ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಆನವಟ್ಟಿ ಮೆಸ್ಕಾಂ ಎಇಇ ಜಿ. ರಮೇಶ್
ಶಿವಮೊಗ್ಗ : ಇಂದು ಆನವಟ್ಟಿ ಮೆಸ್ಕಾಂ ಕಛೇರಿಗೆ ಹೋಗಿ ಎ.ಇ.ಇ. ಜಿ. ರಮೇಶ್ ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ಎಲೆಕ್ಟ್ರಿಕ್ ಕಂಟ್ರಾಕ್ಟರ್ ಪ್ರದೀಪ್ ಜಿ. ಎಂಬುವವರಿಂದ 20 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರರು ಬಂಧಿಸಿದ್ದಾರೆ.
ಪ್ರದೀಪ್ ಜಿ, ಬಿನ್. ಗುಡ್ಡಪ್ಪ, ಎಲೆಕ್ಟ್ರಿಕ್ ಕಂಟ್ರ್ಯಾಕ್ಟರ್, ಬೆಟ್ಟದಕೊರ್ಲಿ ಗ್ರಾಮ, ಕುಪ್ಪಗಡ್ಡೆ ಮೋಸ್ಟ್, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರು ಕಳೆದ 6 ವರ್ಷಗಳಿಂದ ಕೆಇಬಿ ಇಲಾಖೆಯಲ್ಲಿ ಕ್ಲಾಸ್ 1 ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರು ಸೊರಬ ತಾಲ್ಲೂಕು ಕೃಷಿ ಪಂಪ್ಸೆಟ್ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ವರ್ಕ್ ಆರ್ಡರ್ ಆಗಿದ್ದು, ಈ ಎಲ್ಲಾ ಕಾಮಗಾರಿಗಳ ಲೈನ್ ವರ್ಕ್ ಮುಕ್ತಾಯಗೊಂಡಿದೆ. ಅವುಗಳಿಗೆ 25 ಕೆ.ವಿ.ಎ. ಟಿಸಿಗಳನ್ನು ಅಳವಡಿಸುವ ಕೆಲಸ ಬಾಕಿಯಿದ್ದುದರಿಂದ ಆ ಬಗ್ಗೆ ದೂರುದಾರರು ಒಟ್ಟು 07 ಟಿ.ಸಿ.ಗಳನ್ನು ಕೊಡಲು ಕೇಳಿದಾಗ ಎ.ಇ.ಇ. ರಮೇಶ್ 20 ಸಾವಿರ ರೂ.ಗಳ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರಿಂದ ಅವರಿಗೆ ಲಂಚದ ಹಣ ಕೊಡಲು ಇಷ್ಟವಿರದ ಪ್ರದೀಪ್ ಜಿ., ಇವರು ಶಿವಮೊಗ್ಗ ಲೋಕಾಯುಕ್ತ ಕಛೇರಿಗೆ ದೂರು ಕೊಟ್ಟ ಮೇರೆಗೆ ಕ.ಲೋ., ದಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ಇಂದು ಜಿ. ರಮೇಶ್, ಎ.ಇ.ಇ., ಮೆಸ್ಕಾಂ, ಆನವಟ್ಟಿ, ಸೊರಬ ತಾಲ್ಲೂಕು,ಶಿವಮೊಗ್ಗ ಜಿಲ್ಲೆ ಇವರು ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಕಛೇರಿಯಲ್ಲಿ ದೂರುದಾರರಿಂದ 20 ಸಾವಿರ ರೂ.ಗಳ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಆರೋಪಿ ಜಿ. ರಮೇಶ್, ಎ.ಇ.ಇ. ಇವರನ್ನು ಬಂಧಿಸಿದ್ದು, ಇವರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದ 20 ಸಾವಿರ ರೂ.ಗಳ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್.ಎಸ್.ಸುರೇಶ್, ಪಿಐ-1, ಕ.ಲೋ., ಶಿವಮೊಗ್ಗರವರು ಮುಂದಿನ ತನಿಖೆ ಕೈಗೊಂಡಿರುತ್ತಾರೆ. ಆಪಾದಿತ ಜಿ. ರಮೇಶ್, ಎ.ಇ.ಇ., ಮೆಸ್ಕಾಂ, ಆನವಟ್ಟಿ, ಸೊರಬ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಇವರನ್ನು ತನಿಖಾಧಿಕಾರಿಗಳಾದ ಹೆಚ್.ಎಸ್. ಸುರೇಶ್, ಪಿಐ, ಇವರು ಬಂಧಿನ ಮಾಡಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಎನ್. ವಾಸುದೇವರಾಮ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸ್ ಉಪಾಧೀಕ್ಷಕರಾದ ಉಮೇಶ ಈಶ್ವರ ನಾಯ್ಕ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಈ ಕಾರ್ಯಾಚರಣೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಸಿಬ್ಬಂದಿಗಳಾದ ಮಹಂತೇಶ, ಸಿ.ಹೆಚ್.ಸಿ., ಸುರೇಂದ್ರ, ಸಿ.ಹೆಚ್.ಸಿ., ಬಿ.ಟಿ. ಚನ್ನೇಶ, ಸಿಪಿಸಿ, ಪ್ರಶಾಂತ್ಕುಮಾರ್, ಸಿಪಿಸಿ, ಅರುಣ್ಕುಮಾರ್, ಸಿಪಿಸಿ, ದೇವರಾಜ, ಸಿ.ಪಿ.ಸಿ., ರಘುನಾಯ್ಕ, ಸಿ.ಪಿ.ಸಿ., ಪುಟ್ಟಮ್ಮ, ಮಪಿಸಿ, ಕೆ.ಸಿ. ಜಯಂತ, ಎಪಿಸಿ, ಗಂಗಾಧರ, ಎಪಿಸಿ, ವಿ. ಗೋಪಿ, ಎಪಿಸಿ ಮತ್ತು ಪ್ರದೀಪ್ ಕುಮಾರ್, ಎಪಿಸಿ, ಇವರುಗಳು ಕರ್ತವ್ಯ ನಿರ್ವಹಿಸಿದ್ದರು.