ಮನೆ ಯಜಮಾನನ ಶವಸಂಸ್ಕಾರ ನಡೆಸಿ ವಾಪಾಸ್ ಆಗುವಷ್ಟರಲ್ಲಿ ನಡೆದಿತ್ತು ಘೋರ ದುರಂತ ; ಏನದು ?
ಅಜ್ಜಂಪುರ : ವಿಧಿಯ ಕ್ರೂರತ್ವಕ್ಕೆ ಕಾಫಿನಾಡ ಈ ಘಟನೆ ಜೀವಂತ ಸಾಕ್ಷಿ. ತಾಲೂಕಿನ ಬಾಣೂರು ಗ್ರಾಮದಲ್ಲಿ ಹನುಮಂತಪ್ಪ ಎಂಬುವವರು ಮರಣ ಹೊಂದಿದ್ದರು. ಮನೆಯವರು ಅವರ ಅಂತ್ಯಸಂಸ್ಕಾರಕ್ಕೆ ಸ್ಮಶಾನಕ್ಕೆ ತೆರಳಿದ್ದಾಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮನೆ ಸುಟ್ಟು ಕರಕಲಾಗಿದೆ. ಅಲ್ಲದೇ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಜೀವ ದಹನವಾಗಿದೆ.
ಮನೆಯಲ್ಲಿದ್ದ ಗ್ಯಾಸ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿದ್ದರಿಂದ ಅನಾಹುತ ಸಂಭವಿಸಿದೆ. ಸಿಲಿಂಡರ್ ಬ್ಲಾಸ್ಟ್ ಆಗಿ ಮನೆ, ಮನೆ ಸಾಮಾನು, ಕೊಟ್ಟಿಗೆ, ಹಸು, ಕುರಿ ಎಲ್ಲವೂ ಬೆಂಕಿಗಾಹುತಿಯಾಗಿದೆ.
ಮೊದಲೇ ದುಃಖದಲ್ಲಿದ್ದ ಕುಟುಂಬಸ್ಥರಿಗೆ ಈ ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರೂ ಅದಾಗಲೇ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿತ್ತು.
ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ಯಾಸ್ ಸಿಲಿಂಡರ್ ಸೋರಿಕೆಗೆ ಕಾರಣ ಏನೆಂದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.