Ripponpet | ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ ; ಡಿವೈಎಸ್‌ಪಿ

0 809

ರಿಪ್ಪನ್‌ಪೇಟೆ: ಗೌರಿ-ಗಣೇಶ ಹಬ್ಬ ಸೇರಿದಂತೆ ಈದ್‌ಮಿಲಾದ್ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು. ಹಬ್ಬದ ಮೆರವಣಿಗೆ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಡಿಜೆ ಬಳಸುವಂತಿಲ್ಲ ಎಂದು ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್‌ಪಿ.ಗಜಾನನ ವಾಮನ ಸುತಾರ್ ಹೇಳಿದರು.


ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಈದ್‌ಮಿಲಾದ್ ಮತ್ತು ಗಣೇಶೋತ್ಸವ ಹಬ್ಬಗಳ ಆಚರಣೆಯ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಸಂಘ ಸಂಸ್ಥೆ ಹಾಗೂ ಮುಸ್ಲಿಂ ಸಮುದಾಯದ ಮುಖಂಡರಿಗೆ ಆಯೋಜಿಸಲಾದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಲ್ಲಾ ಸಮುದಾಯದವರು ಎಲ್ಲಾ ಹಬ್ಬಗಳನ್ನು ಶಾಂತಿಯಿಂದ ಆಚರಣೆ ಮಾಡುತ್ತಾ ಬಂದಿದ್ದಾರೆ. ಸರ್ಕಾರದ ಮಾರ್ಗಸೂಚಿಯೇ ತಿಳುವಳಿಕೆ ಹೇಳುವುದು ನಮ್ಮ ಕರ್ತವ್ಯವಾಗಿದೆ. ಸೆಷ್ಟಂಬರ್ 18 ರಿಂದ ಗಣೇಶ ಪ್ರತಿಷ್ಟಾಪಿಸಲಾಗುತ್ತಿದ್ದು ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ 76 ಗ್ರಾಮಗಳಲ್ಲಿ 126 ಕ್ಕೂ ಅಧಿಕ ಸ್ಥಳಗಳಲ್ಲಿ ಸಂಘ ಸಂಸ್ಥೆಯವವರು ಗಣೇಶ ಪ್ರತಿಷ್ಠಾಪನೆಗಾಗಿ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸಂಘ ಸಂಸ್ಥೆಯವರು ಕಛೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದಾಗಿ ಏಕಗವಾಕ್ಷಿಯಡಿ ಇಲ್ಲಿನ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಪೊಲೀಸ್, ಕಂದಾಯ, ಮೆಸ್ಕಾಂ, ಅಗ್ನಿಶಾಮಕ ದಳ ಹೀಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಪರಿಶೀಲನೆ ನಡೆಸಿ ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗುತ್ತಿದೆ. ವೈಯಕ್ತಿಕ ಭಿನ್ನಾಭಿಪ್ರಾಯವನ್ನು ಮೆರೆತು ಎಲ್ಲರೂ ಶಾಂತಿ ಸುವ್ಯವಸ್ಥೆಯೊಂದಿಗೆ ಗಣೇಶೋತ್ಸವವನ್ನು ಸಂಭ್ರಮದೊಂದಿಗೆ ಆಚರಿಸಿ ಹಿಂದು ಮುಸ್ಲಿಂ ಬೇದಭಾವನೆ ಬೆಳಸದೇ ಶಾಂತಿ ಸೌಹಾರ್ದತೆ ಹಾಗೂ ಸಾಮರಸ್ಯದೊಂದಿಗೆ ನಾಡಹಬ್ಬವನ್ನಾಗಿ ಆಚರಿಸಿ ಎಂದು ಸಲಹೆ ನೀಡಿದರು.


ಹಿಂದುಗಳ ಗಣೇಶೋತ್ಸವ ಮತ್ತು ಮುಸ್ಲಿಂ ಜನಾಂಗದ ಈದ್‌ಮಿಲಾದ್ ಹಬ್ಬ ಒಂದೇ ದಿನ ಬಂದಿದ್ದು ಹೇಗೆ ಎಂಬ ಚಿಂತೆ ಕಾಡುವಂತಾಗಿದ್ದು ರಿಪ್ಪನ್‌ಪೇಟೆಯ ಜುಮ್ಮಾ ಮಸೀದಿಯವ ಮುಸ್ಲಿಂ ಮುಖಂಡರು
ನಮ್ಮೂರಿನ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಮಾಡುವಾಗ ನಾವುಗಳು ಹಿಂದು ಧಾರ್ಮಿಕಕತೆಗೆ ದಕ್ಕೆ ತರಬಾರದೆಂಬ ಉದ್ದೇಶದೊಂದಿಗೆ ನಮ್ಮ ಈದ್‌ಮಿಲಾದ್ ಹಬ್ಬವನ್ನು ಮುಂದೂಡಲಾಗಿದ್ದು ಮುಂದಿನ ತಿಂಗಳು 9 ರಿಂದ 11 ರವರೆಗೆ ಆಚರಿಸಲಾಗುವುದೆಂದು ಮಸೀದಿ ಸಮತಿಯವರು ತಿರ್ಮಾನಿಸಿರುವುದಾಗಿ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಆಶೀಫ್‌ಭಾಷಾ ಘೋಷಿಸಿದರು.


