ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳು ಅಂದರ್
ಕೊಪ್ಪ : ಕೆಲಸದ ಬಾಕಿ ಹಣ ಕೇಳಿದ್ದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹೇಶ್, ವಿಠಲ್, ಸಿರಿಲ್, ಸುನಿಲ್, ಮಂಜು ಬಂಧಿತ ಆರೋಪಿಗಳು. ಕಳೆದ ಫೆ.2ರಂದು ಸತೀಶ್ ಎಂಬಾತನನ್ನು ಕೊಪ್ಪ ಪಟ್ಟಣ ಸಮೀಪದಲ್ಲಿರುವ ಅಕೇಶಿಯಾ ಪ್ಲಾಂಟೇಷನ್ ಒಂದಕ್ಕೆ ಕರೆತಂದಿದ್ದ ಆರೋಪಿಗಳು ಆತನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಲ್ಲದೇ ಜೀವಬೆದರಿಕೆಯನ್ನೂ ಹಾಕಿದ್ದರು ಎಂದು ಹೇಳಲಾಗಿದೆ.
ಸತೀಶ್ ಬೆಂಗಳೂರಿನಲ್ಲಿ ಆರೋಪಿ ಮಂಜು ಎಂಬಾತನ ಸಹೋದರ ಹೊಟೇಲ್ನಲ್ಲಿ ಕೆಲಸಕ್ಕಿದ್ದ. ನಂತರ ಮನಸ್ತಾಪದಿಂದ ಕೆಲಸ ಬಿಟ್ಟು ಬಂದಿದ್ದ. ನಂತರ ಹೊಟೇಲ್ ಮಾಲೀಕನಿಗೆ ಕರೆ ಮಾಡಿ ಬಾಕಿ ಸಂಬಳ ಕೊಡುವಂತೆ ಪದೇ ಪದೇ ಒತ್ತಡ ಹಾಕುತ್ತಿದ್ದ ಎನ್ನಲಾಗಿದ್ದು, ಈ ವಿಚಾರವನ್ನು ಹೊಟೇಲ್ ಮಾಲೀಕ ತನ್ನ ಸಹೋದರನ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.
ಫೆ.2ರಂದು ಹೊಟೇಲ್ ಮಾಲೀಕನ ಸಹೋದರ ಮಂಜು, ಬಾಕಿ ವೇತನ ನೀಡುವುದಾಗಿ ಹೇಳಿ ಸತೀಶ್ನನ್ನು ಕೊಪ್ಪ ಪಟ್ಟಣಕ್ಕೆ ಕರೆಸಿಕೊಂಡಿದ್ದ. ಅಲ್ಲಿ ಸತೀಶ್ಗೆ ಮದ್ಯಪಾನ ಮಾಡಿಸಿ ಬೈಕ್ನಲ್ಲಿ ಪಟ್ಟಣದ ಹೊರವಲಯದಲ್ಲಿದ್ದ ಪ್ಲಾಂಟೇಷನ್ ಒಂದಕ್ಕೆ ಕರೆತಂದು ಹಗ್ಗದಿಂದ ಕಟ್ಟುಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಘಟನೆಯನ್ನು ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರೆಂದು ಸತೀಶ್ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾನೆ.
ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಆರೋಪಿಗಳ ಬಂಧನಕ್ಕೆ ಎಸ್ಪಿ ಡಾ.ವಿಕ್ರಮ್ ಅಮಟೆ ಪೊಲೀಸರ ತಂಡ ನೇಮಿಸಿದ್ದರು.