ಶಿವಮೊಗ್ಗ ; ಜಿಲ್ಲೆಯ ವಕ್ಫ್ ಬೋರ್ಡ್ ಅಡಿಯಲ್ಲಿ ಸ್ಥಳೀಯ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಪ್ರಯುಕ್ತ ಅನುಕೂಲವಾಗಲೆಂದು ನಿರ್ಮಾಣಗೊಂಡಿರುವ ಮುಸ್ಲಿಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಇಲ್ಲದ ಊಟ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿದ್ದು ಇದನ್ನೆಲ್ಲಾ ಬಗೆಹರಿಸಿ ಮತ್ತು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮದ್ ಖಾನ್’ರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಮಂಗಳವಾರ ನಗರಕ್ಕೆ ಆಗಮಿಸಿದ ಸಚಿವರನ್ನು ಭೇಟಿಯಾದ ಹಾಸ್ಟೆಲ್ ನ ವಿದ್ಯಾರ್ಥಿಗಳು, ಮುಸ್ಲಿಂ ಹಾಸ್ಟೆಲ್ ನಲ್ಲಿ ಪೌಷ್ಟಿಕಾಂಶವಿಲ್ಲದ ಆಹಾರವನ್ನು ನೀಡಲಾಗುತ್ತಿದೆ. ಹಾಸ್ಟೆಲ್ ನಲ್ಲಿ ಸಿಬ್ಬಂದಿಗಳ ಕೊರತೆ, ಕುಡಿಯುವ ಸ್ವಚ್ಛ ನೀರಿನ ಸಮಸ್ಯೆ ಜೊತೆಗೆ ಶೌಚಾಲಯ ಮತ್ತು ಸ್ನಾನಗೃಹಗಳ ಸ್ವಚ್ಛತೆ ಮತ್ತು ನಿರ್ವಹಣೆ ವಿಚಾರವಾಗಿ ಸ್ಥಳೀಯ ವಕ್ಫ್ ಅಧಿಕಾರಿಗಳಿಗೆ ಮೌಖಿಕವಾಗಿ ಅನೇಕ ದೂರುಗಳನ್ನು ನೀಡಿದರೂ ಗಮನ ಹರಿಸದ ಅಧಿಕಾರಿಗಳ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದು ದೂರಿದರು.
ವಾರ್ಡನ್ ವರ್ತನೆ ಸರಿಯಿಲ್ಲ :
ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ವಾರ್ಡನ್ ಸ್ಪಂದಿಸುವುದಿಲ್ಲ. ಹಣದ ಆಸೆಗೆ ವಿದ್ಯಾರ್ಥಿಗಲ್ಲದ ವ್ಯಕ್ತಿಗಳಿಗೆ ರೂಂಗಳನ್ನು ಬಾಡಿಗೆಗೆ ನೀಡಿ ಹಣ ತಮ್ಮ ಜೇಬಿಗೆ ಹಾಕಿಕೊಂಡು ಸಮುದಾಯಕ್ಕೆ, ಇಲಾಖೆಗೆ ಮೋಸ ಮಾಡುತ್ತಾರೆ. ಬೇಕಾಬಿಟ್ಟಿಯಾಗಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗುತ್ತೆ ಸರಿಯಾಗಿ ರಸೀದಿಗಳನ್ನು ನೀಡುವುದಿಲ್ಲ ಮೊದಲು ವಾರ್ಡನ್ ಬದಲಾವಣೆಯಾಗಬೇಕು.
– ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿ
ವಿದ್ಯಾರ್ಥಿಗಳ ಮನವಿಯನ್ನು ಸ್ವೀಕರಿಸಿದ ಸಚಿವರು ಆದಷ್ಟು ಬೇಗ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದರು.

ಎಂ.ಎಲ್.ಸಿ ಬಲ್ಕಿಶ್ ಬಾನು, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಶಫಿವುಲ್ಲಾ, ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಕುಮಾರ್, ಯೋಗೇಶ್ ಮತ್ತಿತರರು ಇದ್ದರು.