ಸಕಲ ಜನ ಸಮುದಾಯದ ಒಳಿತಿಗಾಗಿ ಮಹಾರುದ್ರ ಯಜ್ಞ ; ರಂಭಾಪುರಿ ಶ್ರೀಗಳು

0 243

ಸೊರಬ : ಮಾನವ ಜೀವನ ಸುಖ ದು:ಖಗಳಿಂದ ಕೂಡಿದೆ. ಸುಖ ಶಾಂತಿ ನೆಮ್ಮದಿಯ ಬದುಕಿಗಾಗಿ ನಿರಂತರ ಶಿವಜ್ಞಾನ ಮತ್ತು ಪೂಜಾದಿಗಳಿಂದ ನಿರತರಾದವರಿಗೆ ಯಾವುದರ ಭಯ ಭೀತಿಯಿಲ್ಲ. ಸಕಲ ಜನ ಸಮುದಾಯದ ಒಳಿತಿಗಾಗಿ ಮಹಾರುದ್ರ ಯಜ್ಞ ನಡೆದಿರುವುದು ಸಂತೋಷದ ಸಂಗತಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ಸೊರಬ ತಾಲೂಕಿನ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ(ರಿ) ತಾಲೂಕಾ ಘಟಕದ ಆಶ್ರಯದಲ್ಲಿ ಬಂಕಸಾಣ ಹೊಳೆಲಿಂಗೇಶ್ವರ ಜಾಗೃತ ಕ್ಷೇತ್ರದಲ್ಲಿ ಜರುಗಿದ “ಮಹಾರುದ್ರ ಯಜ್ಞ” ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ವಿಶ್ವ ಶಕ್ತಿಗೆ ಮೂಲ ಶಿವ ಶಕ್ತಿ. ಪರಶಿವ ತತ್ವಕ್ಕಿಂತ ಮಿಗಿಲಾದ ತತ್ವ ಈ ಜಗದಲ್ಲಿ ಮತೊಂದಿಲ್ಲ. ವೀರಶೈವ ಧರ್ಮದಲ್ಲಿ ಪಂಚ ಯಜ್ಞಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಶಿವನಿಗೆ ಸಮರ್ಪಿತವಾದ ಪತ್ರ ಪುಷ್ಪ ಫಲಗಳನ್ನು ಸ್ವೀಕರಿಸುವುದರಿಂದ ಸರ್ವ ಪಾಪ ತಾಪಗಳು ಪರಿಹಾರವಾಗುತ್ತವೆ. ವಿಶ್ವವನ್ನು ಬೆಳಗುವ ಪೂರ್ಣಾಹಂತಾತ್ಮಕವಾದ ಸ್ವಾತ್ಮ ತೇಜದಲ್ಲಿ ಈ ದೃಶ್ಯ ರೂಪವೆಲ್ಲವನ್ನು ಕಾಣಬಹುದು. ರವಿ ಕಿರಣದಿಂದ ಕಮಲ ಅರಳುವಂತೆ ಗುರು ಕಾರುಣ್ಯದಿಂದ ಶಿಷ್ಯನ ಮನ ಅರಳುವುದು. ಸದ್ಗುಣಶೀಲನಾದ ಗುರುವು ಪ್ರಬೋಧಿಸಿ ಪ್ರಚೋದಿಸಿ ಪ್ರೇರಣೆ ನೀಡಲು ಶಿಷ್ಯನ ಜೀವ ಭಾವ ತೊಲಗಿ ಜೀವನ್ಮುಕ್ತನಾಗುವನು. ಸರ್ವ ಜನರ ಸಂಕಲ್ಪ ಸಿದ್ಧಿಗಾಗಿ ಶಾಂತಿ ಸಂತೃಪ್ತಿಯ ಪ್ರಾಪ್ತಿಗಾಗಿ ಕೈಕೊಂಡ 3 ದಿನಗಳ ಮಹಾರುದ್ರ ಯಜ್ಞ ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲಾಗಿದೆ ಎಂದು ಹರುಷ ವ್ಯಕ್ತಪಡಿಸಿದ ಜಗದ್ಗುರುಗಳು ಸೊರಬ ತಾಲೂಕ ಘಟಕದ ಅಧ್ಯಕ್ಷ ವೇ.ಹಾಲಸ್ವಾಮಿ ಶಾಸ್ತಿçಗಳ ಮುಂದಾಳತ್ವದಲ್ಲಿ ನೂರಾರು ಪುರೋಹಿತರು ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಶಾಂತಪುರ ಶಿವಾನಂದ ಶಿವಾಚಾರ್ಯರು, ಜಡೆ ಡಾ|| ಮಹಾಂತಸ್ವಾಮಿಗಳು, ಕ್ಯಾಸನೂರು ತೊಗರ್ಸಿಯ ಗುರಬಸವ ಪಂಡಿತಾರಾಧ್ಯ ಶಿವಾಚಾರ್ಯರು, ಕಣ್ವಕುಪ್ಪೆ ಶಾಂತಲಿಂಗ ಶಿವಾಚಾರ್ಯರು, ಲಕ್ಕವಳ್ಳಿ ಸ್ವಸ್ತಿ ವೃಷಭಸೇನ ಸ್ವಾಮಿಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಹಲವಾರು ವೇದ ವಿದ್ವಾಂಸರಿಗೆ ಗಣ್ಯ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಅರೆತಲಗಡ್ಡಿ ವಿದ್ವಾನ್ ಶಿವಕುಮಾರ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಅ.ಕ.ವೀ.ಪುರೋಹಿತ ಮಹಾಸಭಾದ ರಾಜ್ಯಾಧ್ಯಕ್ಷ ವೇ.ಚನ್ನೇಶ ಶಾಸ್ತ್ರಿ, ಶ್ರೀ ಹೊಳೆಲಿಂಗೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಪ್ಪಗೌಡ್ರು ಬಂಕಸಾಣ, ಜಡೆ ಗ್ರಾ.ಪಂ.ಅಧ್ಯಕ್ಷ ಅಮಿತಗೌಡ್ರು ಇದ್ದರು.

