ಆಂಬುಲೆನ್ಸ್’ನಲ್ಲೇ ದೇವಸ್ಥಾನಗಳಿಗೆ ಟ್ರಿಪ್ ಹೊರಟ್ಟಿದ್ದ ಗೆಳೆಯರ ತಂಡ ; ಚಾಲಕನಿಗೆ ಬಿತ್ತು ದಂಡ !
ಮೂಡಿಗೆರೆ : ಆಂಬುಲೆನ್ಸ್ ಇರುವುದು ತುರ್ತು ಸಂದರ್ಭದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ವೇಗವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕೆಲಸಕ್ಕೆ. ಆದರೆ ಇಲ್ಲಿ ಓರ್ವ ಚಾಲಕ ತನ್ನ ಆರು ಮಂದಿ ಗೆಳೆಯರನ್ನು ಆಂಬುಲೆನ್ಸ್ ನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ದೇವಸ್ಥಾನಕ್ಕೆ ಟ್ರಿಪ್ ಹೊರಟಿದ್ದರು. ಆದರೆ ಕೊಟ್ಟಿಗೆಹಾರ ಮಾರ್ಗವಾಗಿ ಉಜಿರೆ ಬರುತ್ತಿದ್ದಂತೆ ಬೆಳ್ತಂಗಡಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ಘಾಟ್ ಮೂಲಕ ಉಜಿರೆ ಕಡೆ ಹೋಗುವಾಗ ಕೊಟ್ಟಿಗೆಹಾರದಲ್ಲಿ ರಸ್ತೆ ಉದ್ದಕ್ಕೂ ಕೇಕೆ ಹಾಕುತ್ತಾ ಹೋಗುತ್ತಿದ್ದು ಇದನ್ನು ಗಮನಿಸಿದ ಸ್ಥಳೀಯರು ಬೆಳ್ತಂಗಡಿ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆಂಬುಲೆನ್ಸ್ ಅನ್ನು ತಡೆದು ವಿಚಾರಣೆ ಮಾಡಿದಾಗ ಗೆಳೆಯರು ಆಂಬುಲೆನ್ಸ್ ನಲ್ಲಿ ಪ್ರವಾಸ ಬಂದಿರುವುದು ತಿಳಿದಿದೆ.
ಆಂಬುಲೆನ್ಸ್ ನಲ್ಲಿ ಒಟ್ಟು ಏಳು ಜನ ಬರುತ್ತಿರುವ ಮಾಹಿತಿ ಪಡೆದ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಅವರು, ತಕ್ಷಣ ತಮ್ಮ ಠಾಣೆಯ ಸಿಬ್ಬಂದಿ ಸುನಿಲ್ ನನ್ನು ಉಜಿರೆ ಬೀಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಾಹಿತಿ ನೀಡಿ ವಾಹನ ನಿಲ್ಲಿಸಿ ಠಾಣೆಗೆ ತರಲು ಸೂಚಿಸಿದ್ದಾರೆ ಅದರಂತೆ ಆಂಬುಲೆನ್ಸ್ ಠಾಣೆಗೆ ತಂದು ವಿಚಾರಿಸಿದಾಗ ಆಂಬುಲೆನ್ಸ್ ನಲ್ಲಿ ಗೆಳೆಯರ ಜೊತೆ ದೇವಸ್ಥಾನ ಟ್ರಿಪ್ ಬಗ್ಗೆ ಹೇಳಿದ್ದಾರೆ. ಸಂಚಾರಿ ಪೊಲೀಸರು ಚಾಲಕನಿಗೆ 4500 ರೂ. ದಂಡ ಹಾಕಿದ್ದಾರೆ.