ಸಹಕಾರಿ ತತ್ವ, ಕಾಯ್ದೆ ಕುರಿತು ಸಹಕಾರಿಗಳಿಗೆ ಅರಿವು ಮುಖ್ಯ ; ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಡಾ. ಆರ್.ಎಂ.ಎಂ.

0 295

ಹೊಸನಗರ : ವೈದ್ಯನಾಥನ್ ವರದಿ ಯತಾವತ್ತಾಗಿ ಜಾರಿಗೊಳ್ಳುವ ಮೂಲಕ ನಷ್ಟದಲ್ಲಿದ್ದ ಅದೆಷ್ಟೋ ಸಹಕಾರಿ ಸಂಘಗಳು ಲಾಭದತ್ತ ಮುಖ ಮಾಡುವಂತಾಗಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಶಿವಮೊಗ್ಗ ಜಿಲ್ಲಾಸಹಕಾರ ಯೂನಿಯನ್ ಮಿ., ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹಾಗೂ ಸಹಕಾರ ಇಲಾಖೆ ಸಂಯಕ್ತವಾಗಿ ಪಟ್ಟಣದ ಎಸ್‌ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಹೊಸನಗರ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷ ಹಾಗೂ ಸಿಇಓಗಳಿಗೆ ಏರ್ಪಡಿಸಿದ್ದ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಾವಿರಾರು ವಿವಿಧ ರೀತಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದೆ. ಅವುಗಳ ಬೈಲಾ ಸಹ ಹಲವು ಬಗೆಯಲ್ಲಿದೆ. ಆದರೆ, ಎಲ್ಲಾ ಸಹಕಾರಿ ಸಂಘಗಳ ಮೂಲ ಉದ್ದೇಶ ಲಾಭ ಗಳಿಸುವುದೇ ಆಗಿದೆ ವಿನಾಃ ನಷ್ಟವಲ್ಲ. ಆ ಕಾರಣಕ್ಕೆ ಸೂಕ್ತ ಬೈಲಾ ರಚನೆಯ ಮೂಲಕ ಸಂಘ, ಸಂಸ್ಥೆಗಳು ಸದಸ್ಯರ ಹಿತ ಕಾಪಾಡುವಂತ ಯೋಜನೆಗಳನ್ನು ರೂಪಿಸಬೇಕಿದೆ. ಪ್ರತಿಯೊಬ್ಬ ಸಹಕಾರಿಯೂ ಮೊದಲು ಸಹಕಾರಿ ತತ್ವ, ಕಾಯ್ದೆ ಕುರಿತು ಅರಿವು ಪಡೆಯಬೇಕು. ಸಹಕಾರಿ ತತ್ವದಡಿಯಲ್ಲಿ ಜನಪರ ಬೈಲಾ ರೂಪಿಸಿ ಲಾಭಗಳಿಸುವಂತೆ ಸಂಘ ಸಜ್ಜುಗೊಳ್ಳಬೇಕು. ಲೆಕ್ಕ-ಪತ್ರದಲ್ಲಿ ಪಾರದರ್ಶಕ ಆಡಳಿತ ಕಾಯ್ದುಕೊಳ್ಳುವುದು ಸಂಘದ ಯಶ್ವಸಿಗೆ ಕಾರಣವಾಗಿದೆ ಎಂದರು.