ಸೊರಬದ ಮಲ್ಲಿಕಾರ್ಜುನಸ್ವಾಮಿ ಅರಮನೆಮಠ ಸ್ವಾಗತಿಸಿದರು. ಬಂಕವಳ್ಳಿ ವೀರೇಂದ್ರ ಪಾಟೀಲ ನಿರೂಪಿಸಿದರು. ಮಾರನಬೀಡ ಇಂದ್ರಯ್ಯ ಹಿರೇಮಠ ಇವರಿಂದ ಭಕ್ತಿಗೀತೆ ಜರುಗಿತು. ಹರತಾಳು ವಿಶ್ವಕರ್ಮ ಚಂಡೆ ಬಳಗ, ತೆಲಗುಂದ ಶಾಂತಿನಿಕೇತನ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಮತ್ತು ಆನವಟ್ಟಿ ಕಲಾಕಾರ್ ನೃತ್ಯ ಶಾಲೆ ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮಕ್ಕೂ ಮುನ್ನ ವರದಾ ನದಿ ತಟದಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದಿಂದ ಹೊಳೆಲಿಂಗೇಶ್ವರ ದೇವಸ್ಥಾನದ ವರಗೆ ಪೂರ್ಣಕುಂಭ ಮಂಗಲ ವಾದ್ಯಗಳೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಬರ ಮಾಡಿಕೊಂಡರು. ಆಗಮಿಸಿದ ಸಹಸ್ರಾರು ಭಕ್ತರಿಗೆ ಅನ್ನ ದಾಸೋಹ ಜರುಗಿತು.

Leave A Reply

Your email address will not be published.

error: Content is protected !!