದರು. ಆ ಕೆಲಸ ಎಲ್ಲಿ ಸಾಗಿದೆ ಅಲ್ಲೇಕೆ ವೇಗವಾಗಿ ಮಾಡುತ್ತಿಲ್ಲ. ತಾಳಗುಪ್ಪದಿಂದ ಲಯನ್ ಸಫಾರಿಯವರೆಗೆ 4 ಪಥ ರಸ್ತೆಗೆ 650 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಹಿಂದೆ 6 ಸಾವಿರ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಎಂದಿದ್ದರು. ಹೀಗೇ ಒಂದೊಂದು ಕಾಮಗಾರಿಗೆ ಪದೇ ಪದೇ ಪ್ರತ್ಯೇಕವಾಗಿ ಹೆಸರಿಸುತ್ತ ತಾವು ಬಹಳ ಸಂಖ್ಯೆಯಲ್ಲಿ ಕಾಮಗಾರಿಗಳನ್ನು ಮಾಡಿರುವೆ ಎಂದು ಸಂಸದರು ಹೇಳಲು ಹೊರಟಂತೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್ ಪ್ರಮುಖರಾದ ಹಿರಣ್ಣಯ್ಯ, ಜಿ.ಪದ್ಮನಾಬ್, ಶಿ.ಜು.ಪಾಶ, ಧೀರರಾಜ್ ಹೊನ್ನಾವಿಲೆ, ಲೋಕೇಶ್, ಆಯನೂರು ಸಂತೋಷ್, ಕೃಷ್ಣ, ಐಡಿಯಲ್ ಗೋಪಿ ಇದ್ದರು.