ನಗರ ನಿತಿನ್ ಮೇಲೆ ಹಲ್ಲೆ,
ಆರ್ಯ ಈಡಿಗ ಯುವ ಘಟಕ ಖಂಡನೆ
ಹೊಸನಗರ ; ಕ್ಷುಲ್ಲಕ ಕಾರಣಕ್ಕೆ ಹೊಸನಗರ ತಾಲೂಕು ಆರ್ಯ ಈಡಿಗ ಸಂಘದ ಯುವಘಟಕದ ಪ್ರಧಾನ ಕಾರ್ಯದರ್ಶಿ ನಗರ ನಿತೀನ್ ಮೇಲೆ ನಿನ್ನೆ ಕೆಲವು ಕಿಡಿಗೇಡಿಗಳು ಬಿದನೂರು ಸಮೀಪ ನೆಡೆಸಿರುವ ಹಲ್ಲೆಯನ್ನು ಯುವಘಟಕವು ತೀವ್ರವಾಗಿ ಖಂಡಿಸಿದೆ.
ಇಂದು ಯುವ ಘಟಕದ ಅಧ್ಯಕ್ಷ ರಮೇಶ್ ನರ್ಲೆ ಸುದ್ದಿಗಾರರೊಂದಿಗೆ ಮಾತನಾಡಿ, ನಿತಿನ್ ಅವರ ರಾಜಕೀಯ ಬೆಳವಣಿಗೆ ಸಹಿಸದ ಕೆಲವು ಕಿಡಿಗೇಡಿಗಳು, ಕರಿಮನೆ ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ್ ಜೊತೆಗೂಡಿ ಭಾನುವಾರ ರಾತ್ರಿ ನಿತಿನ್ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ಜಖಂಗೊಳಿಸಿ ನಿತಿನ್ ಮೇಲೆ ಹಲ್ಲೆ ಮಾಡಿದ್ದು, ನಿತಿನ್ ಕಣ್ಣಿಗೆ ತೀವ್ರತರದ ಗಾಯ ಮಾಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೆ ಬ್ಯಾನರ್ ಕಟ್ಟುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಹಾಗೂ ನಿತಿನ್ ಮಧ್ಯೆ ವ್ಯಾಜ್ಯ ನಡೆದಿತ್ತು. ಇದು ಹಲ್ಲೆಗೆ ಕಾರಣ ಇರಬಹುದು ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದರು.
ತಾಲೂಕು ಬಿಜೆಪಿ ಯುವ ಘಟಕದ ಅಧ್ಯಕ್ಷರೂ ಆಗಿರುವ ನಗರ ನಿತಿನ್ ಅವರ ಮೇಲಿನ ಹಲ್ಲೆಯನ್ನು ಆರ್ಯ ಈಡಿಗ ಯುವ ಘಟಕವು ತೀವ್ರವಾಗಿ ಖಂಡಿಸುತ್ತಿದ್ದು, ಆರೋಪಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆಯನ್ನು ಒತ್ತಾಯಿಸುತ್ತದೆ ಎಂದಿದ್ದಾರೆ. ಈ ವೇಳೆ ಯುವ ಘಟಕದ ಉಪಾಧ್ಯಕ್ಷ ಮಂಡಾನಿ ಧನಂಜಯ, ಷಣ್ಮುಖ, ಸಹ ಕಾರ್ಯದರ್ಶಿ ಸತ್ಯನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.