ಕನಿಷ್ಟ ಅಭಿನಂದನೆಯನ್ನೂ ಸಲ್ಲಿಸದ ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಬಿಜೆಪಿ ಬ್ಯಾನರ್‌ಗಳಲ್ಲಿ ಅನಿವಾರ್ಯವೇ ?

0 522

ಸೊರಬ : ದುರಹಂಕಾರದ ವರ್ತನೆಯಿಂದ ಕಾರ್ಯಕರ್ತರನ್ನು ದೂರವಾಗಿಟ್ಟು ಬಿಜೆಪಿಯ (BJP) ತತ್ವ-ಸಿದ್ಧಾಂತವನ್ನು ಬದಿಗೊತ್ತಿ ಮತ ನೀಡಿದ ಮತದಾರರಿಗೆ (Voter’s) ಇಲ್ಲಿಯವರೆಗೂ ಕನಿಷ್ಟ ಅಭಿನಂದನೆಯನ್ನೂ ಸಲ್ಲಿಸದ ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ (Kumar Bangarappa) ಬಿಜೆಪಿ ಬ್ಯಾನರ್‌ಗಳಲ್ಲಿ ಅನಿವಾರ್ಯವೇ ? ಎಂದು ಬಿಜೆಪಿ ಮುಖಂಡ ಡಾ. ಜ್ಞಾನೇಶ್ ಪ್ರಶ್ನಿಸಿದರು.


ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತಾಲ್ಲೂಕಿನ ಬಿಜೆಪಿ ಘಟಕದಲ್ಲಿ ಸಂಘಟನೆ ಕೊರತೆ ಎದುರಾಗಿದ್ದು, ಹೊಸ ನಾಯಕತ್ವದ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದಾರೆ ವಿಧಾನಸಭೆ ಚುನಾವಣೆ ನಂತರ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಪಕ್ಷದ ಚಟುವಟಿಕೆಗಳಿಂದ ದೂರವುಳಿದಿದ್ದಲ್ಲದೆ ಕ್ಷೇತ್ರದ ಕಡೆಗೂ ಮುಖಮಾಡಿಲ್ಲ ಎಂದರು.


ಕಾರ್ಯಕರ್ತರು ಅವರ ನಾಯಕ್ವದ ಮೇಲೆ ಇಟ್ಟುಕೊಂಡ ನಂಬಿಕೆ ಹುಸಿಯಾಗಿದೆ. ಅಧಿಕಾರವಿದ್ದಾಗ ಕಾರ್ಯಕರ್ತರನ್ನು ದೂರವಿಟ್ಟು ದುರಾಡಳಿತ ವರ್ತನೆ ತೋರಿ ಈಗ ಕ್ಷೇತ್ರದ ಕಡೆ ಮುಖ ಮಾಡುತ್ತಿಲ್ಲ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು, ಮುಖಂಡರುಗಳ ಸಮಸ್ಯೆಯಲ್ಲಿದ್ದಾಗ ಸೌಜನ್ಯಕ್ಕೂ ಭೇಟಿ ಮಾಡಿ ಅವರ ಕಷ್ಟ ಆಲಿಸದೆ ಬೆಂಗಳೂರಿನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.


ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ದೇಶದಾದ್ಯಂತ ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸುತ್ತಿದ್ದರೆ ಕುಮಾರ್ ಬಂಗಾರಪ್ಪ ಯಾವುದೇ ಖುಷಿ ವ್ಯಕ್ತಪಡಿಸಿಲ್ಲ. ಹಬ್ಬವೇ ಮುತಾದವುಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸುವ ಕುಮಾರ್ ಬಂಗಾರಪ್ಪ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರೂ ಸೌಜನ್ಯಕ್ಕೂ ಅಭಿನಂದನೆ ತಿಳಿಸದೆ ಇರುವುದು ಅವರ ಸಣ್ಣತನ ತೋರಿಸುತ್ತದೆ ಎಂದು ಟೀಕಿಸಿದರು.


ಕ್ಷೇತ್ರದ ಸಮಸ್ಯೆ ಬಗ್ಗೆ ಮುಖಂಡರು ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಯಾವುದಕ್ಕೂ ಸ್ಪಂದಿಸದ ಕುಮಾರ್ ಬಂಗಾರಪ್ಪ ಅವರ ಭಾವಚಿತ್ರವನ್ನು ಪಕ್ಷದ ಬ್ಯಾನರ್ ಗಳಲ್ಲಿ ಹಾಕುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ ಅವರು ಕುಮಾರ್ ಬಂಗಾರಪ್ಪ ಪಕ್ಷಕ್ಕೆ ಅಷ್ಟು ಅನಿವಾರ್ಯವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುರೇಂದ್ರ ಮಾವಲಿ, ಶಿವಾನಂದ ಇದ್ದರು.

Leave A Reply

Your email address will not be published.

error: Content is protected !!