Hosanagara | ಲೋಕಾಯುಕ್ತಕ್ಕೆ ದೂರು ನೀಡಲು ಹಿಂಜರಿಕೆ ಬೇಡ
ಹೊಸನಗರ ; ಅಕ್ರಮಗಳು ಕಂಡುಬಂದಲ್ಲಿ, ಸರ್ಕಾರಿ ನೌಕರರು ಸಾರ್ವಜನಿಕ ಸೇವೆ ನೀಡಲು ಸತಾಯಿಸಿದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಬಹುದು. ಈ ಬಗ್ಗೆ ಯಾವುದೇ ಅಂಜಿಕೆ ಬೇಡ ಎಂದು ಲೋಕಾಯುಕ್ತ ಡಿವೈಎಸ್ಪಿ ಉಮೇಶ ಈಶ್ವರ ನಾಯ್ಕ್ ಹೇಳಿದರು.
ತಾಲೂಕು ಕಛೇರಿಯಲ್ಲಿ ಸಾರ್ವಜನಿಕರಿಂದ ಕುಂದು-ಕೊರತೆ ಅರ್ಜಿ ಸ್ವೀಕರಿಸಿದ ಬಳಿಕ ಮಾತನಾಡಿ,
ಹಲವು ಕಡೆ ಲೋಕಾಯುಕ್ತ ಸಂಸ್ಥೆಯ ಹೆಸರು ದುರ್ಬಳಕೆ ಆಗುತ್ತಿದೆ. ಇದು ಸರಿಯಲ್ಲ. ಸರಕಾರಿ ಕೆಲಸಗಳನ್ನು ಮಾಡಿಕೊಡಲು ಹಣಕ್ಕೆ ಆಮಿಷ ಒಡ್ಡಿರುವುದು, ಕರ್ತವ್ಯ ಲೋಪ ಕುರಿತು ದೂರುಗಳ ಬಂದಲ್ಲಿ ಲೋಕಾಯುಕ್ತ ಸಂಸ್ಥೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತದೆ. ದೂರು ನೀಡಲು ಹಿಂಜರಿಕೆ ಬೇಡ ಎಂದರು.
ಸರಕಾರಿ ನೌಕರರು ತಮ್ಮ ಕರ್ತವ್ಯವನ್ನು ನಿಯತ್ತಿನಿಂದ ನಿರ್ವಹಿಸಬೇಕು. ತಾವು ಪಡೆಯುವ ಸಂಬಳ ಸಾರ್ವಜನಿಕರ ಹಣ ಎನ್ನುವುದನ್ನು ಮರೆಯಬಾರದು ಎಂದ ಅವರು, ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು. ಕಾನೂನುಗಳು ರಚನೆ ಆಗಿರುವುದೇ ಜನರ ಅನುಕೂಲಕ್ಕಾಗಿ. ಯಾವುದೇ ಒತ್ತಡ, ಆಮಿಷಗಳಿಗೆ ಬಲಿಯಾಗಬಾರದು ಎಂದರು.
ಅಕ್ರಮ ಮರಳು ಗಣಿಗಾರಿಕೆ, ಕಂದಾಯ, ಆರೋಗ್ಯ, ಅರಣ್ಯ ಇಲಾಖೆಗೆ ಸಂಬಂಧಿಸಿದ ದೂರುಗಳು ಸಲ್ಲಿಕೆಯಾದವು.
ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್, ಇಓ ನರೇಂದ್ರಕುಮಾರ್, ಲೋಕಾಯುಕ್ತ ಹಾಗೂ ವಿವಿಧ ಇಲಾಖೆಯ ಅಕಾರಿಗಳು ಸಭೆಯಲ್ಲಿ ಹಾಜರಿದ್ದರು.