ಮಂಗನ ಕಾಯಿಲೆಗೆ ಯುವತಿ ಬಲಿ ! ರಾಜ್ಯದಲ್ಲೇ ಈ ವರ್ಷದ ಮೊದಲ ಪ್ರಕರಣ

0 2,460

ಹೊಸನಗರ : ಮಂಗನ ಕಾಯಿಲೆ (ಕೆಎಫ್‌ಡಿ) ಯುವತಿಯನ್ನು ಬಲಿ ಪಡೆದಿದ್ದು ರಾಜ್ಯದಲ್ಲೇ ಈ ವರ್ಷದ ಮೊದಲ ಪ್ರಕರಣ ಇದಾಗಿದೆ.

ತಾಲೂಕಿನ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಬಪ್ಪನಮನೆ ಗ್ರಾಮದ ಅನನ್ಯ (18) ಕೆಎಫ್‌ಡಿಗೆ ಬಲಿಯಾದ ಯುವತಿ. ಈಕೆ ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ನಗರ, ಹೊಸನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಉಲ್ಬಣಗೊಂಡಿದ್ದರಿಂದ ಕೆಎಫ್‌ಡಿ ಟೆಸ್ಟ್ ಮಾಡಲಾಗಿತ್ತು. ಮೊದಲ ಟೆಸ್ಟ್‌ನಲ್ಲಿ ನೆಗೆಟಿವ್, ಎರಡನೇ ಬಾರಿ ಆರ್‌ಟಿಸಿಪಿಆರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು.

ತಹಶೀಲ್ದಾರ್ ರಶ್ಮಿ ನೇತೃತ್ವದಲ್ಲಿ ಅರಮನೆಕೊಪ್ಪ ಗ್ರಾಪಂನಲ್ಲಿ ನಡೆದ ಸಭೆ.

ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು ಶುಕ್ರವಾರ ಸಂಜೆ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಹು ಅಂಗಾಂಶಗಳ ವೈಫಲ್ಯದಿಂದ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಅನನ್ಯ ಕೊನೆಯುಸಿರೆಳೆದಿದ್ದಾರೆ.

ಹೊಸನಗರ ತಾಲೂಕಿನಲ್ಲಿ ಈ ವರ್ಷದ ಮೊದಲ ಪ್ರಕರಣ ಇದಾಗಿದ್ದು, ಅರಮನೆಕೊಪ್ಪ ವ್ಯಾಪ್ತಿಯಲ್ಲಿ ಈ ಹಿಂದೆ ಕೆಎಫ್‌ಡಿ ಪ್ರಕರಣಗಳು ವರದಿಯಾಗಿಲ್ಲ. ಈ ಬಾರಿ ಶರಾವತಿ ಹಿನ್ನೀರು ತಗ್ಗಿದ ಹಿನ್ನೆಲೆ ಪ್ರಾಣಿಗಳ ಮೂಲಕ ವೈರಸ್‌ಗಳು ವರ್ಗಾವಣೆಯಾಗಿರಬಹುದು ಎನ್ನಲಾಗಿದೆ.

ಅರಮನೆಕೊಪ್ಪ ಗ್ರಾಪಂಗೆ ಹೊಸನಗರ ತಹಶೀಲ್ದಾರ್ ರಶ್ಮಿ ಸೇರಿದಂತೆ ತಾಲೂಕು ಆಡಳಿತ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಮೃತ ಅನನ್ಯ

ಕಳೆದೊಂದು ತಿಂಗಳಿಂದ ರಾಜ್ಯದಲ್ಲಿ ಮೂರು ಮಂದಿಗೆ (ಚಿಕ್ಕಮಗಳೂರು ಒಂದು, ಶಿವಮೊಗ್ಗ ಎರಡು) ಕೆಎಫ್‌ಡಿ ಸೋಂಕು ಪಾಸಿಟಿವ್ ಆಗಿತ್ತು ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ರಕ್ತಹೀನತೆಯಿಂದ ಬಳಲುತ್ತಿದ್ದರು:

ಕೆಎಫ್‌ಡಿ ಪಾಸಿಟಿವ್ ಆಗಿದ್ದ ಯುವತಿ ರಕ್ತಹೀನತೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಶಿವಮೊಗ್ಗ ಡಿಹೆಚ್ಒ ಡಾ.ರಾಜೇಶ ಸುರಗಿಹಳ್ಳಿ ತಿಳಿಸಿದ್ದಾರೆ.

ಅರಮನೆಕೊಪ್ಪ ಪ್ರದೇಶದಲ್ಲಿ ಕೊನೆಯ ಬಾರಿಗೆ 2014ರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಈಗ ಮತ್ತೆ ದೃಢಪಟ್ಟಿದೆ. ಹೀಗಾಗಿ ವೈದ್ಯರ ತಂಡವನ್ನು ಅಲ್ಲಿಗೆ ಕಳುಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

Leave A Reply

Your email address will not be published.

error: Content is protected !!