ಮುಸ್ಲಿಂ ಮುಖಂಡ ಆರ್.ಎ.ಚಾಬುಸಾಬ್ ಮಾತನಾಡಿ, ಗಣೇಶೋತ್ಸವ ಮತ್ತು ಈದ್‌ಮಿಲಾದ್ ಹಬ್ಬದಲ್ಲಿ ಯಾವುದೇ ಬೇದಭಾವನೆ ಮಾಡದೇ ಎಲ್ಲರೂ ಕೂಡಿ ಮಾಡುವುದರಿಂದ ಶಾಂತಿ ನೆಮ್ಮದಿಯಿಂದಿರಲು ಸಹಕಾರಿಯಾಗಿದೆ ಇದೊಂದು ಮಾದರಿ ಗ್ರಾಮೀಣ ಪ್ರದೇಶದ ನಾಡಹಬ್ಬವಾಗಿದೆ ಎಂದು ಹೇಳಿ ಗಣಪತಿ ವಿಸರ್ಜನೆಯ ಮೂರ್ನಾಲ್ಕು ದಿನ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸುವುದು ಮತ್ತು ಮಾರಾಟ ಮಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿ ರಾಜ್ಯ ಹೆದ್ದಾರಿ ಹಾದುಹೋಗುವ ಸಾಗರ ತೀರ್ಥಹಳ್ಳಿ ಶಿವಮೊಗ್ಗ ಹೊಸನಗರ ಮುಖ್ಯರಸ್ತೆಯ ಒಂದು ಕಿ.ಮೀ. ದೂರದಲ್ಲಿ ಹಂಪ್ ಅಳವಡಿಸುವುದರೊಂದಿಗೆ ವಾಹನಗಳ ವೇಗವನ್ನು ನಿಯಂತ್ರಿಸುವಂತೆ ಮನವಿ ಮಾಡಿದರು.


ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾ ಸಮಿತಿಯ ಪದಾಧಿಕಾರಿಗಳಾದ ಎಂ.ಬಿ. ಮಂಜುನಾಥ, ಎಂ.ಸುರೇಶ್‌ಸಿಂಗ್, ಜೆ.ಜಿ.ಸದಾನಂದ ಮಾತನಾಡಿ, ಕಳೆದ ವರ್ಷದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ತಮ್ಮ ಇಲಾಖೆಯ ಅಧಿಕಾರಿಯೋರ್ವರು ನಮ್ಮ ಸಂಸ್ಥೆಯ ಸ್ವಯಂ ಸೇವಕರನ್ನು ಎಳೆದಾಡಿದರು ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.


ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸಾರ್ವಜನಿಕರ ಪರವಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಆರ್.ಎನ್.ಮಂಜುನಾಥ, ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ, ಮಾತನಾಡಿ ಸಲಹೆ ನೀಡಿದರು.


ಶಾಂತಿ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ರಾಕೇಶ್, ಪಿಡಬ್ಲ್ಯೂಡಿ ಎಇಇ ಮಲ್ಲಿಕಾರ್ಜುನ, ತಾ.ಪಂ.ಇಂಜಿನಿಯರ್, ಉಪತಹಶೀಲ್ದಾರ್ ಹುಚ್ಚರಾಯಪ್ಪ, ವೃತ್ತ ನಿರೀಕ್ಷಕ ಗುರಣ್ಣಹೆಬ್ಬಾಳ್, ಹೊಸನಗರ ಪಿಎಸ್‌ಐ ಶಿವಾನಂದಕೋಳಿ, ನಗರ ಪಿಎಸ್‌ಐ ಹಾಗೂ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್.ಪಿ.ಭಾಗವಹಿಸಿ ಮಾತನಾಡಿದರು.


ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್.ಪಿ. ಸ್ವಾಗತಿಸಿದರು. ಪೇದೆ ಅಶ್ವಿನಿ ಅಥಣಿ ನಿರೂಪಿಸಿ, ವಂದಿಸಿದರು.

Leave A Reply

Your email address will not be published.

error: Content is protected !!