ಕುವೆಂಪು ವಿವಿ ಆಡಳಿತ ಸಂಪೂರ್ಣ ಕುಸಿದಿದ್ದು, ಗೊಂದಲದ ಗೂಡಾಗಿದೆ ; ಆಯನೂರು ಮಂಜುನಾಥ್ ಆರೋಪ

0 269

ಶಿವಮೊಗ್ಗ : ಕುವೆಂಪು ವಿವಿಯ ಆಡಳಿತ ಸಂಪೂರ್ಣ ಕುಸಿದಿದ್ದು, ಗೊಂದಲದ ಗೂಡಾಗಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುವೆಂಪು ವಿವಿಯ ಆಡಳಿತ ಕುಸಿದಿದೆ. ಇದರ ಪರಿಣಾಮವಾಗಿ ವಿವಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ವಿದ್ಯಾರ್ಥಿಗಳು ಕೂಡ ಆತಂಕದಲ್ಲಿದ್ದಾರೆ. ಒಂದು ಕಡೆ ಪಾಠಗಳು ನಡೆಯುತ್ತಿಲ್ಲ. ಅಧ್ಯಾಪಕರುಗಳು ಇಲ್ಲ. ಪರೀಕ್ಷೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ವಿದ್ಯಾರ್ಥಿ ವೇತನಕ್ಕೆ ತೊಂದರೆಯಾಗಿದೆ. ಹೊಸ ವಿಷಯಗಳಿಗೆ ಯಾರು ಪಾಠ ಮಾಡಬೇಕು ಎಂಬುವುದೇ ಗೊತ್ತಿಲ್ಲ. ಮುಖ್ಯವಾಗಿ ವಿವಿಗೆ ಖಾಯಂ ಕುಲಪತಿ ಹಾಗೂ ಕುಲಸಚಿವರು (ಶೈಕ್ಷಣಿಕ) ನೇಮಕವೇ ಆಗಿಲ್ಲ ಎಂದು ಆರೋಪಿಸಿದರು.


ಈ ಎಲ್ಲಾ ಸಮಸ್ಯೆಗಳನ್ನು ಇಟ್ಟುಕೊಂಡು ನಾಳೆ ಅಥವಾ ನಾಡಿದ್ದು ಸುಮಾರು 15 ಕಾಲೇಜುಗಳ ಪ್ರಾಂಶುಪಾಲರ ಜೊತೆಗೂಡಿ ಉನ್ನತ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಅವರನ್ನು ಭೇಟಿ ಮಾಡಿ, ಸಮಸ್ಯೆಗಳನ್ನು ಗಮನಕ್ಕೆ ತರಲಾಗುವುದು ಮತ್ತು ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಮಾಡಲಾಗುವುದು ಎಂದರು.


ಜ.24ಕ್ಕೆ ಸೆಮಿಸ್ಟರ್‌ಗಳು ಮುಕ್ತಾಯವಾಗಬೇಕಿತ್ತು. 25ಕ್ಕೆ ಪರೀಕ್ಷೆಗಳು ಆರಂಭವಾಗಬೇಕಿತ್ತು. ಆದರೆ, ಪರೀಕ್ಷಾ ದಿನಾಂಕಗಳನ್ನು ಕಾರಣಗಳು ಇಲ್ಲದೆ ಮುಂದೂಡಲಾಗಿದೆ. ತಮ್ಮ ವೈಫಲ್ಯತೆ ಮುಚ್ಚಿಕೊಳ್ಳಲು ಪರೀಕ್ಷೆಗಳನ್ನು ಮುಂದೂಡಿದರೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಗತಿಯೇನು?. ವೇಳಪಟ್ಟಿಯನ್ನು ಮುಂದೂಡುತ್ತಾ ಹೋದರೆ ಮೌಲ್ಯಮಾಪನ ತರಗತಿಗಳ ಆರಂಭ, ಪ್ರವೇಶ ಪ್ರಕ್ರಿಯೆ ಇವೆಲ್ಲವೂ ಗೊಂದಲದ ಗೂಡಾಗಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದರು.


ಎನ್‌ಇಪಿ ಅಂಕಪಟ್ಟಿ ಕೊಟ್ಟಿಲ್ಲ, ಆನ್‌ಲೈನ್ ಅಂಕಪಟ್ಟಿಗಳು ದೋಷಪೂರಿತವಾಗಿವೆ. ಅಂಕಪಟ್ಟಿಯಲ್ಲಿ ಎನ್‌ಎಸ್‌ಎಸ್ ಕ್ರೀಡೆ ಮತ್ತು ಇತರೆ ವಿಷಯಗಳನ್ನು ನಮೂದಿಸಿರುವುದಿಲ್ಲ. ಇದರಿಂದ ಎಸ್‌ಎಸ್‌ಪಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಕಷ್ಟವಾಗಬಹುದು. ಪ್ರಾಂಶುಪಾಲರುಗಳು ಅಸಹಾಯಕರಾಗಿದ್ದಾರೆ. ಪಠ್ಯ ಚಟುವಟಿಕೆಗಳೇ ಕುಂಠಿತಗೊಂಡಿವೆ. ವಿವಿಯಿಂದ ಯಾವುದೇ ಕಾಲೇಜಿನ ಜೊತೆಯ ಸಂವಹನವೇ ಇರುವುದಿಲ್ಲ. ಜೊತೆಗೆ ಜಿ.ಪಂ. ಸಿಇಓ ಅವರೇ ಕುಲಸಚಿವರಾಗಿರುವುದರಿಂದ ಅವರಿಗೆ ಕಾರ್ಯದ ಒತ್ತಡವಿರುತ್ತದೆ. ಹಾಗಾಗಿ ಅನಗತ್ಯ ವಿಳಂಬವಾಗುತ್ತದೆ ಎಂದರು.


ಹೀಗೆ ಹಲವು ಸಮಸ್ಯೆಗಳು ಕುವೆಂಪು ವಿವಿಯಲ್ಲಿದೆ. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ವಿದ್ಯಾರ್ಥಿಗಳ ಹಿತವನ್ನು ಕಾಯಬೇಕಾಗಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಐಡಿಯಲ್ ಗೋಪಿ, ಮುಕ್ತಿಯಾರ್‌ಅಹಮದ್, ಸೈಯ್ಯದ್‌ವಾಹಿದ್‌ಅಡ್ಡು, ಸಂತೋಷ್ ಆಯನೂರು ಇದ್ದರು.

Leave A Reply

Your email address will not be published.

error: Content is protected !!