Charmadi Ghat | ಧಾರಾಕಾರ ಮಳೆಗೆ ರಸ್ತೆಗೆ ಬಿದ್ದ ಮರ ; ಸಂಚಾರ ಅಸ್ತವ್ಯಸ್ಥ

0 2,412

ಮೂಡಿಗೆರೆ: ಚಾರ್ಮಾಡಿ ಘಾಟಿಯ 8ನೇ ತಿರುವಿನಲ್ಲಿ ಶನಿವಾರ ರಸ್ತೆಗೆ ಬೃಹತ್ ಮರ ಬಿದ್ದು ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ ಗೊಂಡಿತು.

ಸಮಾಜ ಸೇವಕ ಹಸನಬ್ಬ ಚಾರ್ಮಾಡಿ ಹಾಗೂ ಮೊಹಮ್ಮದ್ ಆರೀಫ್ ತಂಡ ಹಾಗೂ ಅಲ್ಲಿಯ ಸ್ಥಳೀಯರು ಸೇರಿ ಯಂತ್ರದಿಂದ ಮರವನ್ನು ತೆರವುಗೊಳಿಸಿದ್ದಾರೆ. ಸಂಜೆ 5.30ಕ್ಕೆ ಸಂಚಾರ ಮುಕ್ತವಾಯಿತು. ಆದರೆ ಘಾಟ್ ನಲ್ಲಿ ಅಪಾಯದ ಕುಸಿದ ಎರಡು ಕಡೆಯ ತಡೆಗೋಡೆಗೆ ಎಚ್ಚರಿಕೆ ಫಲಕ ಹಾಕಿ ಅಪಾಯದ ಜಾಗೃತಿ ಮೂಡಿಸಬೇಕಿದೆ.

ಹೇಮಾವತಿ ನದಿಯಲ್ಲಿ ನೀರಿನ ಹರಿವು ಮೊನ್ನೆಗಿಂತ ಏರಿಕೆಯಾಗಿದೆ. ಬಾಳೂರು ಹೋಬಳಿಯ ಮೇಗೂರು ರಾಮಯ್ಯ ಎಂಬುವರ ಮನೆ ಮಳೆಗೆ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ ಅತಿಯಾದ ಮಳೆಯಿಂದ ವಿದ್ಯುತ್ ಕೂಡ ಕಣ್ಣಾಮುಚ್ಚಾಲೆ ಆಡುತ್ತಿದೆ. ಹೀಗೆ ಮಳೆ ಮುಂದುವರೆದರೆ ಅಪಾಯ ಸಂಭವಿಸುವ ಸಾಧ್ಯತೆಗಳು ದಟ್ಟವಾಗಿವೆ.

ಕಳೆದ ಮೂರು ದಿನಗಳಿಂದ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಮಳೆಯ ಅರ್ಭಟ ಹೆಚ್ಚಾಗಿದ್ದು ರೈತರ ಕೃಷಿ ಚಟುವಟಿಕೆಗೆ ಅಡಚಣೆಯಾಗಿದೆ. ಗುರುವಾರದಿಂದ ಶನಿವಾರದ ವರೆಗೆ 164.2 ಮಿ.ಮೀ (16.4ಸೆಂ.ಮೀ) ಮಳೆ ದಾಖಲಾಗಿದ್ದು ಶನಿವಾರವೂ ಧಾರಾಕಾರ ಮಳೆ ಮುಂದುವರೆದಿದ್ದು ರೈತರ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ.

ಕಾಫಿ ಬೆಳೆ ಉದುರುವಿಕೆ ಆರಂಭವಾಗಿದೆ. ಕಾಫಿನಾಡು ಮಳೆಯಿಂದ ಸಂಪೂರ್ಣ ಸ್ಥಬ್ದವಾಗಿದೆ. ಕಾವೇರಿ ಹೋರಾಟದ ಬೆನ್ನಲ್ಲೇ ಮಲೆನಾಡಿನಲ್ಲಿ ವರುಣ ಅರ್ಭಟಿಸುತ್ತಿದ್ದಾನೆ. ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಕವಿದ ವಾತಾವರಣ ಸೃಷ್ಟಿಯಾಗಿದ್ದು ಅಣ್ಣಪ್ಪ ಸ್ವಾಮಿ ದೇವಸ್ಥಾನದ ಕೆಲವೇ ಅಂತರದಲ್ಲಿ ತಡೆಗೋಡೆ ಕುಸಿದಿದ್ದು ಮಳೆ ಹೆಚ್ಚಾದರೆ ಕುಸಿಯುವ ಅಪಾಯವೂ ಇದೆ. ಇಲ್ಲಿ ರಸ್ತೆ ಪಾಯ ಹಾಕಲು ಪ್ರಪಾತ ಆದುದರಿಂದ ತೊಂದರೆ ಉಂಟಾಗಿದೆ.ಬಲಭಾಗದಲ್ಲಿ ಮುಗಿಲೆತ್ತರದ ಬಂಡೆ ಆಕಾಶಕ್ಕೆ ಮುಖ ಮಾಡಿರುವುದರಿಂದ ಕಲ್ಲು ಬಂಡೆ ಒಡೆಯುವುದು ಕಷ್ಟವಾಗಿದೆ. ಇನ್ನು ಸೋಮನಕಾಡು ಕಣಿವೆ ದೃಶ್ಯ ಪ್ರಫಾತದ ಬಳಿ ಮೊನ್ನೆ ನೀರು ಸಾಗಿಸುತ್ತಿದ್ದ ಲಾರಿ ಬಿದ್ದ ಜಾಗದಲ್ಲಿ ಪೊಲೀಸರು ಬ್ಯಾರೀಕೇಡ್ ಹಾಕಿದ್ದು ಅವು ಕೂಡ ಗಾಳಿಗೆ ಬಿದ್ದು ಹೋಗಿದ್ದು ಇನ್ನು ಸ್ವಲ್ಪ ಗಾಳಿ ಬೀಸಿದರೆ ಬ್ಯಾರಿಕೇಡ್ ಕೂಡ ಪ್ರಪಾತಕ್ಕೆ ಬೀಳುವ ಸಂಭವವಿದೆ.

ಮಳೆಯ ನಡುವೆಯೇ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಮಳೆಯ ಆರ್ಭಟಕ್ಕೆ ಪ್ರವಾಸಿಗರು ಚಾರ್ಮಾಡಿ ಘಾಟಿಯ ಜಲಪಾತಗಳಿಗೆ ಮೈಯೊಡ್ಡಿ ಸಂಭ್ರಮಿಸುತ್ತಿದ್ದಾರೆ. ಇನ್ನು ಜಲಪಾತಗಳಂತೂ ಭೋರ್ಗರೆದು ಧುಮುಕಿ ಜನರ ಕಣ್ಮನ ಸೆಳೆಯುತ್ತಿವೆ. ಚಾರ್ಮಾಡಿ ಘಾಟಿಯಲ್ಲಿ ಒಂದು ಮರ ಎರಡು ದಿನದ ಹಿಂದೆ ಬಿದ್ದಿದ್ದು ಅದನ್ನು ಯಂತ್ರದಿಂದ ಕಡಿದು ತೆರವುಗೊಳಿಸಲಾಗಿದೆ.

Leave A Reply

Your email address will not be published.

error: Content is protected !!