Shivamogga | ಕರ್ನಾಟಕ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಮತದಾರರ ಪಟ್ಟಿ ಸಿದ್ದತೆ ಕುರಿತು ಡಿಸಿ ಸೂಚನೆ

0 126

ಶಿವಮೊಗ್ಗ : ಅರ್ಹತಾ ದಿನಾಂಕ 01.11.2023 ಕ್ಕೆ ಕರ್ನಾಟಕ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ನೂತನವಾಗಿ ಸಿದ್ದಪಡಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು, ಎಲ್ಲ ಅರ್ಹ ಶಿಕ್ಷಕರು ಮತ್ತು ಪದವೀಧರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಸುವ ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹತಾ ದಿನಾಂಕ: 01.11.2023 ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತಲು ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಪದವೀಧರರಾದ ಪ್ರೌಢಶಾಲಾ ಶಿಕ್ಷಕರು ಕನಿಷ್ಟ 3 ವರ್ಷ ಬೋಧನೆ ಮಾಡಿದ ಅನುಭವವುಳ್ಳವರಾಗಿರಬೇಕೆಂದರು.


ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ನಮೂನೆ 18 ರಲ್ಲಿ ಪದವೀಧರರ ಮತ್ತು ನಮೂನೆ 19 ರಲ್ಲಿ ಶಿಕ್ಷಕರ ಅರ್ಜಿಗಳನ್ನು ಸಿ.ಆರ್‍.ಸಿ ಮತ್ತು ಬಿ.ಆರ್‍.ಸಿ ಗಳು ಶಾಲಾವಾರು ಪಟ್ಟಿ ಮಾಡಿ ಬಿಇಓ ಗಳಿಗೆ ತಲುಪಿಸಬೇಕು. ಬಿಇಓ ರವರು ಪರಿಶೀಲಿಸಿ, ಶೈಕ್ಷಣಿಕ ಸಂಸ್ಥೆವಾರು ವರ್ಗೀಕರಿಸಿ ನಗರ ಪ್ರದೇಶದಲ್ಲಿ ಮಹಾನಗರಪಾಲಿಕೆ ಮತ್ತು ಗ್ರಾಮೀಣ ಭಾಗದಲ್ಲಿ ತಹಶೀಲ್ದಾರ್ ಕಚೇರಿಗೆ ತಲುಪಿಸಬೇಕು. ಸರ್ಕಾರಿ ಶಾಲಾ ಶಿಕ್ಷಕರ ಕುರಿತು ದೃಢೀಕರಣವನ್ನು ಆಯಾ ಶಾಲಾ ಮುಖ್ಯಸ್ಥರು ಮತ್ತು ಖಾಸಗಿ ಶಾಲಾ ಶಿಕ್ಷಕರ ದೃಢೀಕರಣವನ್ನು ಸಂಬಂಧಿಸಿದ ಬಿಇಓ ರವರು ಮಾಡಬೇಕು. ದೃಢೀಕರಣ ವೇಳೆ ಎಪಿಕ್ ಕಾರ್ಡ್ ಮತ್ತು ಆಧಾರ್ ಪ್ರತಿ ಪರಿಶೀಲಿಸಬೇಕು. ಬೇರೆ ಜಿಲ್ಲೆಯವರು ಇಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಎಪಿಕ್ ಕಾರ್ಡ್‌ನ ವಿಳಾಸಕ್ಕೆ ಅರ್ಜಿಯನ್ನು ವರ್ಗಾಯಿಸಬೇಕು.
ದಿನಾಂಕ: 01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವವಂತಹ ಪದವೀಧರರು ನಿಗದಿಪಡಿಸಿದ ನಮೂನೆ 18 ರಲ್ಲಿ (ಭಾವಚಿತ್ರದೊಂದಿಗೆ) ಹಾಗೂ ಶಿಕ್ಷಕರು ನಮೂನೆ 19 ರಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳನ್ನು ಸ್ವಯಂದೃಢೀಕರಿಸಿ ಅಲ್ಲದೇ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ದಿನಾಂಕ 06.11.2023 ಒಳಗಾಗಿ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಸಂಬಂಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಸಿಲ್ದಾರ್ ಕಾರ್ಯಾಲಯದಲ್ಲಿ) ಸಲ್ಲಿಸಬೇಕು ಎಂದರು.


ಅತಿ ಹೆಚ್ಚು ಅರ್ಹ ಶಿಕ್ಷಕರು ಮತ್ತು ಪದವೀಧರರನ್ನು ನೋಂದಾಯಿಸಿದ ಶಿಕ್ಷಣ ಸಂಯೋಜನಾಧಿಕಾರಿಗಳು, ಬಿಇಓ ರನ್ನು ಸ್ವೀಪ್ ವತಿಯಿಂದ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು ಎಂದು ಈ ವೇಳೆ ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಮತದಾರರ ಪಟ್ಟಿ ತಯಾರಿಕೆ ಕುರಿತು ಸಲಹೆಗಳನ್ನು ನೀಡಿ, ತಹಶೀಲ್ದಾರರು ಫಾರಂ 18 ಮತ್ತು 19 ರನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕು ಎಂದರು.


ಸಭೆಯಲ್ಲಿ ಶಿವಮೊಗ್ಗ ತಹಶೀಲ್ದಾರ್ ಪ್ರದೀಪ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಬಿಇಓ ನಾಗರಾಜ್, ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ತಾಲ್ಲೂಕುಗಳ ತಹಶೀಲ್ದಾರರು, ಚುನಾವಣಾ ಶಾಖೆ ಸಿಬ್ಬಂದಿಗಳು, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!