ವಿದ್ಯುತ್ ಸ್ಪರ್ಶ ; ಹಸು ಸಾವು !
ಸೊರಬ: ಟ್ರಾನ್ಸ್ಫಾರ್ಮರ್ ಬಳಿ ಹುಲ್ಲು ಮೇಯಲು ಹೋದ ಸೀಮೆ ಹಸುವೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ಪಟ್ಟಣದ ಮರೂರು ರಸ್ತೆಯಲ್ಲಿ ಭಾನುವಾರ ನಡೆದಿದೆ.
ಚಾಮರಾಜಪೇಟೆಯ ನಾಗರಾಜಗೌಳಿ ಎಂಬುವವರಿಗೆ ಸೇರಿದ ಹಸುವಾಗಿದ್ದು, ಶನಿವಾರ ಮೇಯಲು ಹೋದ ಹಸು ಮನೆಗೆ ಹಿಂದಿರುಗಿರಲಿಲ್ಲ. ಎಲ್ಲಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆ ವಿದ್ಯುತ್ ತಗುಲಿ ಮೃತಪಟ್ಟಿರುವುದು ಕಂಡುಬಂದಿದೆ.
ಕಳೆದ ಮೂರು ದಿನದ ಹಿಂದೆಯಷ್ಟೆ ಮೊದಲ ಕರುವಿಗೆ ಜನ್ಮ ನೀಡಿದ ಹಸು ನಿತ್ಯ ಸುಮಾರು 15 ಲೀಟರ್ ಹಾಲು ನೀಡುತ್ತಿತ್ತು. ಸುಮಾರು ಒಂದು ಲಕ್ಷ ರೂ. ಮೌಲ್ಯದ ಹಸು ಎನ್ನಲಾಗಿದೆ.
ಮೆಸ್ಕಾಂ ಇಲಾಖೆಯ ಬೇಜವಾಬ್ದಾರಿಯಿಂದ ಹಸು ಮೃತ ಪಟ್ಟಿದೆ. ಹೈನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿದ್ದ ನಾಗರಾಜ್ ಗೌಳಿ ಅವರಿಗೆ ಮೆಸ್ಕಾಂ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಪುರಸಭೆ ವ್ಯಾಪ್ತಿಯಲ್ಲಿನ ಟ್ರಾನ್ಸ್ಫಾರ್ಮರ್ ಗಳ ಸುತ್ತ ಬೇಲಿ ನಿರ್ಮಿಸಬೇಕು ಎಂದು ಬಜರಂಗ ದಳದ ರವಿ ಗುಡಿಗಾರ್ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ವಾರ್ಡ್ ಸದಸ್ಯ ಮಧುರಾಯ್ ಜಿ. ಶೇಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.