ವೈದ್ಯನಾಥನ್ ವರದಿ ಜಾರಿಗೊಂಡ ಬಳಿಕ ಸಂಘದ ಪ್ರತಿಯೊಬ್ಬ ಸದಸ್ಯನು ಒಂದಲ್ಲಾ ಒಂದು ರೀತಿಯಲ್ಲಿ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೇ ಬೇಕಾಗಿದ್ದು, ಇದು ಸಂಘದ ಆರ್ಥಿಕ ಸಬಲತೆ ಹೆಚ್ಚಸಲು ಸಹಕಾರಿ ಆಗಿದೆ. 1997ರ ಮೊದಲು ಕೇವಲ ಒಂದು ನೂರು ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದ್ದ ಜಿಲ್ಲಾ ಸಹಕಾರಿ ಬ್ಯಾಂಕ್‌ ಇಂದು ಸಾವಿರದ ನೂರು ಕೋಟಿ ರೂ. ಹೆಚ್ಚು ವಹಿವಾಟು ನಡೆಸಲು ಸಹಕಾರಿ ಸಂಘಗಳೇ ಕಾರಣ ಆಗಿವೆ. 2024ರ ಏಪ್ರಿಲ್ ನಂತರ, ದೇಶವ್ಯಾಪಿ ಸಹಕಾರಿ ಕ್ಷೇತ್ರವೂ ಕಂಪ್ಯೂಟರೀಕರಣಗೊಂಡಿದ್ದು, ಯಾವುದೇ ಸಹಕಾರಿ ಬ್ಯಾಂಕಿನ ಆರ್ಥಿಕ ಸ್ಥಿತಿಗತಿಯನ್ನು ಕ್ಷಣಾರ್ಧದಲ್ಲಿ ಕೇಂದ್ರದ ರಿಸರ್ವ್ ಬ್ಯಾಂಕ್ ಪರಿಶೀಲಿಸಬಹುದಾಗಿದೆ. ಆ ಕಾರಣಕ್ಕೆ ಸಹಕಾರಿ ಸಂಘಗಳು ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವ ಮೂಲಕ ಸೂಕ್ತ ಲೆಕ್ಕಪತ್ರ ದಾಖಲೆ ನಿರ್ವಹಣೆ ಮಾಡಿದಲ್ಲಿ ಮಾತ್ರವೇ ಲಾಭ ಗಳಿಸಬಹುದಾಗಿದೆ ಎಂದರು.

ಬದಲಾಗುತ್ತಿರುವ ಸಹಕಾರಿ ಕಾಯ್ದೆ ಕುರಿತಂತೆ ಪ್ರತಿಯೊಬ್ಬ ಸಹಕಾರಿಯೂ ತಿಳಿಯಬೇಕಾಗಿದ್ದು ಈ ಹಿನ್ನಲೆಯಲ್ಲಿ ಇಂತಹ ತರಬೇತಿ ಕಾರ್ಯಗಾರಗಳು ಸಹಕಾರಿ ಆಗಲಿದ್ದು, ಶಿಬಿರದ ಪ್ರಯೋಜನ ಸಬ್ದಳಕೆಗೆ ಅವರು ಕರೆ ನೀಡಿದರು.

ವೇದಿಕೆಯಲ್ಲಿ ಶಿಮೂಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಹೆಚ್.ಎನ್. ವಿದ್ಯಾಧರ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ. ರತ್ನಾಕರ್, ನಿರ್ದೇಶಕ ವಾಟಗೋಡು ಸುರೇಶ್, ಪಿಕಾರ್ಡ್ ಅಧ್ಯಕ್ಷ ಎಂ.ವಿ.ಜಯರಾಂ, ಸಹಕಾರ ಅಭಿವೃದ್ದಿ ಅಧಿಕಾರಿ ವೆಂಕಟಾಚಲಪತಿ, ಸಹ್ಯಾದ್ರಿ ಮಹಿಳಾ ಬ್ಯಾಂಕ್‌ನ ಜಿಲ್ಲಾಧ್ಯಕ್ಷೆ ಈರಮ್ಮ, ಜಿಲ್ಲಾ ಸಹಕಾರಿಗಳಾದ ರಾಜು ವಿ ಪಾಟೀಲ್ ಉಪಸ್ಥಿತರಿದ್ದರು.

ಸಂಪತ್ ಕುಮಾರ್ ಪ್ರಾರ್ಥಿಸಿ, ಪರಮೇಶ್ವರ ನಿರೂಪಿಸಿದರು. ಸಿಇಓ ಯಶವಂತ್ ಕುಮಾರ್ ಸ್ವಾಗತಿಸಿ, ವಂದಿಸಿದರು.

Leave A Reply

Your email address will not be published.

error: Content is protected !!